Featured

Karnataka Budget – ರಾಜ್ಯ ಬಜೆಟ್’ನಲ್ಲಿ ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ’ಗೆ ಬಂಫರ್ ಗಿಫ್ಟ್  – ಓದಿ ಸಂಪೂರ್ಣ ಮಾಹಿತಿ – Vishwanews24

Karnataka Budget – ರಾಜ್ಯ ಬಜೆಟ್’ನಲ್ಲಿ ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ’ಗೆ ಬಂಫರ್ ಗಿಫ್ಟ್  – ಓದಿ ಸಂಪೂರ್ಣ ಮಾಹಿತಿ

ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಧಾನಸಭೆಯಲ್ಲಿ ರಾಜ್ಯಬಜೆಟ್ 2024-25 ಮಂಡಿಸುತ್ತಿದ್ದಾರೆ. ಇಂದಿನ ಬಜೆಟ್ ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಬಂಫರ್ ಗಿಫ್ಟ್ ನೀಡಿದ್ದಾರೆ. ಅದು ಏನು ಅನ್ನೋ ಸಂಪೂರ್ಣ ಮಾಹಿತಿ ಮುಂದೆ ಓದಿ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

ಇಂದು ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿ ಮಾತನಾಡಿದಂತ ಸಿಎಂ ಸಿದ್ಧರಾಮಯ್ಯ ಅವರು, ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಜಾಲವನ್ನು ವ್ಯವಸ್ಥಿತವಾಗಿ ಮತ್ತು ಗುಣಾತ್ಮಕವಾಗಿ ಅಭಿವೃದ್ಧಿಪಡಿಸಲು ಪ್ರಗತಿ ಪಥ ಯೋಜನೆಯನ್ನು ಬಾಹ್ಯ ನೆರವಿನೊಂದಿಗೆ ಪ್ರಾರಂಭಿಸಲಾಗುವುದು. ಈ ಯೋಜನೆ ಅಡಿಯಲ್ಲಿ 189 ಗ್ರಾಮೀಣ ವಿಧಾನ ಸಭಾ ಕ್ಷೇತ್ರಗಳಲ್ಲಿ ತಲಾ 50 ಕಿ.ಮೀ. ಉದ್ದದ ರಸ್ತೆಗಳಂತೆ, ಒಟ್ಟಾರೆಯಾಗಿ 9,450 ಕಿ.ಮೀ. ಉದ್ದದ ರಸ್ತೆ ಸಂಪರ್ಕ ಜಾಲವನ್ನು 5,200 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಕಲ್ಯಾಣ ಪಥ ಯೋಜನೆಯಡಿ ಕಲ್ಯಾಣ ಕರ್ನಾಟಕದ 38 ಗ್ರಾಮೀಣ ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ ಮಾದರಿಯಲ್ಲಿ ಒಟ್ಟು 1,150 ಕಿ.ಮೀ. ರಸ್ತೆಗಳನ್ನು 1,000 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಕರ್ನಾಟಕದಲ್ಲಿ ಗ್ರಾಮ ಪಂಚಾಯತಿಗಳು ಆರೋಗ್ಯ ರಕ್ಷಣೆ, ಘನತ್ಯಾಜ್ಯ ನಿರ್ವಹಣೆ, ಗ್ರಂಥಾಲಯ ನವೀಕರಣ ಮುಂತಾದ ಕ್ಷೇತ್ರಗಳಲ್ಲಿ ನಾಯಕತ್ವದ ಸಾಮರ್ಥ್ಯವನ್ನು ಪ್ರದರ್ಶಿಸಿವೆ. ಈ ದಿಸೆಯಲ್ಲಿ ಗ್ರಾಮ ಪಂಚಾಯಿತಿಗಳನ್ನು ಸಾಮಾಜಿಕ ಕಳಕಳಿಯುಳ್ಳ ಸ್ಪಂದನಾಶೀಲ ಹಾಗೂ ಸಮರ್ಥ ಗ್ರಾಮ ಸರ್ಕಾರಗಳನ್ನಾಗಿ ರೂಪಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ನಮ್ಮ ರಾಜ್ಯ ಎಂದಿನಂತೆ ನರೇಗಾ ಯೋಜನೆಯ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದೆ. 2024-25ನೇ ಸಾಲಿನಲ್ಲಿ 16 ಕೋಟಿ ಮಾನವ-ದಿನಗಳನ್ನು ಸೃಜಿಸಿ, ಸುಮಾರು 30 ಲಕ್ಷ ಕುಟುಂಬಗಳಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ. ಪ್ರಮುಖವಾಗಿ ಜಲಾನಯನ ಇಲಾಖೆಯ ಒಗ್ಗೂಡಿಸುವಿಕೆಯೊಂದಿಗೆ 5,000 ಎಕರೆ ಸವಳು-ಜವಳು ಭೂಮಿಯನ್ನು ಸುಧಾರಿಸುವ ಮತ್ತು ಪ್ರತಿ ತಾಲ್ಲೂಕಿಗೆ ಕನಿಷ್ಠ 2ರಂತೆ ಬೂದು ನೀರು ಸಂಸ್ಕರಣಾ ಘಟಕಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದರು.

