ಬೆಂಗಳೂರು; ಕರ್ನಾಟಕದ ದಿಟ್ಟ ಹಾಗೂ ನಿಷ್ಟಾವಂತ ಐಪಿಎಸ್ ಅಧಿಕಾರಿ ಎಂದೇ ಖ್ಯಾತಿ ಪಡೆಯುತ್ತಿರುವ ರವಿ ಚನ್ನಣ್ಣನವರ್ ಅವರು ಈಗಾಗಲೇ ಮೈಸೂರು ಹಾಗೂ ಶಿವಮೊಗ್ಗದ ಲಕ್ಷಾಂತರ ಜನರ ಅಭಿಮಾನವನ್ನು ಗಳಿಸಿದ್ದು, ಇದೀಗ ತಮ್ಮ ಶಕ್ತಿಯುತ ಮಾತನಿಂದಾಗಿ ಬೆಂಗಳೂರಿಗರ ಮನವನ್ನೂ ಗೆದ್ದಿದ್ದಾರೆ.
ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿರುವ ರವಿಚೆನ್ನಣ್ಣನವರ್ ಅವರು, ಬೀದಿ ವ್ಯಾಪಾರಿಗಳನ್ನು ತಮ್ಮ ಕಚೇರಿಗೆ ಕರೆಸಿಕೊಂಡು ನಡೆಸಿದ ಸಭೆಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ರವಿ ಅವರ ಮಾತುಗಳಿಗೆ ಬೆಂಗಳೂರು ಜನತೆ ಮನಸೋತಿದ್ದಾರೆ.
ಬೀದಿ ಬದಿಯಲ್ಲಿರುವ ವ್ಯಾಪಾರಿಗಳನ್ನು ಕಡೆಗಣನೆಯಿಂದ ನೋಡುತ್ತಿರುವ ಈ ದಿನಗಳಲ್ಲಿ, ರವಿ ಚನ್ನಣ್ಣನವರ್ ಅವರು ಬೀದಿ ವ್ಯಾಪಾರಿಗಳೊಂದಿಗೆ ಪ್ರೀತಿಯಿಂದ ಮಾತನಾಡಿರುವುದಕ್ಕೆ ಹಲವು ಮೆಚ್ಚುಗೆಗಳು ವ್ಯಕ್ತವಾಗತೊಡಗಿವೆ.
ಮೆಜೆಸ್ಟಿಕ್ ಎಂದಾಕ್ಷಣ ಜನರದಲ್ಲಿ ಭಯದ ವಾತಾವರಣ ಇದೆ. ಮೆಜೆಸ್ಟಿಕ್ ನಲ್ಲಿ ಮೋಸವಾಗುತ್ತದೆ, ಪಿಕ್ ಪಾಕೆಟ್ ಆಗುತ್ತದೆ ಎಂದು ಹೇಳಲಾಗುತ್ತಿದೆ. ಇಂತಹ ಘಟನೆಗಳ ಬಗ್ಗೆ ಶೀಘ್ರಗತಿಯಲ್ಲಿ ಮಾಹಿತಿ ನೀಗುವುದು ಇಲ್ಲಿನ ವ್ಯಾಪಾರಿಗಳಿಗೆ. ಕೂಡಲೇ ನಮಗೆ ಮಾಹಿತಿ ಕೊಡಿ, ನಾವು ಕ್ರಮ ಕೈಗೊಳ್ಳುತ್ತೇವೆ. ಮೆಜೆಸ್ಟಿಕ್’ನ್ನು ಉತ್ತಮ ವಾತಾವರಣದ ಪ್ರದೇಶವನ್ನಾಗಿ ನಿರ್ಮಿಸೋಣ, ಇದಕ್ಕೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಬಳಿಕ ಬೀದಿ ವ್ಯಾಪಾರಿಗಳೊಂದಿಗೆ ಪ್ರೀತಿಯಿಂದ ಮಾತನಾಡಿರುವ ಅವರು, ಮಕ್ಕಳ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಬೀದಿ ವ್ಯಾಪಾರಗಳೇನಿದ್ದರೂ ನಿಮಗೆ ಕೊನೆಯದಾಗಲಿ.ನಿಮ್ಮ ಮಕ್ಕಳಿಗೂ ಅದು ಮುಂದುವರೆಯಬಾರದು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಬೆಂಗಳೂರಿನಲ್ಲಿ ಶಿಕ್ಷಣ ಕೊಡಿಸುವುದು ಕಷ್ಟ. ಮೈಸೂರಿನಲ್ಲಿ ಓದಿಸುವುದಾದರೆ, ಕರೆದುಕೊಂಡು ಬನ್ನಿ, ನಾನು ಶಿಕ್ಷಣ ಕೊಡಿಸುತ್ತೇನೆ. ಹಾಸ್ಟೆಲ್ ನಲ್ಲಿ ಸೇರಿಸಿ ಓದಿಸುವ ಕೆಲಸವನ್ನು ಮಾಡಿಸುತ್ತೇನೆ. ದಾಳಿಗಳಿಂದಲೇ ನಡೆಯುತ್ತಿರುವ ಶಾಲೆಯೊಂದರಲ್ಲಿ ನಿಮ್ಮ ಮಕ್ಕಳನ್ನು ಸೇರಿಸುತ್ತೇನೆ. ಹೈಸ್ಕೂಲ್ ನಿಂದ ಹಿಡಿದು, ಪಿಯುಸಿ,ಡಿಗ್ರಿಯವರೆಗೂ ಶಿಕ್ಷಣ ಕೊಡಿಸುತ್ತೇನೆಂದು ಬೀದಿ ವ್ಯಾಪಾರಿಗಳ ಮನಗೆದ್ದಿದ್ದಾರೆ.