ಕಾಪು: ಸಾರ್ವಜನಿಕರಲ್ಲಿ ಇತಿಹಾಸ ಪ್ರಜ್ಞೆಯ ಕೊರತೆ, ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿರುವ ಜನಪ್ರತಿನಿಧಿಗಳ ಮತ್ತು ಸಂಘ ಸಂಸ್ಥೆಗಳವರ ನಿಷ್ಕಾಳಜಿ ಹಾಗೂ ಪುರಾತತ್ವ ಇಲಾಖೆಯ ಕಾಳಜಿ ರಹಿತ ಅಧಿಕಾರಿ ವರ್ಗದಿಂದಾಗಿ ನಮ್ಮ ನಾಡಿನ ಐತಿಹಾಸಿಕ ಮಹತ್ವದ ಅನೇಕ ಅರಮನೆ, ಕೋಟೆ ಕೊತ್ತಲ ಇತ್ಯಾದಿಗಳನ್ನು ಸಂರಕ್ಷಣೆಯಾಗಿ ಉಳಿಯದೆ, ನಾಮಾವಶೇಷಗೊಂಡಿದೆ, ಗೊಳ್ಳುತ್ತಿವೆ. ಒಂದಷ್ಟು ಸ್ಮಾರಕಗಳು ಅಳಿದುಳಿದಿವೆಯಾದರೂ ಇವುಗಳು ಸಹ ನಾಶದ ಅಂಚಿನಲ್ಲಿವೆ. ಸರ್ವರ ದಿವ್ಯ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣವೆನ್ನುವುದು ವಿಷಾದನೀಯ.
ನಂದಾವರ ಮತ್ತು ಉದ್ಯಾವರ ಇಲ್ಲಿನ ಅರಮನೆ ಮತ್ತು ಕೋಟೆಯನ್ನು ಸಂರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲಗೊಂಡಿರುವುದನ್ನು ನಾನು ಈಗಾಗಲೇ ಬರೆದಿದ್ದೇನೆ. ನಂದಾವರ ಮತ್ತು ಉದ್ಯಾವರದ ಸಾಲಿಗೆ ಸೇರ್ಪಡೆಗೊಂಡ ಇನ್ನೊಂದು ಐತಿಹಾಸಿಕ ಸ್ಥಳವೆಂದರೆ, ಉಡುಪಿ ಜಿಲ್ಲೆ ಕಾಪು ತಾಲೂಕಿನ ಮಲ್ಲಾರು.
ಮಲ್ಲಾರುವಿನಲ್ಲಿದ್ದುದು ಅಂತಿಂಥ ಕೋಟೆಯೇನೂ ಅಲ್ಲ. ಅತ್ಯಂತ ಮಹತ್ವದ ಐತಿಹಾಸಿಕ ಕೋಟೆಯಾಗಿತ್ತು ಮಲ್ಲಾರಿನ ಕೋಟೆ ಮತ್ತು ಕೆರೆ ಹಾಗೂ ಇಲ್ಲಿದ್ದ ಕೆಲವು ಐತಿಹಾಸಿಕ ವಸ್ತುಗಳು. ಇವುಗಳ ಪೈಕಿ ಕೆರೆಯೊಂದು ನಾಶದ ಅಂಚಿನಲ್ಲಿದ್ದರೆ, ಉಳಿದವುಗಳು ಈಗಾಗಲೇ ಸಂಪೂರ್ಣ ನಾಶವಾಗಿವೆ.
ಮಲ್ಲಾರುವಿನ ಕೋಟೆ ಬರೋಬ್ಬರಿ ಹದಿನಾರು ಎಕರೆಗೂ ಅಧಿಕ ಸ್ಥಳದಲ್ಲಿ ವ್ಯಾಪಿಸಿತ್ತು. ಆದರೆ, ಇಂದು ಈ ಕೋಟೆಗೆ ಸಂಬಂಧಿಸಿದ ಒಂದೇ ಒಂದು ಕಲ್ಲು ಸಹ ನಮಗೆ ನೋಡಲು ಸಿಗುವುದಿಲ್ಲ.
