ಬೆಂಗಳೂರು: ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಈ ಹಿಂದೆ ಬಿಜೆಪಿ ವಿರುದ್ಧ ಮಾತನಾಡಿದ್ದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಾಂಗ್ರೆಸ್ ಐಟಿ ಸೆಲ್ ಈ ವಿಡಿಯೋ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಪ್ರಮೋದ್ ಮಧ್ವರಾಜ್ ಅವರನ್ನು ಫೇಸ್ ಬುಕ್ ಹಾಗೂ ಟ್ವಿಟ್ಟರ್ನಲ್ಲಿ ಟೀಕಿಸುತ್ತಿದೆ. ಶನಿವಾರ ಪ್ರಮೋದ್ ಮಧ್ವರಾಜ್ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ಕ್ಯಾಬಿನೆಟ್ ಸಚಿವರಾಗಿ ಅವರು ಕಾರ್ಯನಿರ್ವಹಿಸಿದ್ದರು. ಬಳಿಕ ಚುನಾವಣೆಯಲ್ಲಿ ಸೋಲುಂಡು ರಾಜಕೀಯದಲ್ಲಿ ಅಷ್ಟೇನು ಸಕ್ರಿಯರಾಗಿ ಇರದ ಅವರು ಇದೀಗ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿ ವಿರುದ್ಧ ಪ್ರಮೋದ್ ಮಾಡಿದ್ದ ಟೀಕೆ ಏನು?
ಈ ಹಿಂದೆ ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪ್ರಮೋದ್ ಮಧ್ವರಾಜ್ ಅವರು ಬಿಜೆಪಿಗೆ ಸೇರಲು ಆಹ್ವಾನ ನೀಡಿದ್ದರೂ ಏಕೆ ಸೇರ್ಪಡೆಯಾಗಿಲ್ಲ ಎಂಬ ಪ್ರಶ್ನೆಗೆ ಪ್ರಮೋದ್ ಮಧ್ವರಾಜ್ ಈ ಕಾರಣವನ್ನು ನೀಡಿದ್ದರು. ಈ ವೇಳೆ ಅವರು “2013 ರಲ್ಲಿ ನಾನು ಶಾಸಕನಾದೆ. 2016 ರಲ್ಲಿ ಕಂದಾಯ ಇಲಾಖೆಯ ಪಾರ್ಲಿಮೆಂಟರಿ ಸೆಕ್ರೇಟರಿ ಸ್ಥಾನ ನೀಡಲಾಯಿತು, 2017 ರಲ್ಲಿ ಸಹಾಯಕ ಮಂತ್ರಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸ್ಥಾನವನ್ನು ನೀಡಲಾಯಿತು. ಬಳಿಕ ಕ್ಯಾಬಿನೆಟ್ ಸಚಿವ ಸ್ಥಾನವನ್ನು ಪಕ್ಷ ನೀಡಿತು. ಪ್ರಥಮ ಬಾರಿ ಶಾಸಕನಾದರೂ ನನಗೆ ಪಕ್ಷ ಮೂರು ಬಾರಿ ಪ್ರಮೋಷನ್ ನೀಡಿದೆ. ಪ್ರಥಮ ಬಾರಿ ಸಚಿವನಾದರೂ ಮೂರು ಪ್ರಮೋಷನ್ ನೀಡಿದವರು ಯಾರಾದರೂ ಇದ್ದಾರಾ? ಅವರನ್ನು ಬಿಟ್ಟು ಬಿಜೆಪಿಗೆ ಹೋದರೆ ನನಗಿಂತ ದೊಡ್ಡ ಸ್ವಾರ್ಥಿ, ನನಗಿಂತ ದೊಡ್ಡ ದ್ರೋಹಿ ಯಾರು ಇರಲು ಸಾಧ್ಯ?” ಎಂದು ಪ್ರಶ್ನಿಸಿದ್ದರು.
ಇದೀಗ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಹಿಂದೆ ಈ ಹೇಳಿಕೆ ನೀಡಿದ್ದ ಪ್ರಮೋದ್ ಮಧ್ವರಾಜ್ ಇದೀಗ ಏಕೆ ದಿಢೀರಾಗಿ ತಮ್ಮ ವರಸೆಯನ್ನು ಬದಲಾಯಿಸಿಕೊಂಡರು? ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿದ್ದಾರೆ.
ಪ್ರಮೋದ್ ಮಧ್ವರಾಜ್ ಸಮರ್ಥನೆ ಏನು?
ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸ್ಪಷ್ಟೀಕರಣ ನೀಡಿರುವ ಪ್ರಮೋದ್ ಮಧ್ವರಾಜ್ “ಇದು 2018 ರಲ್ಲಿ ನಾನು ಕೈಗೊಂಡಿದ್ದ ನಿಲುವಿನ ಕುರಿತಾಗಿ ನೀಡಿದ್ದ ಹೇಳಿಕೆಯಾಗಿದೆ. ಆ ಸಂದರ್ಭದಲ್ಲಿ ನಾನು ಸಚಿವನಾಗಿದ್ದೆ. ಆದರೆ ಇದು 2022 ಕ್ಕೆ ಅನ್ವಯ ಆಗುವುದಿಲ್ಲ” ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಒಂದು ಪಕ್ಷದಲ್ಲಿ ಇರುವ ಸಂದರ್ಭದಲ್ಲಿ ಮತ್ತೊಂದು ಪಕ್ಷಕ್ಕೆ ಹಾಗೂ ಆ ಪಕ್ಷದ ಮುಖಂಡರ ವಿರುದ್ಧ ಹೇಳಿಕೆಗಳು ನೀಡುವುದು ಸಹಜ. ಆದರೆ ಇಂದಿನ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಹಳೆ ಹೇಳಿಕೆಗಳ ವಿಡಿಯೋಗಳು ದಾಖಲೆಯಾಗಿ ಇರುತ್ತವೆ. ಪಕ್ಷಾಂತರ ಮಾಡಿದ ಸಂದರ್ಭದಲ್ಲಿ ಇವು ಮುನ್ನೆಲೆಗೆ ಬಂದು ಪಕ್ಷಾಂತರವಾದ ರಾಜಕಾರಣಿಗಳಿಗೆ ಇರುಸು ಮುರುಸು ಉಂಟು ಮಾಡುತ್ತಿರುವುದರಲ್ಲಿ ಸಂಶಯವಿಲ್ಲ.
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…
ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…
ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…
ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…
ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…