ಅತ್ಯಾಚಾರಿ ಆರೋಪಿಗಳನ್ನು ಎನ್​ಕೌಂಟರ್ ಮಾಡಿದ್ದು ಸರಿಯಲ್ಲ ; ಕಾರ್ತಿ ಚಿದಂಬರಂ -Vishwanews24

Featured, ರಾಷ್ಟ್ರ ನ್ಯೂಸ್

ಹೈದರಾಬಾದ್ : ಅತ್ಯಾಚಾರಿ ಆರೋಪಿಗಳನ್ನು ಎನ್​ಕೌಂಟರ್ ಮಾಡಿದ್ದು ಸರಿಯಲ್ಲ ಎಂದು ಕೇಂದ್ರ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ  ಎನ್​ಕೌಂಟರ್ ​ಅನ್ನು ಖಂಡಿಸಿದ್ದಾರೆ.

ತೆಲಂಗಾಣ ಪಶುವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಗಲ್ಲಿಗೇರಿಸಿ ಎನ್ನುವ ಕೂಗು ಕೇಳಿ ಬರುತ್ತಿರುವಾಗಲೇ, ಎಲ್ಲ ಆರೋಪಿಗಳನ್ನು ಪೊಲೀಸರು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಿದ್ದಾರೆ. ಪೊಲೀಸರ ಕ್ರಮಕ್ಕೆ ಕೆಲವರು ಶ್ಲಾಘನೆ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಅಪಸ್ವರ ಎತ್ತಿದ್ದಾರೆ. ಕೇಂದ್ರ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಕೂಡ ಎನ್​ಕೌಂಟರ್​ಅನ್ನು ಖಂಡಿಸಿದ್ದಾರೆ.

ಅತ್ಯಾಚಾರ ಹಾಗೂ ಕೊಲೆ ಆರೋಪಿಗಳಾದ ಆರೀಫ್, ಶಿವ, ಚನ್ನಕೇಶವಲು ಹಾಗೂ ನವೀನ್‌ನನ್ನು ಪೊಲೀಸರು ಪ್ರಕರಣ ಸಂಬಂಧ ತೀವ್ರ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಆರೋಪಿಗಳು ಘಟನೆಯ ಇಂಚಿಂಚು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೆ ಇಂದು ಮುಂಜಾನೆ ಆರೋಪಿಗಳನ್ನು ಕೊಲೆ ನಡೆದ ಸ್ಥಳದ ಮಹಜರಿಗಾಗಿ ಪೊಲೀಸರು ಕರೆದೊಯ್ದಿದ್ದರು.

ಶಾದ್‌ನಗರದ ಚಟಾನ್‌ಪಲ್ಲಿ ಬ್ರಿಡ್ಜ್‌ ಮೇಲೆ ಆರೋಪಿಗಳು ಪರಾರಿಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ನಾಲ್ವರು ಅತ್ಯಾಚಾರಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.ಈ ವಿಚಾರಕ್ಕೆ ಸಂಬಂಧಿಸಿ ಟ್ವೀಟ್​ ಮಾಡಿರುವ ಕಾರ್ತಿ, “ಅತ್ಯಾಚಾರ ಎನ್ನುವುದು ಘೋರ ಅಪರಾಧ. ಇಂಥ ಪ್ರಕರಣ ಕಾನೂನಿನ ಅಡಿಯಲ್ಲೇ ಇತ್ಯರ್ಥವಾಗಬೇಕು. ​ಅತ್ಯಾಚಾರಿಗಳ ಬಗ್ಗೆ ನನಗೆ ಯಾವುದೇ ಅನುಕಂಪ ಇಲ್ಲ. ಆದರೆ, ಎನ್​ಕೌಂಟರ್​ ಎನ್ನುವುದು ನಮ್ಮ ವ್ಯವಸ್ಥೆಗೆ ಕಪ್ಪುಚುಕ್ಕೆ. ತ್ವರಿತ ನ್ಯಾಯದ ನೀಡುವ ವಿಚಾರ ನನಗೆ ಅರ್ಥವಾಗುತ್ತದೆ. ಆದರೆ, ಇದು ಸರಿಯಾದ ಮಾರ್ಗ ಅಲ್ಲ,” ಎಂದಿದ್ದಾರೆ.

ಕಾರ್ತಿ ಟ್ವಿಟ್​ಗೆ ಭಾರೀ ವಿರೋಧ ವ್ಯಕ್ತವಾಗಿದೆ. ಓರ್ವ ರಾಜಕಾರಣಿಯಾಗಿ ನೀವು ಹೇಳುತ್ತಿರುವುದು ಎಷ್ಟು ಸರಿ? ನಿಮ್ಮ ಕುಟುಂಬದವರಿಗೆ ಈ ರೀತಿ ಆಗಿದ್ದರೆ ಸುಮ್ಮನಿರುತ್ತಿದ್ದಿರಾ? ಎಂದು ಪ್ರಶ್ನೆ ಮಾಡಿದ್ದಾರೆ.