ಬಜಪೆ: ಇಲ್ಲಿನ ದೊಡ್ಡಿಕಟ್ಟದ ಶ್ರೀ ಸ್ವಯಂ ಭೂಲಿಂಗೇಶ್ವರ ದೇವಸ್ಥಾನದ ಬಳಿ MSEZ ಆವರಣ ಗೋಡೆ ಬಳಿ ತೋಡಿಗೆ ಅಡ್ಡವಾಗಿ ಮಣ್ಣು ಹಾಕಿ ನಿರ್ಮಿಸಿದ್ದ ಕಟ್ಟೆ ಮತ್ತು ರಸ್ತೆ ನೀರಿನ ಒತ್ತಡಕ್ಕೆ ಒಡೆದುಹೋದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಹಠಾತ್ ಪ್ರವಾಹದಿಂದ ಸಮೀಪದ ಶ್ರೀ ಸ್ವಯಂ ಭೂಲಿಂಗೇಶ್ವರ ದೇವಸ್ಥಾನ, ಮನೆ ಮಧ್ಯರಾತ್ರಿ ಅರ್ಧಮುಳುಗಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಜಮೀನು, ಕೃಷಿ ಹಾಗೂ ಸೊತ್ತುಗಳಿಗೆ ಅಪಾರ ಹಾನಿ ಉಂಟಾಗಿದೆ. ಪೆರ್ಮುದೆಯ ಮೆನ್ಗಲ್ ಪದವಿನಿಂದ ಹರಿಯುವ ದೊಡ್ಡ ತೋಡಿಗೆ ದೊಡ್ಡಿಕಟ್ಟದಲ್ಲಿ MSEZ ವ್ಯಾಪ್ತಿಯ ಒಳಗೆ ಗುಡ್ಡಗಳ ನಡುವೆ ಮಣ್ಣು ತುಂಬಿಸಿ ಅಣೆಕಟ್ಟೆ ನಿರ್ಮಿಸಲಾಗಿತ್ತು. ಹೆಚ್ಚಿನ ನೀರು ಹೊರಕ್ಕೆ ಹರಿಯಲು ಪೈಪು ಅಳವಡಿಸಲಾಗಿತ್ತಾದರೂ ಅವುಗಳಲ್ಲಿ ಹೂಳು ತುಂಬಿತ್ತು. ಇದರಿಂದಾಗಿ ಈ ಬಾರಿ ನೀರು ಸುಮಾರು 40 ಅಡಿಗಳಷ್ಟು ಸಂಗ್ರಹಗೊಂಡಿತ್ತು. ಅಪಾಯ ಇದೆ ಎಂದು MSEZ ಎಂಜಿನಿಯರ್ ಗೆ ಸ್ಥಳೀಯರು ಮುನ್ಸೂಚನೆ ನೀಡಿದ್ದರಾದರೂ ಅವರು ಆ ಬಗ್ಗೆ ಗಮನ ಹರಿಸಿರಲಿಲ್ಲ.
1 ಗಂಟೆ ಭೀತಿಯ ವಾತಾವರಣ
ಸುಮಾರು ಒಂದು ತಾಸು ನಾವು ತೀರಾ ಹೆದರಿದ್ದೆವು. ಮರ ಬಿದ್ದು 4-5 ವಿದ್ಯುತ್ ಕಂಬಗಳು ಬಿದ್ದಿದ್ದು, ವಿದ್ಯುತ್ ಇರಲಿಲ್ಲ. ಮೊಬೈಲ್ ಫೋನ್ ನೀರಲ್ಲಿ ಎಲ್ಲೋ ಹೋಗಿತ್ತು. ಎಲ್ಲೆಡೆಯಿಂದ ನೀರು ನುಗ್ಗಿದ್ದರಿಂದ ಏನೂ ಮಾಡಲಾರದ ಸ್ಥಿತಿ ಇತ್ತು. ಸುಮಾರು ಅರ್ಧ ಗಂಟೆಯ ಬಳಿಕ ನೀರು ಇಳಿಯಲಾರಂಭಿಸಿತು. ನಾವು ಮಂಚದ ಮೇಲೆ ನಿಂತಿದ್ದರೂ ಎದೆಮಟ್ಟ ನೀರು ಬಂದಿತ್ತು. ಬದುಕಿದ್ದೇ ಹೆಚ್ಚು ಎಂದು ಹಾನಿಗೀಡಾದ ಮನೆಯ ಮಾಲಕ ಮಾಧವ ಅಮೀನ್ ವಿವರಿಸಿದರು.