ಅರಿವು ಕೇಂದ್ರಗಳನ್ನು ಬಲಪಡಿಸುವ ದೃಷ್ಠಿಯಿಂದ 132 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುವುದು ಮತ್ತು ಪುಸ್ತಕಗಳು, ಡಿಜಿಟಲ್‌ ಉಪಕರಣಗಳು ಹಾಗೂ ವಿಕಲಚೇತನ ಸ್ನೇಹಿ ಉಪಕರಣಗಳನ್ನು ಖರೀದಿಸಲಾಗುವುದು ಎಂದರು.

ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ತ್ವರಿತ ಸೇವಾ ಪೂರೈಕೆ, ಭ್ರಷ್ಟಾಚಾರ ನಿಯಂತ್ರಣ ಮತ್ತು ದಕ್ಷತೆಯನ್ನು ಹೆಚ್ಚಿಸಲು ಪ್ರಸಕ್ತ ವರ್ಷ 5 ಉಪ ಕ್ರಮಗಳನ್ನು ಕೈಗೊಳ್ಳಲಿದೆ;

• ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಮಾಡಲಾಗುವುದು.
• ಗ್ರಾಮ ಪಂಚಾಯಿತಿಗಳ ಸಂಪನ್ಮೂಲಗಳನ್ನು ಹೆಚ್ಚಿಸಲು ಗ್ರಾಮ ಪಂಚಾಯಿತಿ ಸ್ವತ್ತುಗಳ Asset Monetisation ನೀತಿಯನ್ನು ಜಾರಿಗೆ ತರಲಾಗುವುದು.
• ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಇ-ಆಫೀಸ್‌ ಅನ್ನು ಪ್ರಾರಂಭಿಸಲಾಗುವುದು.
• ಸೇವಾ ಸಿಂಧು ಪೋರ್ಟಲ್‌ ಮೂಲಕ ಒದಗಿಸಲಾಗುತ್ತಿರುವ ಎಲ್ಲಾ ಸೇವೆಗಳನ್ನು ಈ ವರ್ಷದಿಂದ ಬಾಪೂಜಿ ಸೇವಾ ಕೇಂದ್ರಗಳಲ್ಲೂ ಪ್ರಾರಂಭಿಸಲಾಗುವುದು.
• ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಿಗದಿತ ಶುಲ್ಕ ಪಾವತಿಯೊಂದಿಗೆ ವ್ಯವಹಾರ ಪರವಾನಗಿಗಳ ಸ್ವಯಂಚಾಲಿತ ನವೀಕರಣಕ್ಕೆ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ತರಲಾಗುವುದು.
• ಗ್ರಾಮ ಪಂಚಾಯಿತಿಗಳ ಸಭೆಗಳು ಮತ್ತು ಗ್ರಾಮ ಸಭೆಗಳ ಕಾರ್ಯಕಲಾಪಗಳ ನೇರ ಪ್ರಸಾರ ಮಾಡಲಾಗುವುದು.

