ಕಾಪು: 2016ಕ್ಕೆ ಘೋಷಣೆಯಾಗಿ, 2018ರಲ್ಲಿ ಅಸ್ತಿತ್ವಕ್ಕೆ ಬಂದಿರುವ ನೂತನ ಕಾಪು ತಾಲೂಕಿನ ಬಹು ನಿರೀಕ್ಷಿತ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ಭರದಿಂದ ಸಾಗುತ್ತಿದೆ. ನಿರೀಕ್ಷಿತ ರೀತಿಯಲ್ಲಿ ಕಾಮಗಾರಿ ಪೂರ್ಣಗೊಂಡರೆ ಮುಂದಿನ ತಿಂಗಳಿನಿಂದ ಜನತೆಗೆ ಒಂದೇ ಸೂರಿನಡಿಯಲ್ಲಿ ತಾಲೂಕು ಆಡಳಿತದ ಸೇವೆಗಳು ಲಭ್ಯವಾಗಲಿವೆ.
ಕಾಪು ಪಡುಗ್ರಾಮ ಬಂಗ್ಲೆ ಮೈದಾನದ 3.42 ಎಕರೆ ಜಮೀನಿನಲ್ಲಿ ನೆಲಮಹಡಿ ಮತ್ತು ಮೊದಲ ಮಹಡಿಯಲ್ಲಿ ಒಟ್ಟು 2,857 ಚ. ಮೀ. ವಿಸ್ತಿರ್ಣದ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 10 ಕೋಟಿ ರೂ. ಯೋಜನಾ ವೆಚ್ಚವಾಗಿದ್ದು 8.64 ಕೋಟಿ ರೂ. ವೆಚ್ಚದಲ್ಲಿ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿಕೊಡಲಾಗಿದೆ.
ವಿವಿಧ ಕಚೇರಿಗಳು
ಕಾಪು ತಾಲೂಕಿನಲ್ಲಿ ಪ್ರಸ್ತುತ ಪುರಸಭೆ, ಪೊಲೀಸ್, ಕಂದಾಯ, ಚುನಾವಣೆ, ಗ್ರಾಮೀಣಾಭಿವೃದ್ಧಿ ಇಲಾಖೆ, ತಾ.ಪಂ., ಅರಣ್ಯ, ಆರೋಗ್ಯ, ಕೃಷಿ ಇಲಾಖೆ ಮತ್ತು ಉಪ ಖಜಾನೆ ಕಾರ್ಯಾಚರಿಸುತ್ತಿದ್ದು ಶಾಸಕರ ಕಚೇರಿ, ತಹಶೀಲ್ದಾರ್ ಕಚೇರಿ, ಸರ್ವೇ ಇಲಾಖೆ, ಉಪನೋಂದಣಿ ಕಚೇರಿ, ಭೂಮಿ, ತಾಲೂಕು ದಂಡಾಧಿಕಾರಿ ನ್ಯಾಯಾಲಯ ಸಹಿತ ಸುಮಾರು 30 ಇಲಾಖೆಗಳ ಕಚೇರಿಗಳು ಮಿನಿ ವಿಧಾನಸೌಧದ ಸಂಕೀರ್ಣದೊಳಗೆ ಬರಲಿವೆ. ಮಿನಿ ವಿಧಾನಸೌಧ ಕಟ್ಟಡದಲ್ಲಿ 8 ಜನ ಸಾಮರ್ಥಯದ ಲಿಫ್ಟ್, 25 ಸಾವಿರ ಲೀಟರ್ ಸಾಮರ್ಥಯದ ಸಂಪ್ ಟ್ಯಾಂಕ್, ಡಿಸೇಲ್ ಜನರೇಟರ್, ಕಾರಿಡಾರ್, ವಿವಿಧ ಕಚೇರಿಗಳು, ಕೋರ್ಟ್ ಹಾಲ್, ಮೀಟಿಂಗ್ ಹಾಲ್ ಹಾಗೂ ಆಕರ್ಷಕ ವಿನ್ಯಾಸಗಳು ಕಟ್ಟಡದ ಸೊಬಗು ಹೆಚ್ಚಿಸಿವೆ.
