ಕಾರ್ಕಳ: ತುಳುನಾಡಿನ ದೈವಾರಧನೆಯು ಹಿಂದೂಗಳ ಆಚರಣೆಯಲ್ಲವೆಂದು ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಚೇತನ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರಾವಳಿಯ ಹಿಂದೂಗಳ ಪ್ರತೀ ಮನೆಮನೆಯಲ್ಲೂ ಅತ್ಯಂತ ಶೃದ್ಧಾಭಕ್ತಿಯಿಂದ ಆರಾಧಿಸುವ ಭೂತ ಕೋಲದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದೂ ಅಲ್ಲದೆ, ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆತಂದು ಸಮಾಜದಲ್ಲಿ ಅಶಾಂತಿ ಹರಡುತ್ತಿರುವ ಕನ್ನಡ ನಟ ಚೇತನ ಕುಮಾರ್ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಕಾರ್ಕಳ ಘಟಕದ ವತಿಯಿಂದ ಕಾರ್ಕಳ ನಗರ ಪೋಲೀಸ್ ಠಾಣೆಗೆ ದೂರು ನೀಡಲಾಯಿತು. ದೂರು ಸ್ವೀಕರಿಸಿದ ನಗರ ಠಾಣಾಧಿಕಾರಿ ಪ್ರಸನ್ನ ಸೂಕ್ತ ಕಾನೂನು ಕ್ರಮದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಕಳ ನಗರ ಸಂಯೋಜಕ್ ಸಂದೀಪ್ ಕಾರ್ಲ, ಬೋಳ ಸದಾಶಿವ ಶೆಟ್ಟಿ, ಸಾಣೂರು ನರಸಿಂಹ ಕಾಮತ್, ದೀಪಕ್ ಬೈಲೂರು, ಸುಭಾಶ್ಚಂದ್ರ ಹೆಗ್ಡೆ, ರಮೇಶ್ ತೆಳ್ಳಾರು ಮತ್ತಿತರರು ಉಪಸ್ಥಿತರಿದ್ದರು.