ಕಿನ್ನಿಗೋಳಿಯ ಐಕಳದಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ್ ಗೌಡ ಕಂಬಳದ ದಾಖಲೆ ಬರೆದಿದ್ದರು. ಆದರೆ ಇದೀಗ ಶ್ರೀನಿವಾಸಗೌಡರ ದಾಖಲೆಯನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೊಳಿ ನಿಶಾಂತ್ ಶೆಟ್ಟಿ ಮುರಿದಿದ್ದಾರೆ.
ವೇಣೂರಿನಲ್ಲಿ ನಡೆದ ಕಂಬಳ ಓಟದಲ್ಲಿ ನಿಶಾಂತ್ ಶೆಟ್ಟಿ ಅವರು 143 ಮೀಟರ್ ದೂರವನ್ನು 13.61 ಸೆಕೆಂಡ್ನಲ್ಲಿ ಕ್ರಮಿಸಿದ್ದಾರೆ. ಶ್ರೀನಿವಾಸ್ ಗೌಡ ಅವರು 142 ಮೀಟರ್ ದೂರವನ್ನು 13.62 ಸೆಕೆಂಡ್ ನಲ್ಲಿ ಓಡಿದ್ದರು. ಶ್ರೀನಿವಾಸ್ ಗೌಡ ಅವರಿಗಿಂತಲೂ ಒಂದು ಮೀಟರ್ ಹೆಚ್ಚಿನ ದೂರವನ್ನು ಒಂದು ಪ್ರಾಕ್ಷನ್ ಆಫ್ ಸೆಕೆಂಡ್ ಕಡಿಮೆ ಸಮಯದಲ್ಲಿ ನಿಶಾಂತ್ ಶೆಟ್ಟಿ ಓಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ನಿಶಾಂತ್ ಶೆಟ್ಟಿ ಇದರಲ್ಲಿ ನಮ್ಮ ಸಾಧನೆ ಏನೂ ಇಲ್ಲ. ಕೋಣಗಳು ಓಡಿದಾಗ ನಾವು ಬೆನ್ನತ್ತಿ ಓಡುತ್ತೇವೆ . ಶ್ರೀನಿವಾಸಗೌಡರ ಸಾಧನೆಯ ಮುಂದೆ ನಮ್ಮದೇನೂ ಇಲ್ಲ. ಅವರು ನೂರೈವತ್ತು ಕ್ಕಿಂತಲೂ ಹೆಚ್ಚು ಮೆಡಲ್ಗಳನ್ನು ಹೊಡೆದಿದ್ದಾರೆ. ಕೆಲವು ದಿನ ಕೆಲವು ಕೋಣಗಳು ಚೆನ್ನಾಗಿ ಓಡುತ್ತವೆ ಎಂದರು.
ಅಲ್ಲದೆ, ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತಕ್ಕಿಂತಲೂ ಹೆಚ್ಚು ಉತ್ತಮ ಓಟಗಾರರು ಇದ್ದೇವೆ. ಕಂಬಳದ ಓಟಗಾರರಿಗೆ ಕರ್ನಾಟಕ ಸರ್ಕಾರ ವಿಮಾ ಸೌಲಭ್ಯವನ್ನು ಕೊಡಬೇಕು ಎಂದು ಮಾಧ್ಯಮಗಳ ಮೂಲಕ ನಿಶಾಂತ್ ಶೆಟ್ಟಿ ಒತ್ತಾಯಿಸಿದರು.