ಕೊಟೆಯೊಳಗಡೆ ಇದ್ದ ದಿಬ್ಬಗಳನ್ನು ನೆಲಸಮಗೊಳಿಸಲಾಗಿದೆ. ಮಾತ್ರವಲ್ಲ, ಇಲ್ಲಿದ್ದ ಕೆಲವೊಂದು ಐತಿಹಾಸಿಕ ವಸ್ತುಗಳನ್ನು ಕೂಡಾ ನಾಶಗೊಳಿಸಲಾಗಿದೆ.
ಮಲ್ಲಾರಿನ ಕೋಟೆ, ವಿಜಯನಗರ ರಾಜರ ಆಡಳಿತ ಕಾಲದ್ದು ಎನ್ನುವುದೇ ಸಾಕು, ಈ ಕೋಟೆಯ ಮಹತ್ವವನ್ನು ಸಾರಿ ಹೇಳಲು. ಶಾಲಿವಾಹನ ಶಕ 1665ನೇ ರುಧಿರೋದ್ಗಾರಿ ಸಂವತ್ಸರದಲ್ಲಿ ಕಾಪು ಮರ್ದ ಹೆಗ್ಗಡೆ ಮಲ್ಲಾರಿನ ಕೋಟೆಯನ್ನು ಪುನರ್ನಿರ್ಮಿಸಿದ ಬಗ್ಗೆ ಮತ್ತು ಕಾಪು ಕಡಲ ಕಿನಾರೆಯಲ್ಲಿರುವ ಬೃಹತ್ ಬಂಡೆಯ ಮೇಲೆ ಕೋಟೆ ಇನ್ನೊಂದು ಕೋಟೆ (ಮನೋಹರಗಡ) ಕಟ್ಟಿಸಿದ ಬಗ್ಗೆ ಖ್ಯಾತ ಇತಿಹಾಸಕಾರರಾದ ಎಂ. ಗಣಪತಿ ರಾವ್ ಐಗಳ್ ಅವರ “ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ” ಗ್ರಂಥದಲ್ಲಿ ಉಲ್ಲೇಖವಿದೆ.
1740ರ ದಶಕದ ಅವಧಿಯಲ್ಲಿ ಕೆಳದಿ ಸಂಸ್ಥಾನದ ಅಧೀನಕ್ಕೆ ಒಳಪಟ್ಟ ಬಳಿಕ, ಈ ಕೋಟೆ ಬಸಪ್ಪ ನಾಯಕನ ಆಡಳಿತದಲ್ಲಿದ್ದರೆ, ಆನಂತರ ಟಿಪ್ಪು ಸುಲ್ತಾನ್ ಕಾಲದಲ್ಲಿ ಟಿಪ್ಪುವಿನ ಆಡಳಿತಕ್ಕೆ ಒಳಪಟ್ಟಿತ್ತು ಈ ಐತಿಹಾಸಿಕ ಮಲ್ಲಾರಿನ ಕೋಟೆ.
ನಾಲ್ಕೈದು ದಶಕದ ಹಿಂದಿನವರೆಗೂ ಕೆಲವು ಶಾಲೆಗಳ ಶಿಕ್ಷಕರು ಮಕ್ಕಳನ್ನು ಇಲ್ಕಿಗೆ ಕರೆದುಕೊಂಡು ಬಂದು ಈ ಕೋಟೆಯನ್ನು ತೋರಿಸುತ್ತಿದ್ದರು ಎಂಬ ವಿಷಯವನ್ನು ಗ್ರಾಮದ ಹಿರಿಯರು ನೆನಪುಮಾಡಿಕೊಳ್ಳುತ್ತಾರೆ.
