Featured

ಮಂಗಳೂರು: ಕರಾವಳಿ ಕ್ರೀಡಾಲೋಕಕ್ಕೆ ಅಂತಾರಾಷ್ಟ್ರೀಯ ಈಜುಕೊಳ ಲೋಕಾರ್ಪಣೆ – vishwanews24

ಮಂಗಳೂರು: ಕರಾವಳಿ ಕ್ರೀಡಾಲೋಕಕ್ಕೆ ಅಂತಾರಾಷ್ಟ್ರೀಯ ಈಜುಕೊಳ ಲೋಕಾರ್ಪಣೆ

ಮಂಗಳೂರು : ಮಂಗಳೂರು ನಗರದ ಎಮ್ಮೆಕೆರೆಯಲ್ಲಿ ನಿರ್ಮಾಣವಾಗಿರುವ ಅಂತಾರಾಷ್ಟ್ರೀಯ ಈಜುಕೊಳವು ಶುಕ್ರವಾರ (ನ.24) ಲೋಕಾರ್ಪಣೆಗೊಳ್ಳಲಿದ್ದು, ಆ ಮೂಲಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾನದಂಡದ ಕ್ರೀಡಾ ಮೂಲಸೌಲಭ್ಯಗಳು ಮಂಗಳೂರು ನಗರಕ್ಕೆ ಪಾದಾರ್ಪಣೆಗೊಳ್ಳಲಿದೆ.

ಜಿಲ್ಲಾಡಳಿತ, ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಕ್ರೀಡಾ ಅಭಿವೃದ್ಧಿ ವಲಯದಲ್ಲಿ ತನ್ನ ಮೂಲ ಭಾಗವಾಗಿ ಎಮ್ಮೆಕೆರೆಯಲ್ಲಿ ಸಮುದಾಯ ಮಟ್ಟದ ಅಂತಾರಾಷ್ಟ್ರೀಯ ಒಲಿಂಪಿಕ್ ಗುಣಮಟ್ಟದ ಈಜುಕೊಳವನ್ನು ನಿರ್ಮಿಸಲಾಗಿದೆ. ಸುಮಾರು 2 ಎಕರೆ ಜಾಗದಲ್ಲಿ 24.94 ಕೋಟಿ ರೂಪಾಯಿ ವೆಚ್ಚದಲ್ಲಿ ಈಜುಕೊಳವು ನಿರ್ಮಾಣಗೊಂಡಿದೆ.

ಅಂತಾರಾಷ್ಟ್ರೀಯ ಈಜು ಒಕ್ಕೂಟದ ನಿಖರವಾದ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಲಾದ ಈಜುಕೊಳ ಸಂಕೀರ್ಣವು 50ಮೀ ಉದ್ದ, 25ಮೀ ಅಗಲ ಮತ್ತು 2.2ಮೀ ನಿಂದ 1.4ಮೀ ವರೆಗಿನ ಆಳವನ್ನು ಹೊಂದಿರುವ ಸ್ಪರ್ಧಾತ್ಮಕ ಪೂಲ್ ಹೊಂದಿದೆ. ಸ್ಪರ್ಧೆಯ ಪೂಲ್ ಜೊತೆಗೆ, ಕ್ರೀಡಾಪಟುಗಳಿಗೆ ತರಬೇತಿಗಾಗಿ 25 ಮೀ ಉದ್ದ, 10 ಅಗಲ ಮತ್ತು 2.2 ಮೀ ಆಳದ ಅಭ್ಯಾಸ ಪೂಲ್ ಅನ್ನು ನಿರ್ಮಿಸಲಾಗಿದೆ. ಇದಲ್ಲದೇ, ಸ್ಪರ್ಧಾತ್ಮಕ ಈಜು ಕ್ರೀಡೆಗಳಿಗೆ ಮಕ್ಕಳನ್ನು ಆರಂಭಿಕ ಹಂತದಲ್ಲೇ ತರಬೇತುಗೊಳಿಸುವ ಉದ್ದೇಶದಿಂದ ಪಕ್ಕದಲ್ಲಿಯೇ 13.8ಮೀ ಉದ್ದ, 10ಮೀ ಅಗಲ ಮತ್ತು 1.2ಮೀ ಆಳದ ಪುಟಾಣಿ ಈಜುಕೊಳ ಸಹ ನಿರ್ಮಿಸಲಾಗಿದೆ.

