ಲಂಡನ್: ಜೈಲಿನಲ್ಲಿರುವಾಗ ನನ್ನ ಮೇಲೆ ಮೂರು ಬಾರಿ ಹಲ್ಲೆಗೊಳಗಾಗಿದ್ದು, ಭಾರತಕ್ಕೆ ಗಡೀಪಾರು ಆದೇಶ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದರೂ ಕೂಡ ಇಂಗ್ಲೆಂಡಿನ ನ್ಯಾಯಾಧೀಶರು ಜಾಮೀನು ನೀಡಲು ನಿರಾಕರಿಸಿದ್ದಾರೆ ಎಂದು ಕಾರಾಗೃಹದಲ್ಲಿರುವ ವಜ್ರೋದ್ಯಮಿ ನೀರವ್ ಮೋದಿ ಹೇಳಿದ್ದಾರೆ.
49 ವರ್ಷದ ನೀರವ್ ಮೋದಿ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ನಿನ್ನೆ ತಮ್ಮ ಬ್ಯಾರಿಸ್ಟರ್ ಹುಗೊ ಕೈತ್ ಕ್ಯುಸಿ ಅವರೊಂದಿಗೆ ಹಾಜರಾಗಿ 5ನೇ ಬಾರಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದನು.
ಪ್ರಸ್ತುತ ಲಂಡನ್ ಜೈಲಿನಲ್ಲಿರುವ ನೀರವ್ ಆರ್ಥಿಕ ಅಪರಾಧ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟೇಟ್ ಕೋರ್ಟ್ ನಿನ್ನೆ ಮತ್ತೊಮ್ಮೆ ತಿರಸ್ಕರಿಸಿತು. ತಮ್ಮ ವಕೀಲ ಹ್ಯೂಗೋ ಕೀಥ್ ಕ್ಯೂಸಿ ಮೂಲಕ ನೀರವ್ ಜಾಮೀನು ಮಂಜೂರಾತಿಗಾಗಿ ಐದನೇ ಬಾರಿ ಅರ್ಜಿ ಸಲ್ಲಿಸಿದ್ದ.
ನೀರವ್ ಮೋದಿಗೆ ವ್ಯಾಂಡ್ಸ್ವರ್ಥ್ ಬಂಧೀಖಾನೆಯಲ್ಲಿ ಕೈದಿಗಳು ಮೂರು ಬಾರಿ ಹಲ್ಲೆ ನಡೆಸಿದ್ದಾರೆ. ತಮ್ಮ ಕಕ್ಷಿದಾರನಿಗೆ ರಕ್ಷಣೆ ನೀಡುವಲ್ಲಿ ಜೈಲಿನ ಸಿಬ್ಬಂದಿ ವಿಫಲರಾಗಿದ್ದಾರೆ. ಸೆರೆಮನೆಯಲ್ಲಿ ಅವರ ಜೀವಕ್ಕೆ ಅಪಾಯವಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಕೋರ್ಟ್ಗೆ ಸಲ್ಲಿಸಿರುವ ಮನವಿಯಲ್ಲಿ ನೀರವ್ ತನ್ನನ್ನು ಭಾರತಕ್ಕೆ ಗಡೀಪಾರು ಮಾಡಿದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಹೇಳಿದ್ದಾನೆ.
ಮೂಂದಿನ ವರ್ಷ ಮೇ 11 ರಿಂದ 15ರವರೆಗೆ ಕಳಂಕಿತ ಉದ್ಯಮಿಯನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಅಂತಿಮ ವಿಚಾರಣೆ ನಡೆಸುವ ತೀರ್ಪು ಹೊರ ಬೀಳಲಿದೆ. ಅದಕ್ಕೆ ಮುನ್ನವೇ ವಜ್ರ ವ್ಯಾಪಾರಿ ಸಾವಿಗೆ ಶರಣಾಗುವ ಬೆದರಿಕೆ ಹಾಕುತ್ತಿದ್ದಾನೆ.