ಉಡುಪಿ: ರಾಜ್ಯದಾದ್ಯಂತ ನಿಷೇಧಿತ ಪ್ಲಾಸ್ಟಿಕ್ ಬಳಕೆ ನಿಷೇಧವಾಗಿದ್ದು, ಮುಂದೆ ಪ್ಲಾಸ್ಟಿಕ್ ಬಳಕೆ, ಸಂಗ್ರಹ, ತಯಾರಿಕೆ, ಸಾಗಾಟ, ಮಾರಾಟವನ್ನು ಮಾಡುವಂತಿಲ್ಲ. ನಿಯಮ ಉಲ್ಲಂಘಿಸಿದರೆ ದಂಡ ತೆರಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು.
ಗುರುವಾರ ನಗರಸಭೆ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ಲಾಸ್ಟಿಕ್ನಿಂದ ಸಮಸ್ಯೆಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂದು ನಿರ್ಧರಿಸಲಾಗಿದೆ. ಇದಕ್ಕೂ ಮುನ್ನ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲು ಮನೆಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಅ.2ರಂದು ಗಾಂಧಿಜಯಂತಿಯ ದಿನ ಬೃಹತ್ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರಸಭೆ, ಗ್ರಾಮ ಪಂಚಾಯ್ತಿಗಳ ನೇತೃತ್ವದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಲಿದೆ. ಪ್ಲಾಸ್ಟಿಕ್ ಸಂಗ್ರಹ ಕಾರ್ಯ ಮಾಡಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು ಎಂದರು.
ಪ್ಲಾಸ್ಟಿಕ್ಗೆ ಬದಲಾಗಿ ಪರಿಸರಕ್ಕೆ ಪೂರಕವಾದ ಬದಲಿ ವಸ್ತುಗಳನ್ನು ಬಳಸಬೇಕು. ಮಾರುಕಟ್ಟೆಗೆ ಪ್ಲಾಸ್ಟಿಕ್ ಕವರ್ ಕೊಂಡೊಯ್ಯುವ ಬದಲು ಕೈಚೀಲಗಳನ್ನು ಬಳಸಿ ಎಂದು ಡಿಸಿ ಸಲಹೆ ನೀಡಿದರು.
ನಗರದಲ್ಲಿ ಫ್ಲೆಕ್ಸ್, ಬ್ಯಾನರ್, ಬಂಟಿಗ್ಸ್ಗಳನ್ನು ಹಾಕುವಂತಿಲ್ಲ. ಫ್ಲೆಕ್ಸ್ ಪ್ರಿಂಟ್ ಮಾಡುವ ಕಂಪೆನಿಗಳು ನಿಯಮ ಉಲ್ಲಂಘಿಸಿದರೆ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು. ಪ್ಲಾಸ್ಟಿಕ್ ಬದಲಿಗೆ ಬಟ್ಟೆಯ ಫ್ಲೆಕ್ಸ್ ಬಳಸಬಹುದು. ನಗರಸಭೆ ಹಾಗೂ ಗ್ರಾಮ ಪಂಚಾಯ್ತಿ ನಿಗಧಿಪಡಿಸಿದ ಜಾಗದಲ್ಲಿ ಮಾತ್ರ ಹಾಕಬೇಕು. ಇದಕ್ಕೆ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಕಡ್ಡಾಯ. ಹೆದ್ದಾರಿಗಳಲ್ಲಿ, ರಸ್ತೆಯ ತಿರುವುಗಳಲ್ಲಿ, ಅಪಘಾತ ಹೆಚ್ಚಾಗುವ ಸ್ಥಳಗಳಲ್ಲಿ ಜಾಹೀರಾತು ಫಲಕಗಳನ್ನು ಹಾಕುವಂತಿಲ್ಲ. ನಗರಸಭೆ ಅನುಮತಿ ನೀಡಬಾರದು ಎಂದರು.