ಸಾಮಾನ್ಯವಾಗಿ ಈಜುಕೊಳವನ್ನು ನೆಲದಲ್ಲಿಯೇ ನಿರ್ಮಿಸಲಾಗುತ್ತಿದೆ. ಆದರೆ, ಮಂಗಳೂರು ಅಂತಾರಾಷ್ಟ್ರೀಯ ಈಜುಕೊಳದ ವೈಶಿಷ್ಟ್ಯವೇನೆಂದರೆ, ನೆಲದಿಂದ +7.0ಮೀ ಡೆಕ್ ಮಟ್ಟದ ಎತ್ತರದಲ್ಲಿ ನಿರ್ಮಿಸಲಾಗಿದೆ. ಇದರಿಂದ ಈಜುಕೊಳದ ನೆಲಮಹಡಿಯಲ್ಲಿ ವಾಹನ ನಿಲುಗಡೆ ಪಾರ್ಕಿಂಗ್‍ಗೆ ಸಾಕಷ್ಟು ಸ್ಥಳಾವಕಾಶ ಲಭ್ಯವಾಗಿದೆ. ದೇಶದ ಕೆಲವೇ ಕಡೆಗಳಲ್ಲಿ ಇಂತಹ ಈಜುಕೊಳಗಳನ್ನು ನಿರ್ಮಿಸಲಾಗಿದೆ.

ಈ ಅಂತಾರಾಷ್ಟ್ರೀಯ ಈಜುಕೊಳ ಸಂಕೀರ್ಣದಲ್ಲಿ ಸ್ಪರ್ಧಾಳು ಈಜುಪಟುಗಳಿಗೆ ವಸತಿ ನಿಲಯಗಳು, ಜಿಮ್ನಾಷಿಯಂ, ಬಟ್ಟೆ ಬದಲಾಯಿಸುವ ಕೊಠಡಿಗಳು, ಶೌಚಾಲಯಗಳು, ಲಾಕರ್‍ಗಳು, ಆಡಳಿತ ಕಚೇರಿ ಮತ್ತು ಕ್ರೀಡಾ ಔಷಧ ಮತ್ತು ಚಿಕಿತ್ಸಾ ಕೊಠಡಿಗಳು, ಫಿಸಿಯೋಥೆರಪಿ ಕೇಂದ್ರ ಸೇರಿದಂತೆ ಅಂತರರಾಷ್ಟ್ರೀಯ ಈಜು ಸ್ಪರ್ಧೆಯಂತಹ ಕಾರ್ಯಕ್ರಮಗಳನ್ನು ನಡೆಸಲು ಬೇಕಾದ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಹೊಂದಿದೆ.

ಈಜು ಸ್ಪರ್ಧೆ ಸಂದರ್ಭದಲ್ಲಿ ನೋಡಲು ಬರುವ ವೀಕ್ಷಕರಿಗೂ ಉತ್ತಮ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಈ ತೆರೆದ ಆಕಾಶ ಈಜುಕೊಳದಲ್ಲಿ 400 ಜನರ ಸಾಮಥ್ರ್ಯದ ವೀಕ್ಷಕರ ಗ್ಯಾಲರಿಯನ್ನು ಹೊಂದಿದೆ. ವೀಕ್ಷಕರಿಗೆ ತಂಪಾದ ಗಾಳಿ ಬೀಸಲು ಬೃಹತ್ ಗಾತ್ರದ ಫ್ಯಾನುಗಳನ್ನು ಅಳವಡಿಸಲಾಗಿದೆ. ವೀಕ್ಷಕರ ಆಸನದ ಎದುರು ಭಾಗದಲ್ಲಿ ಈಜುಗಾರರು, ಅಧಿಕಾರಿಗಳು, ತರಬೇತುದಾರರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ನಿಗಧಿಪಡಿಸಲಾಗಿದೆ.

ಎತ್ತರದಲ್ಲಿರುವ ಈಜುಕೊಳ ಹಾಗೂ ವೀಕ್ಷಕರ ಗ್ಯಾಲರಿ ಪ್ರವೇಶಿಸಲು 2 ಸುಸಜ್ಜಿತ ಲಿಫ್ಟ್ ಸೌಲಭ್ಯ ನಿರ್ಮಿಸಲಾಗಿದೆ. ಅಂತಾರಾಷ್ಟ್ರೀಯ ಈಜುಕೊಳದ ನೀರಿನೊಳಗೆ ಸಂಪೂರ್ಣ ಬೆಳಕು ಮೂಡುವಂತೆ ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಸಾರವಾಗಿ ಲೈಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ರಾತ್ರಿ ವೇಳೆಯಲ್ಲಿ ಈ ಈಜುಕೊಳವು ಆಕರ್ಷಕ ವರ್ಣದ ಬೆಳಕಿನಿಂದ ಮೂಡಿಬರಲಿದೆ. ಈಜುಕೊಳದಲ್ಲಿ ನೀರು ಹೆಚ್ಚಾದರೆ (ಓವರ್‍ಫ್ಲೋ) ಹರಿಯಲು ಚಾನೆಲ್ ವ್ಯವಸ್ಥೆ, ಆರಂಭಿಕ ಬ್ಲಾಕ್‍ಗಳು ಮತ್ತು ಈಜುಕೊಳದೊಳಗೆ ಪ್ರತೀ ಸ್ಪರ್ಧಾಳುಗಳಿಗೆ ಪ್ರತ್ಯೇಕ ಲೇನ್ ವಿಭಜಕಗಳು ಪೂರ್ಣಗೊಂಡಿದೆ. ಇಡೀ ಈಜುಕೊಳ ಸಂಕೀರ್ಣದ ಬಹುತೇಕ ಕಾಮಗಾರಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಸಾಮಾಗ್ರಿಗಳಿಂದ ನಿರ್ಮಿಸಲಾಗಿದೆ.