ರೆಕಾರ್ಡ್ ರೂಂ, ಶಿಕ್ಷಣ, ಲೋಕೋಪಯೋಗಿ, ಜಿ.ಪಂ. ಇಂಜಿನಿಯರಿಂಗ್, ತೋಟಗಾರಿಕೆ, ಸಮಾಜಕಲ್ಯಾಣ, ಶಿಶು ಅಭಿವೃದ್ಧಿ, ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ, ರೇಷ್ಮೆ ಇಲಾಖೆ, ಬಂದರು ಮತ್ತು ಮೀನುಗಾರಿಕೆ, ಯುವಜನ ಮತ್ತು ಕ್ರೀಡಾ ಇಲಾಖೆ, ವಕ್³ ಬೋರ್ಡ್, ಧಾರ್ಮಿಕ ದತ್ತಿ ಇಲಾಖೆ, ಸಮಗ್ರ ಗಿರಿಜನ ಅಭಿವೃದ್ಧಿ ನಿಗಮ, ಆರ್ಟಿಒ ಕಚೇರಿ ಹಾಗೂ ಲೀಡ್ ಬ್ಯಾಂಕ್ ಶಾಖೆಗಳ ತಾಲೂಕು ಮಟ್ಟದ ಕಚೇರಿಗಳು ಇನ್ನಷ್ಟೇ ಕಾಪುವಿಗೆ ಬರಬೇಕಿದ್ದು ಮಿನಿ ವಿಧಾನಸೌಧ ಉದ್ಘಾಟನೆಗೊಳ್ಳುವಾಗಲೇ ತಾಲೂಕಿಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳೂ ಕಾಪುವಿಗೆ ಬರುವಂತಾದರೆ ಉತ್ತಮ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಖಾಲಿ ಹುದ್ದೆಗಳ ಭರ್ತಿಯಾಗಲಿ
ಕಾಪು ತಾಲೂಕಿನ 30 ಕಂದಾಯ ಗ್ರಾಮಗಳಲ್ಲಿ 23 ಗ್ರಾಮ ಕರಣಿಕ ಹುದ್ದೆಗಳಿದ್ದು ಇದಲ್ಲಿ ಈಗಾಗಲೇ 20 ಮಂದಿ ಕರ್ತವ್ಯದಲ್ಲಿದ್ದಾರೆ. 3 ಹುದ್ದೆಗಳು ಖಾಲಿಯಿವೆ. ಪ್ರಥಮ ದರ್ಜೆ ಸಹಾಯಕ ಮೂರು ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು ದ್ವಿತೀಯ ದರ್ಜೆ ಸಹಾಯಕರ 4 ಹುದ್ದೆಗಳಲ್ಲಿ 3 ಹುದ್ದೆಗಳು ಖಾಲಿಯಿವೆ. ಆಹಾರ ನಿರೀಕ್ಷರ ಹುದ್ದೆ, ಗುಮಾಸ್ತ 3 ಹುದ್ದೆಗಳಲ್ಲಿ 2 ಇನ್ನಷ್ಟೇ ತುಂಬಬೇಕಿದೆ. ಜಿ – 2 ಒಂದು ಹುದ್ದೆ ಮಂಜೂರಾಗಿದ್ದರೂ ಅದು ಕೂಡಾ ಇನ್ನೂ ಭರ್ತಿಯಾಗಿಲ್ಲ. ಶೀಘ್ರವಾಗಿ ಈ ಖಾಲಿ ಹುದ್ದೆಗಳ ಭರ್ತಿಗೆ ಸರಕಾರ ಮತ್ತು ಜನಪ್ರತಿನಿಧಿಗಳು ಕ್ರಮವಹಿಸಬೇಕಿದೆ.
ಹೋಬಳಿ, ನಾಡ ಕಚೇರಿಯ ನಿರೀಕ್ಷೆ
ಉಡುಪಿ ತಾಲೂಕಿನಿಂದ ಬೇರ್ಪಡುವವರೆಗೂ ಕಾಪು ಹೋಬಳಿ ಕೇಂದ್ರವಾಗಿತ್ತು. ಈಗ ಕಾಪು ತಾಲೂಕು ಕೇಂದ್ರವಾಗಿ ರಚನೆಯಾಗಿರುವುದರಿಂದ ಅದಕ್ಕೆ ಅನುಕೂಲಕರವಾಗಿ ನೂತನ ಹೋಬಳಿ ಕೇಂದ್ರ ಅಸ್ತಿತ್ವಕ್ಕೆ ಬರಬೇಕಿದೆ. ಪಡುಬಿದ್ರಿ ಮತ್ತು ಶಿರ್ವ ಭಾಗದಲ್ಲಿ ಹೋಬಳಿ ಕೇಂದ್ರ ಅಥವಾ ನಾಡಕಚೇರಿ ಆರಂಭಗೊಂಡಲ್ಲಿ ಜನರಿಗೆ ಬಹಳಷ್ಟು ಅನುಕೂಲಕರವಾಗಲಿದೆ. ತಾಲೂಕು ರಚನೆಗೊಂಡ ಐದಾರು ವರ್ಷಗಳ ಬಳಿಕ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಬ್ ರಿಜಿಸ್ಟ್ರಾರ್ ಕಚೇರಿ ಮಂಜೂರಾಗಿದ್ದು ಅದು ಕೂಡಾ ಶೀಘ್ರ ಕಾರ್ಯಾಚರಿಸಿದರೆ ತಾಲೂಕಿನ 30 ಕಂದಾಯ ಗ್ರಾಮಗಳ ಜನತೆಗೆ ಅನುಕೂಲಕರವಾಗಲಿದೆ.
ಫೆಬ್ರವರಿಯಲ್ಲಿ ಲೋಕಾರ್ಪಣೆ
ಕಾಪು ತಾಲೂಕು ಮಿನಿ ವಿಧಾನಸೌಧದ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು ಮುಂದಿನ ಫೆಬ್ರವರಿ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕಂದಾಯ ಸಚಿವ ಆರ್. ಆಶೋಕ್ ಅವರ ಸಮಯ ನೋಡಿ ಉದ್ಘಾಟನೆಗೆ ದಿನ ನಿಗದಿ ಪಡಿಸಲಾಗುವುದು. ಗುಣಮಟ್ಟದ ಕಾಮಗಾರಿ ನಡೆಸಿದ್ದು ಕಟ್ಟಡ ಲೋಕಾರ್ಪಣೆ ಬಳಿಕ ಸಾರ್ವಜನಿಕರಿಗೆ ಎಲ್ಲ ಸೇವೆಯೂ ಒಂದೇ ಕಡೆ ದೊರೆಯಲಿದೆ. ಆ ಮೂಲಕ ಕಾಪು ತಾಲೂಕಿನ ಜನತೆಯ ಬಹುಕಾಲದ ನನಸು ನನಸಾಗಲಿದೆ.
– ಲಾಲಾಜಿ ಆರ್. ಮೆಂಡನ್, ಶಾಸಕರು, ಕಾಪು
ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…
ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…
ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…
ಪುತ್ತೂರು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…
ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…
ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…