Featured

ಅಗ್ನಿಪಥ್ ಯೋಜನೆ ಎಂದರೇನು? ಅದಕ್ಕೆ ವಿರೋಧ ಬರುತ್ತಿರುವುದು ಏಕೆ? Vishwanews24

ಅಗ್ನಿಪಥ್ ಯೋಜನೆ ಎಂದರೇನು? ಅದಕ್ಕೆ ವಿರೋಧ ಬರುತ್ತಿರುವುದು ಏಕೆ?

ಹೊಸದಿಲ್ಲಿ: ಸೇನಾ ಪಡೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಅಗ್ನಿಪಥ್ ಯೋಜನೆ ವಿರುದ್ಧ ದೇಶದ ಅನೇಕ ಭಾಗಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆದರೆ ಈ ಪ್ರತಿಭಟನೆ ಆರಂಭದಿಂದಲೇ ಹಿಂಸಾ ಸ್ವರೂಪ ಪಡೆದುಕೊಂಡಿದೆ. ‘ಅಗ್ನಿವೀರ’ರಾಗಲು ಒಪ್ಪದ ಸೇನಾ ಆಕಾಂಕ್ಷಿಗಳು ರೈಲ್ವೆ ನಿಲ್ದಾಣಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ರೈಲುಗಳಿಗೆ ಬೆಂಕಿ ಹಚ್ಚಿ ದಾಂಧಲೆ ಮಾಡುತ್ತಿದ್ದಾರೆ. ರಸ್ತೆ ಸಂಚಾರಕ್ಕೂ ಅಡ್ಡಿಪಡಿಸುತ್ತಿದ್ದಾರೆ.

ಭೂಸೇನೆ, ನೌಕಾಪಡೆ ಮತ್ತು ವಾಯು ಪಡೆಗಳಿಗೆ ಸೈನಿಕರನ್ನು ನೇಮಕ ಮಾಡಿಕೊಳ್ಳುವ ಯೋಜನೆಯನ್ನು ಮಂಗಳವಾರವಷ್ಟೇ ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಅದರ ಮರುದಿನವೇ ಪ್ರತಿಭಟನೆ ಆರಂಭವಾಗಿದೆ. ಸಾವಿರಾರು ಜನರಿಗೆ ಉದ್ಯೋಗ ನೀಡುವ ಈ ಯೋಜನೆ ವಿರುದ್ಧ ಇಷ್ಟು ತೀವ್ರವಾದ ಪ್ರತಿಭಟನೆ ನಡೆಯಲು ಕಾರಣವೇನು?

ಅಗ್ನಿಪಥ್ ಯೋಜನೆ
ಸಶಸ್ತ್ರ ಪಡೆಗಳಿಗೆ ಯುವಜನರನ್ನು ನೇಮಕಾತಿ ಮಾಡಿಕೊಳ್ಳುವ ಹೊಸ ಯೋಜನೆ ಅಗ್ನಿಪಥ್. ಇದರ ಮೂಲಕ ಸೇನೆಗೆ ಆಯ್ಕೆಯಾಗುವವರನ್ನು ‘ಅಗ್ನಿವೀರರು’ ಎಂದು ಕರೆಯಲಾಗುತ್ತದೆ. ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರ್ಯಾಣ, ಜಾರ್ಖಂಡ್, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಸಾವಿರಾರು ಆಕಾಂಕ್ಷಿಗಳು ಸೇನೆ ಸೇರಿಕೊಳ್ಳುವ ತುಡಿತ ಹೊಂದಿದ್ದಾರೆ. ಹಾಗಾದರೆ ಅವರಿಗೆ ಈ ಯೋಜನೆಯಿಂದ ಅನುಕೂಲವಾಗುತ್ತದೆಯೇ? ಸಮಸ್ಯೆ ಇರುವುದೇ ಇಲ್ಲಿ. ಸೇನೆ ಸೇರುವುದಕ್ಕಾಗಿ ವರ್ಷಗಳಿಂದ ದೈಹಿಕ ಕಸರತ್ತು ನಡೆಸುತ್ತಿರುವ ಆಕಾಂಕ್ಷಿಗಳು ‘ಅಗ್ನಿವೀರ’ರಾಗಲು ಬಯಸುತ್ತಿಲ್ಲ. ಇದಕ್ಕೆ ಕಾರಣ ಈ ಯೋಜನೆಯ ಇತಿಮಿತಿ.

