ಈಗಷ್ಟೇ ಜೊತೆಯಲ್ಲಿ ಹೆಜ್ಜೆ ಹಾಕುತ್ತಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿರುವಾಗಲೇ ಮಿತ್ರಕೂಟದಲ್ಲಿ ಅಪಸ್ವರದ ರಾಗ ಪ್ರತಿಧ್ವನಿಸಲಾರಂಭಿಸಿದೆ. ಸರ್ಕಾರದ ವಿಚಾರದಲ್ಲಿ ತಮ್ಮದೇ ಮೇಲುಗೈ ಆಗಬೇಕೆಂಬ ಪ್ರಯತ್ನ ತೆರೆಮರೆಯಲ್ಲಿ ಸದ್ದಿಲ್ಲದೆ ಆರಂಭವಾಗಿದೆ. ಸಚಿವ ಸ್ಥಾನಗಳ ಹಂಚಿಕೆಯಲ್ಲಿ ಈಗಾಗಲೇ ಹಿಡಿತ ಸಾಧಿಸಿರುವ ಕಾಂಗ್ರೆಸ್ ಮುಂದೆಯೂ ಇದೇ ರೀತಿ ಇರಬೇಕೆಂಬ ಉದ್ದೇಶದಿಂದ ಆಂತರಿಕವಾಗಿ ನಡೆಸಿರುವ ಚರ್ಚೆ ಜೆಡಿಎಸ್ಗೆ ತಲೆನೋವು ತರಿಸಿದೆ.
ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟಿರುವುದರಿಂದ ತನ್ನದೇ ಮರ್ಜಿಯಲ್ಲಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಇರಬೇಕೆಂಬುದು ಕಾಂಗ್ರೆಸ್ ಮುಖಂಡರ ನಿರೀಕ್ಷೆ. ಮೇಲ್ನೋಟಕ್ಕೆ ಹೊಂದಾಣಿಕೆ ಏರ್ಪಟ್ಟಂತೆ ಕಂಡರೂ ಆಂತರಿಕವಾಗಿ ಇಂತಹ ಅಭಿಪ್ರಾಯಗಳು ಜೀವ ಪಡೆದುಕೊಳ್ಳುತ್ತಿವೆ. ಸರ್ಕಾರದಲ್ಲಿ ಮಂತ್ರಿ ಸ್ಥಾನ ಹೊರತುಪಡಿಸಿಯೂ ಉಳಿದ ರಾಜಕೀಯ ಹುದ್ದೆಗಳಲ್ಲಿ ಸಿಂಹಪಾಲು ಪಡೆಯಬೇಕೆಂಬ ಕಾಂಗ್ರೆಸ್ನ ಬಯಕೆಯನ್ನು ಜೆಡಿಎಸ್ ಹೇಗೆ ಸ್ವೀಕರಿಸಲಿದೆ ಎಂದು ಅದೇ ಪಕ್ಷದ ಮುಖಂಡರು ಆತಂಕದಿಂದಲೇ ಎದುರು ನೋಡುತ್ತಿದ್ದಾರೆ.
ಯಾವ ಯಾವ ಸ್ಥಾನಕ್ಕೆ ಹಗ್ಗಜಗ್ಗಾಟ?: ಸಚಿವರ ಆಯ್ಕೆಯನ್ನು ಜಾತಿ ಹಾಗೂ ಪ್ರದೇಶವಾರು ಮಾಡಿದರು ಸಹ ಖಾತೆಗಳ ವಿಚಾರದಲ್ಲಿ ದೊಡ್ಡ ಸಮಸ್ಯೆ ಎದುರಾಗಲಿದೆ. ಹನ್ನೆರಡು ವರ್ಷಗಳ ನಂತರ ಅಧಿಕಾರ ಪಡೆದಿರುವ ಜೆಡಿಎಸ್ ಕೆಲವು ಪ್ರಮುಖ ಖಾತೆಗಳಿಗೆ ಕೋರಿಕೆ ಇಡಲು ನಿರ್ಧರಿಸಿದೆ. ಈಗಾಗಲೇ ಸ್ಪೀಕರ್ ಸ್ಥಾನ ಪಡೆದಿರುವ ಕಾಂಗ್ರೆಸ್ ವಿಧಾನ ಪರಿಷತ್ನಲ್ಲಿಯೂ ಸಭಾನಾಯಕ ಹಾಗೂ ಸಭಾಪತಿ ಸ್ಥಾನಗಳಿಗೆ ಕಣ್ಣಿಟ್ಟಿದೆ. ಸಭಾನಾಯಕ ಸ್ಥಾನಕ್ಕೆ ಎಸ್.ಆರ್. ಪಾಟೀಲ್ ಅಥವಾ ಎಚ್.ಎಂ. ರೇವಣ್ಣ ಅವರಲ್ಲಿ ಒಬ್ಬರನ್ನು ತರುವುದು ಹಾಗೂ ಸಭಾಪತಿ ಸ್ಥಾನಕ್ಕೆ ಉಗ್ರಪ್ಪ ಅವರನ್ನು ತರುವುದು ಕಾಂಗ್ರೆಸ್ನ ಉದ್ದೇಶವಾಗಿದೆ.