ಈ ಅಂತಾರಾಷ್ಟ್ರೀಯ ಈಜುಕೊಳದಿಂದ ಮಂಗಳೂರು ನಗರವು ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧಾಕೂಟಗಳಿಗೆ ತೆರೆದುಕೊಂಡಂತಾಗಿದೆ. ಒಲಿಂಪಿಕ್ ಕ್ರೀಡಾಕೂಟದ ಈಜುಕೊಳದ ಗುಣಮಟ್ಟದಲ್ಲಿಯೇ ಇದನ್ನು ನಿರ್ಮಿಸಲಾಗಿದ್ದು, ಕಾಮಗಾರಿಯ ಪ್ರತಿಯೊಂದು ಹಂತದಲ್ಲೂ ನಿಖರವಾದ ಮಾನದಂಡವನ್ನು ಪಾಲಿಸಲಾಗಿದೆ. ಇದು ಮುಂದಿನ ದಿನಗಳಲ್ಲಿ ಮಂಗಳೂರು ನಗರವನ್ನು ಇನ್ನಷ್ಟು ಪ್ರವರ್ಧಮಾನಕ್ಕೆ ಕೊಂಡೊಯ್ಯಲಿದೆ. ಅಲ್ಲದೇ, ಭವಿಷ್ಯದಲ್ಲಿ ಕರಾವಳಿ ಕರ್ನಾಟಕದ ಈಜು ಕ್ರೀಡಾಪಟುಗಳಿಗೆ ಉತ್ತಮ ಅವಕಾಶವನ್ನು ಒದಗಿಸಲಿದೆ.

ರಾಷ್ಟ್ರೀಯ ಮಾಸ್ಟರ್ ಚಾಂಪಿಯನ್‍ಶಿಪ್:

ಮಂಗಳೂರು ಅಂತಾರಾಷ್ಟ್ರೀಯ ಈಜುಕೊಳದ ಉದ್ಘಾಟನಾ ಸಂದರ್ಭದಲ್ಲಿಯೇ ರಾಷ್ಟ್ರೀಯ ಮಾಸ್ಟರ್ ಚಾಂಪಿಯನ್‍ಶಿಪ್ ಈಜು ಸ್ಪರ್ಧೆಯನ್ನೂ ಏರ್ಪಡಿಸಲಾಗಿದ್ದು, ಈಜುಕೊಳಕ್ಕೆ ಮೆರುಗು ತಂದಿದೆ. 3 ದಿನಗಳ ಕಾಲ ನಡೆಯಲಿರುವ ಈ ಸ್ಪರ್ಧಾಕೂಟದಲ್ಲಿ ಈಗಾಗಲೇ ದೇಶದ 29 ರಾಜ್ಯಗಳ 700ಕ್ಕೂ ಅಧಿಕ ಕ್ರೀಡಾಪಟುಗಳು ಈಗಾಗಲೇ ಮಂಗಳೂರು ನಗರಕ್ಕೆ ಆಗಮಿಸಿದ್ದಾರೆ.

ಉದ್ಘಾಟನಾ ಕಾರ್ಯಕ್ರಮ:

ಅಂತರಾಷ್ಟ್ರೀಯ ಈಜುಕೊಳದ ಉದ್ಘಾಟನೆ ನವೆಂಬರ್ 24ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಸ್ಪೀಕರ್ ಯು.ಟಿ. ಖಾದರ್ ಫರೀದ್ ಅವರ ಘನ ಉಪಸ್ಥಿತಿಯಲ್ಲಿ ಅಂತರಾಷ್ಟ್ರೀಯ ಈಜುಕೊಳವನ್ನು ನಗರಾಭಿವೃದ್ಧಿ ಸಚಿವ ಸುರೇಶ್ ಬಿ.ಎಸ್ ಉದ್ಘಾಟಿಸುವರು.