ಸೇನೆಯಲ್ಲಿ ಯುವ ಹಾಗೂ ಉತ್ಸಾಹಿ ತರುಣರನ್ನು ಸೇರಿಸಿಕೊಳ್ಳುವುದು ಮತ್ತು ಅನುಭವಿಗಳು ಹಾಗೂ ಹೊಸ ಉತ್ಸಾಹಿಗಳ ಸಂಯೋಜನೆಯಲ್ಲಿ ಸೇನೆಯನ್ನು ಬಲಪಡಿಸುವುದು ಈ ಯೋಜನೆಯ ಉದ್ದೇಶಗಳಲ್ಲಿ ಒಂದು. ಜತೆಗೆ ಸೇನೆಯಲ್ಲಿ ಪೂರ್ಣಾವಧಿ ಸೇವೆ ಸಲ್ಲಿಸಿದವರಿಗೆ ನೀಡಬೇಕಾದ ಪ್ಯಾಕೇಜ್, ಪಿಂಚಣಿ ಮುಂತಾದ ಸೌಲಭ್ಯಗಳಲ್ಲಿನ ಮೊತ್ತವನ್ನು ಉಳಿಸಲು ಇದು ನೆರವಾಗುತ್ತದೆ ಎಂಬ ಲೆಕ್ಕಾಚಾರವೂ ಇದೆ.

ಈ ಯೋಜನೆಯಡಿ 17.5-21 ವರ್ಷದ ಒಳಗಿನ ಯುವಕರನ್ನು ನೇರವಾಗಿ ಶಿಕ್ಷಣ ಸಂಸ್ಥೆಗಳು ಅಥವಾ ನೇಮಕಾತಿ ಸಮಾವೇಶಗಳ ಮೂಲಕ ಸೇನೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಮುಂದಿನ 90 ದಿನಗಳಲ್ಲಿ 45 ಸಾವಿರಕ್ಕೂ ಹೆಚ್ಚು ಯುವಕರ ನೇಮಕಾತಿ ನಡೆಸುವುದು ಇದರ ಗುರಿ. ಹೀಗೆ ಆಯ್ಕೆಯಾದ ಅಗ್ನಿವೀರರ ಸೇವೆಯ ಅವಧಿ ನಾಲ್ಕು ವರ್ಷ ಮಾತ್ರ. ಅದರಲ್ಲಿ ಆರು ತಿಂಗಳು ಕಠಿಣ ಹಾಗೂ ನಿರಂತರ ತರಬೇತಿ ನಡೆಯುತ್ತದೆ. ಹೀಗಾಗಿ 3.5 ವರ್ಷ ಸೇವೆ ಸಲ್ಲಿಸಬಹುದು. ನಾಲ್ಕು ವರ್ಷದ ನಂತರ ನೇಮಕಗೊಂಡವರಲ್ಲಿ ಶೇ 25ರಷ್ಟು ಮಂದಿ ಅತ್ಯುತ್ತಮ ಯೋಧರನ್ನು ಮಾತ್ರ ಆಯ್ಕೆ ಮಾಡಿ 15 ವರ್ಷಗಳ ಪೂರ್ಣಾವಧಿ ಸೇವೆಗೆ ಉಳಿಸಿಕೊಳ್ಳಲಾಗುತ್ತದೆ. ಉಳಿದವರು ಸೇವೆಯಿಂದ ನಿವೃತ್ತರಾಗುತ್ತಾರೆ.