ಪೋಸ್ಟರ್ಗಳು ನಗರದ ಸೌಂದರ್ಯವನ್ನು ಹಾಳು ಮಾಡುತ್ತಿವೆ. ಹಾಗಾಗಿ, ಎಲ್ಲೆಂದರಲ್ಲಿ ಪೋಸ್ಟರ್ಗಳನ್ನು ಹಚ್ಚುವಂತಿಲ್ಲ. ಸಿನಿಮಾ ಪ್ರಚಾರ ಪೋಸ್ಟರ್ಗಳನ್ನು ಚಿತ್ರಮಂದಿರದ ಆವರಣದಲ್ಲಿ ಮಾತ್ರ ಹಚ್ಚಬೇಕು. ನಗರಸಭೆ ಸೂಚಿಸಿದ ಜಾಗಗಳಲ್ಲಿ ಪೋಸ್ಟರ್ ಹಚ್ಚಬಹುದು. ಎಲ್ಲೆಂದರಲ್ಲಿ ಹಚ್ಚಿದರೆ, ಮಾಲೀಕರ ಹಾಗೂ ವಿತರಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಜತೆಗೆ, ಅನಧಿಕೃತ ಹೋರ್ಡಿಂಗ್ಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದರು.
ಸೆ.27ರಿಂದ ಅ.2ರವರೆಗೆ ನಗರದಾದ್ಯಂತ ನಗರಸಭೆ ಅಧಿಕಾರಿಗಳೂ ನಗರದ ವಾಣಿಜ್ಯ ಮಳಿಗೆಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಿದ್ದಾರೆ. ಅ.2ರವರೆಗೆ ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಗುತ್ತದೆ. ಬಳಿಕ ದಂಡ ಪ್ರಯೋಗ ನಡೆಯಲಿದೆ. ಮೊದಲ ಬಾರಿಗೆ 1000, 2ನೇ ಬಾರಿಗೆ 2000, 3ನೇ ಬಾರಿಯ ಉಲ್ಲಂಘನೆಗೆ ಉದ್ದಿಮೆ ಪರವಾನಗಿ ರದ್ದು ಮಾಡಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರ್ನಾಟಕದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಗೌರವ ಬೆಂಗಳೂರು : ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ…
ಏಳೆಂಟು ಜಿಲ್ಲೆಯ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸಿಎಂ ಡಿಕೆಶಿ ಸೂಚನೆ ಬೆಂಗಳೂರು…
ಉಡುಪಿ:ಮಾದಕ ದ್ರವ್ಯ ಪ್ರಕರಣ : ಪಿಐಟಿ ಎನ್ಡಿಪಿಎಸ್ ಕಾಯ್ದೆಯಡಿ ಆರೋಪಿ ಬಂಧನ ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶ ಉಡುಪಿ:…
ಕುದುರೆಮುಖದಲ್ಲಿ ಅನಧಿಕೃತ ಜೀಪುಗಳ ಆಫ್ ರೋಡಿಂಗ್ .. ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಸ್ಥಳೀಯರು, ಪರಿಸರ ಪ್ರೇಮಿಗಳ ಒತ್ತಾಯ ಮೋಜು-ಮಸ್ತಿಗಾಗಿ ಸೂಕ್ಷ್ಮ ಪರಿಸರದಲ್ಲಿ…
ಕುಂದಾಪುರ: ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು; ಚಿನ್ನಾಭರಣ, ನಗದು ಕಳವು ಕುಂದಾಪುರ: ಕುಂದಾಪುರದ ಬೊಬ್ಬರ್ಯನಕಟ್ಟೆಯ ಮನೆಯಲ್ಲಿ ಯಾರೂ ಇಲ್ಲದ…
ಕರ್ನಾಟಕ ವಿಧಾನಸಭೆ ಸ್ಪೀಕರ್ ಆಗಿ ಜಿ.ಎಸ್. ಪಾಟೀಲ್ ಅವಿರೋಧ ಆಯ್ಕೆ ಬೆಂಗಳೂರು: ಕರ್ನಾಟಕ ವಿಧಾನಸಭಾಧ್ಯಕ್ಷರಾಗಿ ಗುರುಪಾದಗೌಡ ಸಂಗನಗೌಡ ಪಾಟೀಲ (ಜಿ.ಎಸ್.ಪಾಟೀಲ್)…