ಗ್ರಾಮ ಪಂಚಾಯಿತಿಗಳಲ್ಲಿನ ವಿದ್ಯುತ್ ಬಳಕೆಯ ಮೇಲೆ ನಿಗಾವಹಿಸಲು ಹಾಗೂ ವಿದ್ಯುತ್ ವೆಚ್ಚ ಕಡಿಮೆ ಮಾಡಲು ಪ್ರಾಯೋಗಿಕವಾಗಿ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

50 ಗ್ರಾಮ ಪಂಚಾಯಿತಿಗಳಲ್ಲಿ ಹೊಂಬೆಳಕು ಕಾರ್ಯಕ್ರಮದಡಿ 25 ಕೋಟಿ ರೂ.ಗಳ ವೆಚ್ಚದಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಲಾಗುವುದು. 200 ಗ್ರಾಮ ಪಂಚಾಯಿತಿಗಳಲ್ಲಿ ಬೀದಿ ದೀಪಗಳ ವ್ಯವಸ್ಥಿತ ಮೀಟರಿಂಗ್ ಮಾಡಲಾಗುವುದು. ಪ್ರಸಕ್ತ ಸಾಲಿನಿಂದ ಆಯ್ದ 100 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸ್ಥರ ಸಹಭಾಗಿತ್ವದೊಂದಿಗೆ ಹಿರಿಯ ನಾಗರಿಕರ ಆರೈಕೆ ಮತ್ತು ಚಿಕಿತ್ಸೆಯನ್ನು ನಿರ್ವಹಿಸಲು ಆರೈಕೆ-ಉಪಶಮನ (Palliative Care) ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಪ್ರೇರಣಾ ಕಾರ್ಯಕ್ರಮದಡಿ ಸ್ವಸಹಾಯ ಗುಂಪುಗಳ ಮಹಿಳೆಯರು, ಗ್ರಾಮ ಪಂಚಾಯಿತಿಗಳ ಮಹಿಳಾ ಸದಸ್ಯರು ಹಾಗೂ ಗ್ರಾಮೀಣ ಪ್ರದೇಶದ ಮುಂಚೂಣಿಯ ಕಾರ್ಯಕರ್ತೆಯರಲ್ಲಿ Menstrual Cup ಬಳಕೆಯನ್ನು ಪ್ರೋತ್ಸಾಹಿಸಲಾಗುವುದು. ಇದರ ಮೂಲಕ ಗ್ರಾಮದ ಇತರೆ ಮಹಿಳೆಯರನ್ನು ಇವುಗಳನ್ನು ಬಳಕೆ ಮಾಡಲು ಪ್ರೇರೇಪಿಸಲಾಗುವುದು ಎಂದರು.

ರಾಜ್ಯದ 100 ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರ ಆಕಾಂಕ್ಷೆ ಮತ್ತು ಆಸಕ್ತಿಗೆ ಅನುಗುಣವಾಗಿ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡಲು ಸಾವಿತ್ರಿಬಾಯಿ ಫುಲೆ ಮಹಿಳಾ ಸಬಲೀಕರಣ ಯೋಜನೆಯನ್ನು ಪ್ರಾರಂಭಿಸಲಾಗುವುದು. ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತಲಾ ಒಂದು ಲಕ್ಷ ರೂ. ನೆರವಿನೊಂದಿಗೆ ಎಸ್.ಹೆಚ್.ಜಿ.ಗಳ ಸಹಯೋಗದೊಂದಿಗೆ ಎಣ್ಣೆ ಗಾಣವನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಮೂಲಕ ಕೈಗೊಳ್ಳಲಾಗುತ್ತಿದೆ. ಸದರಿ ವ್ಯವಸ್ಥೆಯನ್ನು ಸುಸ್ಥಿರವಾಗಿ ನಿರ್ವಹಿಸಲು, ತ್ಯಾಜ್ಯವನ್ನು ಕಡಿಮೆ ಮಾಡುವ, ಪುನಃ ಬಳಸುವ ಮತ್ತು ಮರಳಿ ಉಪಯೋಗಿಸುವ ತತ್ವಗಳಾಧಾರಿತ ವರ್ತುಲ ಆರ್ಥಿಕತೆ (Circular Economy) ಮಾದರಿಯನ್ನು ಪ್ರಸಕ್ತ ಸಾಲಿನಿಂದ ಪ್ರೋತ್ಸಾಹಿಸಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ಚುನಾಯಿತ ಸದಸ್ಯರಿಗೆ ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳ ಸದಸ್ಯರಿಗೆ ತರಬೇತಿ ನೀಡಲಾಗುವುದು ಹಾಗೂ ದೇಶದ ಪ್ರಪ್ರಥಮ ವರ್ತುಲ ಆರ್ಥಿಕತೆಯ (Circular Economy) ಪ್ರಯೋಗಾಲಯವನ್ನು ಸ್ಥಾಪಿಸಲು ಎರಡು ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದರು.