ಹೀಗೆ ಆಯ್ಕೆಯಾಗುವ ಅಗ್ನಿವೀರರಿಗೆ ತಿಂಗಳಿಗೆ 30,000-40,000 ರೂವರೆಗಿನ ಆಕರ್ಷಕ ಭತ್ಯೆ ಸಿಗುತ್ತದೆ. ಇದರಲ್ಲಿ ಶೇ 30ರಷ್ಟು ಭಾಗವನ್ನು ಕಾರ್ಪಸ್ ಫಂಡ್‌ಗಾಗಿ ಮೀಸಲಿಡಲಾಗುತ್ತದೆ. ಸರ್ಕಾರ ಕೂಡ ಅಷ್ಟೇ ಪ್ರಮಾಣವನ್ನು ಹಾಕುತ್ತದೆ. ಅವರ ನಿವೃತ್ತಿ ಸಂದರ್ಭದಲ್ಲಿ ಸುಮಾರು 11 ಲಕ್ಷ ರೂ ಸಿಗುತ್ತದೆ. ಇದಕ್ಕೆ ತೆರಿಗೆ ಇರುವುದಿಲ್ಲ. ನಾಲ್ಕು ವರ್ಷಗಳಿಗೆ 48 ಲಕ್ಷ ರೂ ಜೀವ ವಿಮೆ ಸೌಲಭ್ಯ ಇರುತ್ತದೆ. ಆದರೆ ನಾಲ್ಕು ವರ್ಷಗಳ ಅವಧಿಯು ನಿವೃತ್ತಿ ನಂತರದ ಸವಲತ್ತುಗಳಿಗೆ ಪರಿಗಣಿತವಾಗುವುದಿಲ್ಲ.

ಪ್ರತಿಭಟನೆ ಏಕೆ?
ನಿರುದ್ಯೋಗ, ಬಡತನ, ಶಿಕ್ಷಣದ ಕೊರತೆ ಮುಂತಾದ ಸಮಸ್ಯೆಗಳು ತೀವ್ರವಾಗಿರುವ ರಾಜ್ಯಗಳಲ್ಲಿ ಸೇನೆಯಲ್ಲಿ ಸೇರಿಕೊಳ್ಳುವುದು ಸಿಗುವ ಅಪೂರ್ವ ಅವಕಾಶಗಳಲ್ಲಿ ಒಂದು. ಇದಕ್ಕಾಗಿ ಸಾವಿರಾರು ಮಂದಿ ಕನಸು ಕಟ್ಟಿಕೊಂಡಿದ್ದಾರೆ. ಅಷ್ಟೇ ಅಲ್ಲ, ದೈಹಿಕವಾಗಿ ಸದೃಢರಾಗಿರುವಂತೆ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಅಗ್ನಿಪಥ್ ಯೋಜನೆಯಡಿ ಆಯ್ಕೆಯಾದರೆ, ಅವರ ಇಷ್ಟು ವರ್ಷದ ಶ್ರಮ ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತದೆ. ಜತೆಗೆ ಅವರಿಗೆ ಉದ್ಯೋಗದ ಭದ್ರತೆ ಸಿಗುವುದಿಲ್ಲ. ನಾಲ್ಕು ವರ್ಷಗಳ ಬಳಿಕ ಜೀವನ ಕಳೆಯುವುದು ಹೇಗೆ? ಓದುವ ವಯಸ್ಸು ಬಹುತೇಕ ಕಳೆದಿರುತ್ತದೆ. ಕುಟುಂಬಕ್ಕೆ ಆಧಾರ ಸ್ತಂಭವಾಗುವ ವಯಸ್ಸು ಅದು. ಅತ್ತ ಹೆಚ್ಚು ಓದದ ಕಾರಣ ಬೇರೆ ಕಡೆ ಕೆಲಸವೂ ಸಿಗುವುದಿಲ್ಲ. ನಾಲ್ಕು ವರ್ಷದ ಬಳಿಕ ನಡುನೀರಿನಲ್ಲಿ ಕೈಬಿಡುವುದು ಅಮಾನವೀಯ. ಹೀಗಾಗಿ ನಮ್ಮನ್ನು ಪೂರ್ಣಾವಧಿ ನೌಕರಿಗೆ ಪರಿಗಣಿಸಿ ಎನ್ನುವುದು ಅವರ ಬೇಡಿಕೆ.

