ಲಂಡನ್ :ಕೋಟ್ಯಂತರ ರೂಪಾಯಿ ಬ್ಯಾಂಕ್ ಹಗರಣ ನಡೆಸಿ ಭಾರತದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಲಂಡನ್ ನ್ಯಾಯಾಲಯದಿಂದ ಮತ್ತೊಂದು ಕಾನೂನು ಹಿನ್ನಡೆ ಎದುರಾಗಿದೆ.
ಬ್ಯಾಂಕ್ ಆಫ್ ಇಂಡಿಯಾ ದಾಖಲಿಸಿದ್ದ ಸಾಲ ವಸೂಲಾತಿ ಪ್ರಕರಣದಲ್ಲಿ ಬ್ಯಾಂಕ್ ಪರವಾಗಿ ತೀರ್ಪು ಬಂದಿದ್ದು, ನೀರವ್ ಮೋದಿ ಬ್ಯಾಂಕಿಗೆ ಬರೋಬ್ಬರಿ 10.7 ಮಿಲಿಯನ್ ಡಾಲರ್ (ಅಂದರೆ 100 ಕೋಟಿ ರೂಪಾಯಿಗೂ ಹೆಚ್ಚು) ಹಣವನ್ನು ಮರುಪಾವತಿಸಬೇಕು ಎಂದು ನ್ಯಾಯಾಲಯ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಈ ಪ್ರಕರಣದಲ್ಲಿ ನೀರವ್ ಮೋದಿ ತಾನೇ ಬರೆದಿದ್ದ ಹಳೆಯ ಇ-ಮೇಲ್ನಿಂದಾಗಿ ಕಾನೂನು ಬಲೆಗೆ ಸಿಲುಕಿಕೊಂಡಿದ್ದಾರೆ. ನ್ಯಾಯಾಲಯದಲ್ಲಿ ನೀರವ್ ಮೋದಿ, ಬ್ಯಾಂಕ್ ಸಾಲ ವಸೂಲಾತಿ ಮಾಡುವ ಮುನ್ನ ನನಗೆ ಯಾವುದೇ ಸರಿಯಾದ ನೋಟಿಸ್ ಅಥವಾ ಮಾಹಿತಿ ನೀಡಿಲ್ಲ, ಹಾಗಾಗಿ ನನ್ನ ಪರ್ಸನಲ್ ಗ್ಯಾರಂಟಿ ಬಳಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ವಾದಿಸಿದ್ದರು.
ಆದರೆ ನ್ಯಾ. ಸೈಮನ್ ಟಿಂಕ್ಲರ್ ಅವರು ಫೆಬ್ರವರಿ 17, 2018 ರಂದು ನೀರವ್ ಮೋದಿ ಅವರೇ ಬ್ಯಾಂಕಿಗೆ ಬರೆದಿದ್ದ ಇ-ಮೇಲ್ ಒಂದನ್ನು ಕೋರ್ಟ್ನಲ್ಲಿ ಪ್ರದರ್ಶಿಸಿ ಅವರ ಸುಳ್ಳನ್ನು ಬಯಲು ಮಾಡಿದರು. ಆ ಇ-ಮೇಲ್ನಲ್ಲಿ ನೀರವ್ ಮೋದಿ, ಪಿಎನ್ಬಿ ಹಗರಣದ ನಂತರ ನನ್ನ ಇಡೀ ವ್ಯವಹಾರ ತೀವ್ರ ತೊಂದರೆಯಲ್ಲಿದೆ.
ಮಾಧ್ಯಮಗಳ ಒತ್ತಡ ಹಾಗೂ ತನಿಖಾ ಸಂಸ್ಥೆಗಳ ದಾಳಿಯಿಂದಾಗಿ ನನ್ನ ಫೈರ್ಸ್ಟಾರ್ ಕಂಪನಿಗಳ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಹೀಗಾಗಿ ನಾನು ಬ್ಯಾಂಕ್ ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ವತಃ ಬರೆದುಕೊಂಡಿದ್ದರು. ಈ ಮೂಲಕ ತನಗೆ ಪರಿಸ್ಥಿತಿಯ ಸಂಪೂರ್ಣ ಅರಿವಿತ್ತು ಎಂಬುದನ್ನು ಅವರ ಇ-ಮೇಲ್ ಸಾಬೀತುಪಡಿಸಿದೆ ಎಂದು ನ್ಯಾಯಾಲಯ ಹೇಳಿದೆ.