ನೀರು ನುಗ್ಗುವ ರಭಸಕ್ಕೆ ಹಲವು ಮರಗಳು ಧರಾಶಾಯಿಯಾಗಿದ್ದವು. ಅಡಿಕೆ ಮರ ಮನೆಗೆ ನುಗ್ಗುವ ಮಟ್ಟಕ್ಕೆ ಬಂದಿತ್ತು. ಮನೆಯ ಹೊರಾಂಗಣದಲ್ಲಿದ್ದ ಸೋಪಾ ಛಾವಣಿಗೆ ಸಿಲುಕಿದೆ. ಕುರ್ಚಿ, ಮೇಜು ಇನ್ನೂ ಪತ್ತೆಯಾಗಿಲ್ಲ. ದೈವಸ್ಥಾನದ ಕಾಣಿಕೆ ಡಬ್ಬಿ, ಕುರ್ಚಿ, ಮೇಜುಗಳು ಕೊಚ್ಚಿ ಹೋಗಿವೆ. ಬೈಕ್, ಸ್ಕೂಟರ್ಗಳು ಕೊಚ್ಚಿ ಹೋಗಿವೆ. ಜೀಪಿಗೆ ಮಣ್ಣು ತುಂಬಿದೆ. ಪಂಪ್ ಸೆಟ್ ಸ್ವಿಚ್ಬೋರ್ಡ್ ಅಷ್ಟೇ ಕಾಣಿಸುತ್ತಿದೆ.
ಭೂಕಂಪ, ಸುನಾಮಿ ಅನುಭವ
ಗುರುವಾರ ರಾತ್ರಿ ಸುಮಾರು 11.45ಕ್ಕೆ ಭೂಕಂಪವಾದ ಹಾಗೆ ಭಾರೀ ಸದ್ದು ಕೇಳಿಸಿತು. ನಾಯಿಗಳು ಒಮ್ಮೆಲೆ ಬೊಗಳಲಾರಂಭಿಸಿದವು. ಕಿಟಕಿಯ ಬಾಗಿಲು ತೆರೆದು ನೋಡಿದಾಗ ಸುನಾಮಿ ರೀತಿಯಲ್ಲಿ ನೀರು ಜಗಲಿ ಏರಿಯಾಗಿತ್ತು. ಕಟ್ಟೆ ಒಡೆದಿದೆ ಎಂದು ತತ್ ಕ್ಷಣ ಊಹಿಸಿದೆ. ಮಂಚದ ಮೇಲೆ ನಿಲ್ಲು ಎಂದು ಪತ್ನಿಗೆ ಸೂಚಿಸಿದೆ. ಮನೆ ಬಾಗಿಲು ನೀರಿನ ರಭಸಕ್ಕೆ ಒಡೆದು ಅಡುಗೆ ಮನೆಯ ಗ್ಯಾಸ್ ಸಿಲಿಂಡರ್, ರೆಫ್ರಿಜರೇಟರ್ ಎಲ್ಲವೂ ನೀರಿನೊಂದಿಗೆ ಮುಂದಿನ ಕೋಣೆಗೆ ಬಂದವು. ಮನೆ ಸಾಮಗ್ರಿ ಚೆಲ್ಲಾಪಿಲ್ಲಿಯಾಗಿ ತೇಲಿ ಹೋದವು. ನಾಲ್ಕೂ ಕಡೆಗಳಿಂದ ನೀರು ಒಳ ನುಗ್ಗಿತ್ತು.
ಜನಪ್ರತಿನಿಧಿ, ಅಧಿಕಾರಿಗಳ ಭೇಟಿ
ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. MSEZ ಅಧಿಕಾರಿಗಳೊಂದಿಗೆ ಮಾತನಾಡಿ, ಮನೆ ಹಾಗೂ ದೇವಸ್ಥಾನಕ್ಕೆ ಸೂಕ್ತ ನಷ್ಟ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ. ಘಟನೆಯ ಬಗ್ಗೆ ಡಿಸಿಗೆ ವರದಿ ಸಲ್ಲಿಸಲಾಗುವುದು. ಈ ಸಮಸ್ಯೆಗೆ ಕಾರಣರಾದವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ವೈಶಾಲಿ ಹೇಳಿದ್ದಾರೆ. ಸ್ಥಳಕ್ಕೆ ಅಭಯಚಂದ್ರ, ಐವನ್ ಡಿ’ಸೋಜಾ, ತಹಶೀಲ್ದಾರರು, ಬಜಪೆ ಪೊಲೀಸ್ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಸೂಕ್ತ ಪರಿಹಾರದ ಭರವಸೆ
ದೊಡ್ಡಿಕಟ್ಟದಲ್ಲಿ ಸಂಭವಿಸಿರುವ ಅನಾಹುತದ ಕುರಿತಂತೆ ಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಘಟನೆಯಿಂದ ಹಾನಿ ಸಂಭವಿಸಿದ ಕಡೆಗೆ ಸೂಕ್ತ ಪರಿಹಾರ ನೀಡಲಾಗುವುದು. ಈ ಬಗ್ಗೆ ಪೂರಕ ಕ್ರಮಗಳನ್ನು ಸಂಸ್ಥೆಯ ವತಿಯಿಂದ ಶೀಘ್ರದಲ್ಲಿ ಕೈಗೊಳ್ಳಲಾಗುವುದು. ಅಲ್ಲಿನ ಮನೆ, ದೇವಸ್ಥಾನ ಈ ಮೊದಲು ಹೇಗಿತ್ತೋ ಅದೇರೀತಿ ಮರುವ್ಯವಸ್ಥೆ ಮಾಡಿಕೊಡಲಾಗುವುದು ಎಂದು MSEZನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…