ಈ ಮುಂದೆ ಹೇಗೆ ಸೇನಾ ನೇಮಕಾತಿ ಮಾಡಲಾಗುತ್ತಿತ್ತೋ ಅದೇ ರೀತಿ ಪ್ರಕ್ರಿಯೆ ನಡೆಸಬೇಕು. ಟೂರ್ ಆಫ್ ಡ್ಯೂಟಿ (ಟಿಒಡಿ) ವ್ಯವಸ್ಥೆ ಮತ್ತೆ ಬರಬೇಕು ಹಾಗೂ ಆದಷ್ಟು ಬೇಗನೆ ಪರೀಕ್ಷೆಗಳು ನಡೆಯಬೇಕು. ಯಾರೂ ಕೂಡ ಕೇವಲ ನಾಲ್ಕು ವರ್ಷಗಳಿಗಾಗಿ ಸೇನೆಗೆ ಸೇರುವುದಿಲ್ಲ ಎನ್ನುವುದು ಪ್ರತಿಭಟನಾಕಾರರ ಆಗ್ರಹ.

“ನಾಲ್ಕು ವರ್ಷ ಕೆಲಸ ಮಾಡಿದ ಬಳಿಕ ನಾವು ಎಲ್ಲಿಗೆ ಹೋಗಬೇಕು? ಸೇನೆಯ ನಾಲ್ಕು ವರ್ಷದ ಬಳಿಕ ನಾವು ನಿರ್ಗತಿಕರಾಗುತ್ತೇವೆ. ಸೇನೆಗೆ ಸೇರಿಬೇಕೆಂದು ಸಾಕಷ್ಟು ಕಷ್ಟಪಟ್ಟಿದ್ದೇವೆ. ತರಬೇತಿ ಮತ್ತು ರಜೆಗಳ ಸಹಿತ ನಾಲ್ಕು ವರ್ಷದ ಸೇವೆ ಎಂದರೆ ಹೇಗೆ ನಡೆಸಲು ಸಾಧ್ಯ? ಕೇವಲ ಮೂರು ವರ್ಷದಲ್ಲಿ ತರಬೇತಿಯೊಂದಿಗೆ ದೇಶ ರಕ್ಷಣೆ ಮಾಡುವುದು ಸಾಧ್ಯವೇ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಯೋಜನೆಗೆ ಸೇನಾ ಆಕಾಂಕ್ಷಿಗಳ ಜತೆಗೆ, ಅನೇಕ ಹಿರಿಯ ಸೇನಾ ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಸೇವೆಯಲ್ಲಿರುವ ಸಿಬ್ಬಂದಿಯ ಭವಿಷ್ಯಕ್ಕೆ ಕುತ್ತು ತರುತ್ತದೆ. ವೃತ್ತಿಪರತೆಗೆ ದೊಡ್ಡ ಹೊಡೆತ ನೀಡುತ್ತದೆ. ಜತೆಗೆ ಸೇನಾ ಪಡೆಗಳ ಹೋರಾಟದ ಉತ್ಸಾಹ, ಶಕ್ತಿಯನ್ನು ಕುಂದಿಸುತ್ತದೆ. ನಾಗರಿಕ ಸಮಾಜವನ್ನು ಸೈನ್ಯೀಕರಣಕ್ಕೆ ಎಡೆ ಮಾಡಿಕೊಡುವ ಅಪಾಯವೂ ಇದೆ ಎನ್ನುವುದು ಅವರ ಆತಂಕ. ಇದನ್ನು ಆರಂಭದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಬೇಕಿತ್ತು. ಸಾಧಕ ಬಾಧಕಗಳನ್ನು ಅರಿತ ಬಳಿಕವೇ ಯೋಜನೆ ಜಾರಿಯಾಗಬೇಕು. ಆದರೆ ನೇರವಾಗಿ ಯೋಜನೆ ಅನುಷ್ಠಾನಗೊಳಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.ಪ್ರತಿ ವರ್ಷ ಸುಮಾರು 35000 ತರಬೇತಿ ಹೊಂದಿದ ಯೋಧರು ನಿರುದ್ಯೋಗಿಗಳಾದರೆ, ಸಮಾಜದ ಸೈನ್ಯೀಕರಣ ಉಂಟಾಗಬಹುದು. ವಾಸ್ತವವಾಗಿ ಒಬ್ಬ ಸಂಪೂರ್ಣ ತರಬೇತಿ ಹೊಂದಿದ ಮತ್ತು ಯುದ್ಧಕ್ಕೆ ಸನ್ನದ್ಧನಾದ ಸೈನಿಕನ ತಯಾರಿಗೆ 7-8 ವರ್ಷ ಬೇಕಾಗುತ್ತದೆ ಎನ್ನುವುದು ಅವರ ಆತಂಕ.