ಜುಲೈ 2012 ರಲ್ಲಿ, ಬ್ಯಾಂಕ್ ಆಫ್ ಇಂಡಿಯಾ ನೀರವ್ ಮೋದಿಯ ಫೈರ್ಸ್ಟಾರ್ ಗ್ರೂಪ್ನ ದುಬೈ ಮೂಲದ ಕಂಪನಿಗೆ ಭಾರಿ ಮೊತ್ತದ ಸಾಲ ನೀಡಿತ್ತು. ಆಗಸ್ಟ್ 2013 ರಲ್ಲಿ ನೀರವ್ ಮೋದಿ, ಒಂದು ವೇಳೆ ಕಂಪನಿ ಸಾಲ ತೀರಿಸದಿದ್ದರೆ ತನ್ನ ವೈಯಕ್ತಿಕ ಆಸ್ತಿಯಿಂದ ಸಾಲ ಮರುಪಾವತಿಸುವುದಾಗಿ ವೈಯಕ್ತಿಕ ಗ್ಯಾರಂಟಿ ದಾಖಲೆಗೆ ಸಹಿ ಹಾಕಿದ್ದರು. 2018 ರಲ್ಲಿ ಹಗರಣ ಬಯಲಾದಾಗ ಬ್ಯಾಂಕ್ ತನ್ನ ಹಣವನ್ನು ವಾಪಸ್ ಕೇಳಿತ್ತು.
ಭಾರತಕ್ಕೆ ಹಸ್ತಾಂತರಿಸುವುದನ್ನು ತಪ್ಪಿಸಲು ಸದ್ಯ ಲಂಡನ್ ಜೈಲಿನಲ್ಲಿರುವ ನೀರವ್ ಮೋದಿ, ಪ್ರಕರಣದಿಂದ ತಪ್ಪಿಸಿಕೊಳ್ಳಲು ಹೂಡಿದ ಮೂರು ತಂತ್ರಗಳನ್ನು ನ್ಯಾಯಮೂರ್ತಿಗಳು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.ಬ್ಯಾಂಕ್ ನೇರವಾಗಿ ನೀರವ್ ಮೋದಿ ಇರುವ ಲಂಡನ್ನ ‘ಥೇಮ್ಸೈಡ್ ಜೈಲಿ’ಗೇ ನೋಟಿಸ್ಗಳನ್ನು ತಲುಪಿಸಿದೆ.
ಪಿಎನ್ಬಿ ಹಗರಣದ ಬಳಿಕ ನೀರವ್ ಮೋದಿಯ ಇಡೀ ಕಂಪನಿಯ ಮೌಲ್ಯ ಶೂನ್ಯವಾಗಿದೆ. ಆದ್ದರಿಂದ ತನ್ನ ಹಣವನ್ನು ಭದ್ರಪಡಿಸಿಕೊಳ್ಳಲು ಬ್ಯಾಂಕ್ ಸಾಲ ಮರುಪಾವತಿಗೆ ಒತ್ತಾಯಿಸಿದ್ದು ನೂರಕ್ಕೆ ನೂರು ಸರಿ ಇದೆ ಎಂದು ಕೋರ್ಟ್ ಹೇಳಿದೆ.
ನೀರವ್ ಮೋದಿ ಅವರು ತಮ್ಮ ವೈಯಕ್ತಿಕ ಖಾತರಿಯಡಿಯಲ್ಲಿ ಬ್ಯಾಂಕಿಗೆ ಅಸಲು ಮೊತ್ತ 4.1 ಮಿಲಿಯನ್ ಡಾಲರ್ (ಸುಮಾರು 38.9 ಕೋಟಿ ರೂ.) ಮತ್ತು ಅದರ ಮೇಲಿನ ಎಲ್ಲಾ ಬಡ್ಡಿಯನ್ನು (ಒಟ್ಟು 100 ಕೋಟಿ ರೂ. ಹೆಚ್ಚು) ತಕ್ಷಣವೇ ಮರುಪಾವತಿಸಲು ನೇರ ಹೊಣೆಗಾರರಾಗಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಸೈಮನ್ ಟಿಂಕ್ಲರ್ ಅಂತಿಮ ಆದೇಶ ಪ್ರಕಟಿಸಿದ್ದಾರೆ.
ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…
ರಾಜ್ಯ ಸರ್ಕಾರದಿಂದ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …
ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…
ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…
ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…
ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್ಟೇಬಲ್…