ಸಭಾನಾಯಕನ ಸ್ಥಾನ ಕೊಟ್ಟರೆ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರನ್ನು ಆಯ್ಕೆ ಮಾಡಬೇಕು ಎಂಬುದು ಜೆಡಿಎಸ್ನ ಚಿಂತನೆಯಾಗಿದೆ. ನಿಗಮ ಮತ್ತು ಮಂಡಳಿಗಳು ಹಾಗೂ ಆಯೋಗಗಳಲ್ಲಿ ಉತ್ತಮವಾಗಿರುವವನ್ನು ಪಡೆಯುವ ಬಗ್ಗೆಯೂ ಕಾಂಗ್ರೆಸ್ ಈಗಾಗಲೇ ಪಟ್ಟಿ ಮಾಡಿಕೊಂಡಿದೆ. ಯಾವುದೇ ಪ್ರಮುಖ ಹುದ್ದೆಗಳನ್ನು ಜೆಡಿಎಸ್ಗೆ ಬಿಟ್ಟುಕೊಡದೇ ತನ್ನ ಬಳಿಯೇ ಇರುವಂತೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ಖಚಿತಪಡಿಸಿವೆ.
ಡಿಕೆಶಿ ಸೇರಿದಂತೆ ಮೂವರಿಗೆ ವಿರೋಧ : ಸರ್ಕಾರ ರಚನೆ ಬಗ್ಗೆ ಕಾಂಗ್ರೆಸ್ನಿಂದಲೇ ಮೊದಲು ಪ್ರಸ್ತಾವನೆ ಬಂದಿದ್ದರಿಂದ ಒಪ್ಪಿಕೊಂಡಿದ್ದ ದೇವೆಗೌಡರು ಇದೀಗ ಸರ್ಕಾರದಲ್ಲಿ ಕೆಲವು ಹಿರಿಯರಿಗೆ ಅವಕಾಶ ಬೇಡವೆಂಬ ಸಂದೇಶ ರವಾನಿಸಿದ್ದಾರೆ ಎಂಬುದು ಕಾಂಗ್ರೆಸ್ನಲ್ಲಿ ಚರ್ಚೆಯ ವಸ್ತುವಾಗಿದೆ. ಈ ಬಗ್ಗೆ ಜೆಡಿಎಸ್ ಮುಖಂಡರು ಸ್ಪಷ್ಟನೆ ನೀಡಿದ್ದರೂ ಅದನ್ನು ನಂಬುವ ಸ್ಥಿತಿಯಲ್ಲಿ ಕಾಂಗ್ರೆಸ್ನ ನಾಯಕರಿಲ್ಲ. ಸರ್ಕಾರ ರಚನೆಯ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಿ.ಕೆ. ಶಿವಕುಮಾರ್, ಮಾಜಿ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡಿದ್ದ ಎಂ.ಬಿ. ಪಾಟೀಲ್ ಬಗ್ಗೆ ಅಪಸ್ವರ ಕೇಳಿ ಬಂದಿವೆ ಎಂಬ ಸುದ್ದಿ ಕಾಂಗ್ರೆಸ್ ಪಾಳಯಕ್ಕೆ ತಲುಪಿದೆ. ಅದಕ್ಕೆ ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷದ ನಿರ್ಧಾರ ತಮ್ಮದು ಎಂಬ ವಾದವನ್ನು ಮಂಡಿಸುತ್ತಿದ್ದಾರೆ.
ಅಧಿಕಾರ ಹಂಚಿಕೆ ಇನ್ನೂ ಸಸ್ಪೆನ್ಸ್! : ತಾನೇ ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿರುವುದಾಗಿ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಆ ಬಗ್ಗೆ ಚರ್ಚೆಯೇ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದಲೇ ಇದು 30:30ರ ಸರ್ಕಾರ ಆಗಬಹುದೆಂಬ ಮಾತು ಎರಡು ಪಕ್ಷದಲ್ಲಿಯೂ ಕೇಳಿ ಬರುತ್ತಿದೆ. ಸಮನ್ವಯ ಸಮಿತಿ ರಚನೆ ಮಾಡಿಕೊಂಡು ಹಂತಹಂತವಾಗಿ ಜೆಡಿಎಸ್ ಮೇಲೆ ಸವಾರಿ ಮಾಡುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ. ಆದರೆ ಈಗಾಗಲೇ ಕಾಂಗ್ರೆಸ್ನಿಂದ ಪಾಠ ಕಲಿತಿರುವ ದೇವೇಗೌಡರು ತಮ್ಮ ಪುತ್ರನ ಮೂಲಕ ಹೇಗೆ ಪರಿಸ್ಥಿತಿ ನಿಭಾಯಿಸಲಿದ್ದಾರೆ ಎಂಬುದು ರಾಜಕೀಯ ವಲಯದ ಕುತೂಹಲವೂ ಆಗಿದೆ.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…