ಅಗ್ನಿವೀರರಿಗೆ ಸಿಗುವ ಸಂಬಳ ವಿವರ
ಮೊದಲ ವರ್ಷದಲ್ಲಿ 30,000 ಸಂಬಳ. ಕೈಗೆ ಸಿಗುವ ವೇತನ 21,000. ಕಾರ್ಪಸ್ ನಿಧಿಗೆ 9000.
ಎರಡನೇ ವರ್ಷದಲ್ಲಿ 33,000 ರೂ ವೇತನ. ಕೈಗೆ ಸಿಗುವುದು 23,100 ರೂ. ಕಾರ್ಪಸ್ ನಿಧಿಗೆ 9,900 ರೂ.
ಮೂರನೇ ವರ್ಷ 36,500 ರೂ ಸಂಬಳ. ಕೈಗೆ ಸಿಗುವ ವೇತನ 25,580 ರೂ. ಕಾರ್ಪಸ್ ನಿಧಿಗೆ 10,950 ರೂ.
ನಾಲ್ಕನೇ ವರ್ಷ 40,000 ರೂ ವೇತನ. ಕೈಗೆ ಸಿಗುವುದು 28,000 ರೂ. ಕಾರ್ಪಸ್ ನಿಧಿಗೆ 12,000 ರೂ.
ಈ ನಾಲ್ಕು ವರ್ಷಗಳಲ್ಲಿ ಕಾರ್ಪಸ್ ನಿಧಿಗೆ ಅಗ್ನಿವೀರನ ಕಡೆಯಿಂದ 5.02 ಲಕ್ಷ ಮತ್ತು ಸರ್ಕಾರದ ಕಡೆಯಿಂದ 5.02 ಲಕ್ಷ ರೂ ಜಮೆಯಾಗಿರುತ್ತದೆ. ನಿವೃತ್ತಿ ಸಂದರ್ಭದಲ್ಲಿ ಅವರಿಗೆ 11.71 ಲಕ್ಷ ರೂ ಸೇವಾ ನಿಧಿ ಪ್ಯಾಕೇಜ್ ಸಿಗುತ್ತದೆ.

Vishwa News 24

Recent Posts

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

22 hours ago

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ : ಬೆಸ್ಕಾಂ ಸ್ಪಷ್ಟನೆ – vishwanews24

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…

23 hours ago

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ – vishwanews24

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…

23 hours ago

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಆರೋಪ – vishwanews24

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಗಂಭೀರ…

23 hours ago

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ: ಸಂಸದ ಯದುವೀರ್ ಒಡೆಯರ್ ಆಕ್ಷೇಪ – vishwanews24

ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…

24 hours ago

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ – vishwanews24

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…

1 day ago