ಜೀತ ಕಾರ್ಮಿಕ ಪದ್ಧತಿಯಿಂದ ಬಿಡುಗಡೆಗೊಂಡ ಕಾರ್ಮಿಕರ ಪುನರ್ವಸತಿಗಾಗಿ ನೀಡುವ ಮಾಸಿಕ ಪ್ರೋತ್ಸಾಹಧನವನ್ನು 2,000 ರೂ.ಗಳಿಗೆ ಹೆಚ್ಚಿಸಲಾಗುವುದು. ಈ ಪಿಡುಗಿನ ಪರಿಣಾಮಕಾರಿ ನಿರ್ಮೂಲನೆಗೆ ಪೂರಕವಾಗಿ ಸಂಬಂಧಪಟ್ಟ ಇಲಾಖೆಗಳ ಕ್ಷೇತ್ರಮಟ್ಟದ ಅಧಿಕಾರಿಗಳನ್ನು ಜೀತ ಕಾರ್ಮಿಕ ನಿಷೇಧ ಅಧಿಕಾರಿಗಳಾಗಿ ಅಧಿಸೂಚಿಸಲಾಗುವುದು ಎಂದರು.

ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸರ್ಕಾರದ ಮಾನ್ಯತೆಯುಳ್ಳ ದಾಖಲೆಗಳನ್ನು ಡಿಜಿಲಾಕರ್‌ ಆಪ್‌ನಲ್ಲಿ ಸುರಕ್ಷಿತವಾಗಿರಿಸುವ ಸಲುವಾಗಿ ನನ್ನ ಗುರುತು ಅಭಿಯಾನವನ್ನು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ 1,000 ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.

ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಬೇಕಾದ ಅನುದಾನದ ಸೂತ್ರಗಳ ಬಗ್ಗೆ ಅಧ್ಯಯನ ನಡೆಸಿ, ಸೂಕ್ತ ಶಿಫಾರಸ್ಸು ಮಾಡಲು ೫ನೇ ರಾಜ್ಯ ಹಣಕಾಸು ಆಯೋಗವನ್ನು ರಚಿಸಲಾಗಿದೆ. ಆಯೋಗದಿಂದ ಸ್ವೀಕೃತವಾಗುವ ಶಿಫಾರಸ್ಸುಗಳನ್ನು ನಮ್ಮ ಸರ್ಕಾರವು ಪ್ರಾಮಾಣಿಕವಾಗಿ ಪರಿಶೀಲಿಸುತ್ತದೆ ಮತ್ತು ರಾಜ್ಯದಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Vishwa News 24

Recent Posts

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ 4 ತಿಂಗಳ ಕಾಲ ನಿಷೇಧ – vishwanews24

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…

1 day ago

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ – vishwanews24

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್‌ 21 ರಂದು ನೀಟ್‌–ಯುಜಿ  ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…

1 day ago

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ – vishwanews24

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್…

2 days ago

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

2 days ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

2 days ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

2 days ago