ಟಿಪ್ಪು ಮರಣಾನಂತರ ಸಹಜವಾಗಿಯೇ ಕೋಟೆ ಬ್ರಿಟೀಷರ ಆಡಳಿತಕ್ಕೆ ಒಳಪಟ್ಟಿತು. ಟಿಪ್ಪು ಆಡಳಿತ ಕಾಲದಲ್ಲಿ ಕೊಟೆಯಲ್ಲಿದ್ದ ಐತಿಹಾಸಿಕ ಮಹತ್ವದ ಖಡ್ಗವೊಂದು ಇಂದಿಗೂ ಉಳಿದಿದ್ದು, ಇದು, ಮಲ್ಲಾರು ಕೋಟೆ ಬಳಿಯ “ಕಾಪು ಶ್ರೀ ಮಾರಿಯಮ್ಮ ದೇವಿಯ (ಶ್ರೀ ತ್ರಿಶಕ್ತಿ ಸನ್ನಿಧಿ) ಆದಿಸ್ಥಳದ ಮನೆಯಲ್ಲಿ “ಕೋಟೆ ಮಾರಿ” ಯೊಂದಿಗೆ ಗುಡಿಯಲ್ಲಿದೆ.
“ಕೋಟೆ ಮಾರಿ” ನೆಲೆಯಾಗಿರುವ ಮೂಲ ಮನೆಯ ಗುಡಿಯೊಳಗೆ ಖಡ್ಗವೂ ಇದ್ದು, ಇದಕ್ಕೆ ವಾರ್ಷಿಕ ಆಯುಧ ಪೂಜೆಯ ದಿನದಂದು ಪೂಜೆಯನ್ನೂ ನಡೆಸಿಕೊಂಡು ಬರಲಾಗುತ್ತಿದೆ.
ಕೋಟೆ ಮಾರಿ ಮತ್ತು ಟಿಪ್ಪು ಕಾಲದ ಖಡ್ಗ ಹೊರತುಪಡಿಸಿದರೆ ಉಳಿದಿರುವ ಇನ್ನೊಂದು ಐತಿಹಾಸಿಕ ಸ್ಮಾರಕವೆಂದರೆ, ಅದು ನಂದಿಕೆರೆ ಅಥವಾ ನಿನ್ನಿಕೆರೆ. ಈ ಕೆರೆಯನ್ನು ಪ್ರಸ್ತುತ ಪೂರ್ಣವಾಗಿ ಗಿಡಗಂಟಿ ಆವರಿಸಿರುವುದರಿಂದ, ಇಲ್ಲೊಂದು ಕೆರೆ ಇದೆ ಎನ್ನುವುದನ್ನು ಯಾರೂ ಊಹಿಸಲೂ ಸಾಧ್ಯವಿಲ್ಲದಂತಾಗಿದೆ. ಕೆರೆಯನ್ನು ಈಗ ನೇರವಾಗಿ ನೋಡಲು ಸಾಧ್ಯವಿಲ್ಲವಾದರೂ ಕೆರೆ ಇದೆ, ಉಳಿದಿದೆ. ಮಲ್ಲಾರು ಕೋಟೆಯ ಅತ್ಯಂತ ಮಹತ್ವದ ಐತಿಹಾಸಿಕ ಸ್ಮಾರಕವಾದ ಕೆರೆ ಹೀಗೆ ಇಷ್ಟಾದರೂ ಉಳಿದಿರುವುದು ಒಂದಷ್ಟು ಸಮಾಧಾನಕರ ವಿಷಯವೇ ಆಗಿದೆ.
ಕಾಪು ಪುರಸಭೆ, ಜಿಲ್ಲಾಡಳಿತ, ಪುರಾತತ್ವ ಇಲಾಖೆ ಇನ್ನಾದರೂ ಈ ನಂದಿಕೆರೆ (ನಿನ್ನಿಕೆರೆ) ಯನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ಉದ್ಯೋಗ ಖಾತರಿ ಯೋಜನೆಯ ಮೂಲಕವೋ, ಕೆರೆ ಅಭಿವೃದ್ಧಿ ಪ್ರಾಧಿಕಾರದ ಮೂಲಕವೋ, ಏನಾದರೂ ಮಾಡಿ ಈ ಕೆರೆಯನ್ನು ಉಳಿಸುವ ಮಹತ್ಕಾರ್ಯವನ್ನು ಜನಪ್ರತಿನಿಧಿಗಳು ಮಾಡಲೇಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಇಚ್ಛಾಶಕ್ತಿಯನ್ನು ಪ್ರದರ್ಶಿಸಲೇಬೇಕಾಗಿದೆ.
~ ಶ್ರೀರಾಮ ದಿವಾಣ
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…