ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ ಶಿಲ್ಪಾ ಶೆಟ್ಟಿ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಸ್ಥಾನದ ಪ್ರಧಾನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಅವರು ಶಿಲ್ಪಾ ಶೆಟ್ಟಿ ಅವರಿಗೆ ದೇವರ ಶೇಷವಸ್ತ್ರ ನೀಡಿ ಗೌರವಿಸಿದರು. ಜೊತೆಗೆ ಮುಂದಿನ ವರ್ಷ ಜನವರಿಯಲ್ಲಿ ನಡೆಯುವ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಬರುವಂತೆ ಕೋರಿ, ಆಮಂತ್ರಣ ಪತ್ರಿಕೆಯನ್ನು ನೀಡಿದರು.
ಆಮಂತ್ರಣ ಹಾಗೂ ವಿಶೇಷ ಗೌರವವನ್ನು ಸ್ವೀಕರಿಸಿದ ಶಿಲ್ಪಾ ಶೆಟ್ಟಿ ಅವರು, ಬ್ರಹ್ಮಕಲಶೋತ್ಸವಕ್ಕೆ ಬರುವುದಾಗಿ ತಿಳಿಸಿದ್ದಾರೆ.
ತಾಯ್ನುಡಿ ತುಳುವಿನಲ್ಲಿಯೇ ಮಾತು ಆರಂಭಿಸಿ, ಮಂಗಳೂರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು ಇದಕ್ಕೂ ಮುನ್ನ ನಗರದ ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಂಸಿ ಆಸ್ಪತ್ರೆಯ ಮಾತೃತ್ವ ಮತ್ತು ಮಕ್ಕಳ ಆರೈಕೆಯ ನೂತನ ಘಟಕಕ್ಕೆ ಅವರು ಚಾಲನೆ ನೀಡಿದರು. ದ.ಕ. ಜಿಲ್ಲೆಯು ಇತಿಹಾಸ ಪ್ರಸಿದ್ಧ ಜಿಲ್ಲೆಯಾಗಿದೆ. ಇಲ್ಲಿಗೆ ಬರಲು ನನಗೆ ಹೆಮ್ಮೆಯಾಗುತ್ತಿದೆ ಎಂದು ಶಿಲ್ಪ ಶೆಟ್ಟಿ ಹೇಳಿದ್ದಾರೆ.
ಮಾತೃತ್ವ ಮಹಿಳೆಯರ ಜೀವನದ ಒಂದು ಪ್ರಮುಖ ಘಟ್ಟವಾಗಿದೆ. ಈ ವೇಳೆ ಉತ್ತಮ ವೈದ್ಯಕೀಯ ನೆರವು ಸಲಹೆ ಅಗತ್ಯ. ಅದಕ್ಕಾಗಿ ಕೆಎಂಸಿ ಆಸ್ಪತ್ರೆಯ ಈ ಘಟಕ ಸಹಕಾರಿಯಾಗಲಿದೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಮಣಿಪಾಲ್ ವಿದ್ಯಾಸಂಸ್ಥೆ ಉಪ ಕುಲಪತಿ ಡಾ.ಎಚ್ ಎಸ್ ಬಲ್ಲಾಳ್, ಕೆಎಂಸಿ ಆಸ್ಪತ್ರೆಯ ರೀಜನಲ್ ಚೀಫ್ ಆಪರೇಟಿಂಗ್ ಆಫಿಸರ್ ಸಾಘಿರ್ ಸಿದ್ದಿಕಿ, ಮಣಿಪಾಲ್ ಹೆಲ್ತ್ ಎಂಟರ್ ಪ್ರೈಸಸ್ ಮುಖ್ಯಸ್ಥರಾದ ದಿಲಿಪ್ ಜೋಸೆ ಮತ್ತಿತರರು ಉಪಸ್ಥಿತರಿದ್ದರು.