19ನೇ ರಾಷ್ಟ್ರೀಯ ಮಾಸ್ಟರ್ ಚಾಂಪಿಯನ್‍ಶಿಪ್ ಈಜು ಸ್ಪರ್ಧೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದು, ಈಜು ಸ್ಪರ್ಧೆಯ ಸ್ಮರಣಸಂಚಿಕೆಯನ್ನು ಯುವಜನ ಸೇವೆ, ಕ್ರೀಡೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಬಿ ನಾಗೇಂದ್ರ ಬಿಡುಗಡೆ ಮಾಡುವರು. ಅಂತರಾಷ್ಟ್ರೀಯ ಈಜುಕೊಳ ಕಟ್ಟಡದ ವಿಶ್ರಾಂತಿ ಕೊಠಡಿಯನ್ನು ಲೋಕಸಭೆ ಸದಸ್ಯ ನಳಿನ್ ಕುಮಾರ್ ಕಟೀಲ್ ಹಾಗೂ ಈಜುಕೊಳ ಜಿಮ್ ಕೊಠಡಿಯನ್ನು ಮೇಯರ್ ಸುಧೀರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಶಾಸಕ ಡಿ ವೇದವಾಸ್ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

Vishwa News 24

Recent Posts

ಉಡುಪಿ : ರೈಲ್ವೆ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನ ರಕ್ಷಿಸಿದ ರೈಲ್ವೇ ಆರ್. ಪಿ .ಎಫ್ ಪಡೆ – vishwanews24

ಉಡುಪಿ : ರೈಲ್ವೆ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನ ರಕ್ಷಿಸಿದ ರೈಲ್ವೇ ಆರ್. ಪಿ .ಎಫ್ ಪಡೆ ಉಡುಪಿ: ಇಂದ್ರಾಳಿ…

4 hours ago

ಆದಿಚುಂಚನಗಿರಿ ಮಠದ ಗುರುಭೈರವೈಕ್ಯ ಮಂದಿರ ಉದ್ಘಾಟಿಸಿದ ಪ್ರಧಾನಿ ಮೋದಿ – vishwanews24

ಆದಿಚುಂಚನಗಿರಿ ಮಠದ ಗುರುಭೈರವೈಕ್ಯ ಮಂದಿರ ಉದ್ಘಾಟಿಸಿದ ಪ್ರಧಾನಿ ಮೋದಿ ಮಂಡ್ಯ: ಆದಿಚುಂಚನಗಿರಿ ಮಠದಲ್ಲಿ ದ್ರಾವಿಡ-ಹೊಯ್ಸಳ ಶೈಲಿಯ ಶಿಲ್ಪಕಲೆಯಿಂದ ನಿರ್ಮಿಸಿರುವ ಶ್ರೀಗುರು…

4 hours ago

ಮಂಗಳೂರು : ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕೇಂದ್ರದ ವಿರುದ್ಧ  ಕಾಂಗ್ರೆಸ್ ಪ್ರತಿಭಟನೆ – vishwanews24

ಮಂಗಳೂರು : ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕೇಂದ್ರದ ವಿರುದ್ಧ  ಕಾಂಗ್ರೆಸ್ ಪ್ರತಿಭಟನೆ ಕೇಂದ್ರ ಸರಕರದ ಅಸ್ಪಷ್ಟ ವಿದೇಶಾಂಗ…

5 hours ago

ಕೊಂಕಣ ರೈಲ್ವೆ: ಬೈಂದೂರಿನಲ್ಲಿ ಕ್ರಾಸಿಂಗ್ ಸ್ಟೇಶನ್ ನಿರ್ಮಾಣಕ್ಕೆ ಪ್ರಸ್ತಾವನೆ – vishwanews24

ಕೊಂಕಣ ರೈಲ್ವೆ: ಬೈಂದೂರಿನಲ್ಲಿ ಕ್ರಾಸಿಂಗ್ ಸ್ಟೇಶನ್ ನಿರ್ಮಾಣಕ್ಕೆ ಪ್ರಸ್ತಾವನೆ ಉಡುಪಿ : ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳನ್ನು -ಉತ್ತರ ಕನ್ನಡ,…

5 hours ago

ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ: ಬೆಳ್ಳೆ ಗ್ರಾ.ಪಂ.ಗೆ ಕೇಂದ್ರ ತಂಡ ಭೇಟಿ -vishwanews24

ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ: ಬೆಳ್ಳೆ ಗ್ರಾ.ಪಂ.ಗೆ ಕೇಂದ್ರ ತಂಡ ಭೇಟಿ ಶಿರ್ವ : ಆತ್ಮ ನಿರ್ಭರ ಭಾರತ ರಾಷ್ಟ್ರೀಯ ಪ್ರಶಸ್ತಿಗೆ…

5 hours ago

ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಪ್ರಮಾಣವಚನ ಸ್ವೀಕಾರ -vishwanews24

ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಪ್ರಮಾಣವಚನ ಸ್ವೀಕಾರ ಪಾಟ್ನಾ: ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ…

5 hours ago