ಎಪ್ರಿಲ್ 16,1853 ರಲ್ಲಿ ಮುಂಬೈ ಮತ್ತು ಥಾಣೆ ನಡುವೆ ಮೊದಲ ಪ್ರಯಾಣ ಮಾಡಿದ ರೈಲ್ವೆ ಇಂದು ದೇಶದ ಎಲ್ಲ ಭಾಗಗಳನ್ನು ಬೆಸೆಯುವ ಪ್ರಮುಖ ಕೊಂಡಿಯಾಗಿ ಬದಲಾಗಿದೆ.
ಕೇಂದ್ರದಲ್ಲಿ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈಲ್ವೆಯ ಚಿತ್ರಣವೂ ಬದಲಾಗಿಹೋಗಿದ್ದು ಟಿಕೆಟ್ ಬುಕಿಂಗ್, ಸ್ವಚ್ಛ ಹಾಸಿಗೆಗಳು, ಶುದ್ಧ ಊಟ, ಸ್ವಚ್ಛ ನೀರು ಎಲ್ಲಾ ವ್ಯವಸ್ಥೆಯೂ ಸರಳವಾಗಿಬಿಟ್ಟಿದೆ.
ಎನ್.ಡಿ.ಎ ಸರ್ಕಾರ ಅದರಲ್ಲೂ ಸುರೇಶ್ ಪ್ರಭು ರೈಲ್ವೆ ಸಚಿವರಾದ ಮೇಲೆ ಬದಲಾವಣೆಯ ಗಾಳಿಯೇ ಬೀಸಿದೆ. ಭಾರತೀಯ ರೈಲ್ವೆ ಜನರಿಗೆ ಮತ್ತಷ್ಟು ಹತ್ತಿರವಾಗಿದೆ. ಕೇವಲ ಒಂದು ಟ್ವೀಟ್ ಮೂಲಕ ಸಮಸ್ಯೆಗೆ ಸ್ಪಂದಿಸಿದ ಅದೆಷ್ಟೋ ಉದಾಹರಣೆಗಳಿವೆ. ಉತ್ತರ ಪ್ರದೇಶದಲ್ಲಿ ನಡೆದ ರೈಲು ಅಪಘಾತಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ಸುರೇಶ್ ಪ್ರಭು ಅವರ ಕಾರ್ಯವೈಖರಿ ವಿರೋಧಿಗಳೂ ಮೆಚ್ಚಬೇಕಾಗಿತ್ತು ಅಂತಹ ಕಾರ್ಯದಕ್ಷತೆ! ಅವರ ನಂತರ ಬಂದ ಪಿಯೂಷ್ ಗೋಯೇಲ್ ರ ಬಗ್ಗೆ ಹೇಳುವುದೇ ಬೇಡ. ಅತ್ಯಂತ ಕ್ರಿಯಾಶೀಲ ಸಚಿವ ಇವರು.
ಇದೀಗ ರೈಲ್ವೇ ಇಲಾಖೆಯಲ್ಲಿ ಮಹತ್ತರವಾದ ಬದಲಾವಣೆ ಕಂಡು ಪ್ರಗತಿಯತ್ತ ಹೆಜ್ಜೆ ಹಾಕಿ ಜನಸಾಮಾನ್ಯರಲ್ಲಿ ಭರವಸೆ ಹುಟ್ಟಿಸಿದೆ. ಸುರಕ್ಷತೆಯ ಭಾವನೆ ಮೂಡಿಸಿದೆ. ರೈಲ್ವೇ ಇಲಾಖೆಗೆಂದೇ ಪ್ರತ್ಯೇಕ ಬಜೆಟ್ ಮಂಡಿಸುತ್ತಿದ್ದರೂ ಸುರಕ್ಷತೆಯ ಬಗ್ಗೆ ಅಷ್ಟು ಕಾಳಜಿ ಈ ಹಿಂದಿನ ಸರ್ಕಾರಗಳು ತೋರಿಸುತ್ತಿರಲಿಲ್ಲ ಆದರೆ ಮೋದಿ ಸರ್ಕಾರ ಜನಸಾಮಾನ್ಯರ ಜೀವನಾಡಿಯಾದ ರೈಲು ಪ್ರಯಾಣವನ್ನು ಸುಖಕರ ಮತ್ತು ಸುರಕ್ಷಿತಗೊಳಿಸಿದೆ.
ಹೌದು, 2017-18 ರ ಆರ್ಥಿಕ ವರ್ಷ ಕೊನೆಗೊಂಡ ಬೆನ್ನಲ್ಲೇ ರೈಲ್ವೇ ಇಲಾಖೆ ಅತ್ಯಂತ ಸಂತೋಷದ ಸುದ್ದಿಯೊಂದನ್ನು ಹೊರಹಾಕಿದೆ. ಸುದೀರ್ಘ 35 ವರ್ಷಗಳ ಬಳಿಕ ಎರಡಂಕೆಯ ಒಳಗೆ ಅಪಘಾತ ಪ್ರಮಾಣ ದಾಖಲಾಗಿದೆ. ಸದಾ ಒಂದಲ್ಲ ಒಂದು ಅವಘಗಡಕ್ಕೆ ಈಡಾಗುತ್ತಿದ್ದ ರೈಲು ಈಗ ತನ್ನ ಅಪಘಾತದ ಪ್ರಮಾಣವನ್ನು ತಗ್ಗಿಸಿಕೊಂಡಿದೆ. ಪ್ರತಿವರ್ಷ ನೂರಕ್ಕೂ ಮೇಲೆ ನಡೆಯುತ್ತಿದ್ದ ಅಪಘಾತ ಈ ವರ್ಷ ಗಣನೀಯ ಇಳಿಕೆ ಕಂಡಿದೆ. 2017-18 ರ ಆರ್ಥಿಕ ವರ್ಷಾಂತ್ಯಕ್ಕೆ 73 ರೈಲು ಅಪಘಾತಗಳು ದೇಶದಲ್ಲಿ ನಡೆದಿದ್ದು ಇದೇ ಮೊದಲ ಬಾರಿಗೆ ಅತೀ ಕಡಿಮೆ ಅಪಘಾತ ಸಂಭವಿಸಿದ ವರ್ಷವಾಗಿದೆ. 2016-17 ಕ್ಕೆ ಹೋಲಿಸಿದರೆ ಶೇಕಡಾ 29 ಅಪಘಾತ ಕಡಿಮೆ ಆಗಿದೆ ಅಂದರೆ 2016-17 ರಲ್ಲಿ ನಡೆದ ಒಟ್ಟು ಅಪಘಾತಗಳ ಸಂಖ್ಯೆ 104!
ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಬಿಡುಗಡೆಗೊಳಿಸಿದ ರೈಲ್ವೇ ಇಲಾಖೆಯ ಮುಖ್ಯ ಅಧಿಕಾರಿ ಅಶ್ವನಿ ಲೋಹಾನಿ ರೈಲ್ವೇಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಿರುವುದರಿಂದ ಅಪಘಾತದ ಪ್ರಮಾಣ ಕಡಿಮೆ ಆಗಿದೆ ಎಂದು ತಿಳಿಸಿದರು.