ಅಲ್ಪಸಂಖ್ಯಾತರ ಶಾದಿ ಮಹಲ್ ಯೋಜನೆ ಬಿಟ್ಟು ಉಳಿದ ಎಲ್ಲಾ ಯೋಜನೆ ಮುಂದುವರಿಕೆ : ಬೊಮ್ಮಾಯಿ – Vishwanews24
ಅಲ್ಪಸಂಖ್ಯಾತರ ಶಾದಿ ಮಹಲ್ ಯೋಜನೆ ಬಿಟ್ಟು ಉಳಿದ ಎಲ್ಲಾ ಯೋಜನೆ ಮುಂದುವರಿಕೆ : ಬೊಮ್ಮಾಯಿ
ಬೆಂಗಳೂರು: ಶಾದಿ ಮಹಲ್ ಯೋಜನೆ ಬಿಟ್ಟು ಉಳಿದ ಎಲ್ಲಾ ಯೋಜನೆಗಳನ್ನು ಅಲ್ಪಸಂಖ್ಯಾತರಿಗೆ ಮುಂದುವರಿಸುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಶೂನ್ಯವೇಳೆ ಕಾಂಗ್ರೆಸ್ನ ಸಿಎಂ ಇಬ್ರಾಹಿಂ ಪ್ರಶ್ನೆಗೆ ಉತ್ತರ ನೀಡಿದ ಮುಖ್ಯಮಂತ್ರಿಗಳು, ಅಲ್ಪಸಂಖ್ಯಾತರ ಅಭಿವೃದ್ಧಿಗೆ ನಮ್ಮ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಅಲ್ಪಸಂಖ್ಯಾತರಿಗೆ ನೀಡಿದ್ದ 77 ಯೋಜನೆಗಳಲ್ಲಿ ಈಗ 29 ಯೋಜನೆ ಮಾತ್ರ ಉಳಿದಿವೆ. ಉಳಿದ ಯೋಜನೆಗಳನ್ನು ಸರ್ಕಾರ ರದ್ದು ಮಾಡಿದೆ. ಗಂಗಾ ಕಲ್ಯಾಣ ಯೋಜನೆ ರದ್ದು ಮಾಡಲಾಗಿದೆ. ಪಿಹೆಚ್.ಡಿ ವಿದ್ಯಾರ್ಥಿಗಳಿಗೆ ಸಹಾಯ ಧನ 25 ಸಾವಿರ ನೀಡುತ್ತಿದ್ದರು. ಆದರೆ ಈಗ ಅದನ್ನು ನಿಲ್ಲಿಸಿದ್ದಾರೆ.
ಹಣ್ಣು ವ್ಯಾಪಾರಿಗಳಿಗೆ ಕೊಡುತ್ತಿದ್ದ ಲೋನ್ ಕೂಡಾ ನಿಲ್ಲಿಸಲಾಗಿದೆ. ದೇವಸ್ಥಾನದಲ್ಲಿ ಅಂಗಡಿ ಇಡಲು ಈಗ ನಿಷೇಧ ಮಾಡಲಾಗಿದೆ. ನಾವು ಬಡವರು ಯೋಜನೆಗಳನ್ನು ಸರ್ಕಾರ ಮುಂದುವರಿಸಬೇಕು ಎಂದು ಸಿಎಂ ಇಬ್ರಾಹಿಂ ಮನವಿ ಮಾಡಿದರು.
ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ, ಶಾದಿ ಮಹಲ್ ಯೋಜನೆ ಬಿಟ್ಟು ಇನ್ಯಾವುದೇ ಯೋಜನೆ ನಾವು ನಿಲ್ಲಿಸೊಲ್ಲ ಎಂದು ಭರವಸೆ ನೀಡಿದರು. ಗಂಗಾ ಕಲ್ಯಾಣ ಯೋಜನೆ ನಿಲ್ಲಿಸಿಲ್ಲ. ಪಿಹೆಚ್.ಡಿ ವಿದ್ಯಾರ್ಥಿಗಳಿಗೆ ಅನುದಾನ ಮುಂದುವರಿಸುತ್ತೇವೆ. ಅರಿವು ಯೋಜನೆಗೆ ಹೆಚ್ಚು ಅನುದಾನ ನೀಡಿದ್ದೇನೆ. ಜಿಲ್ಲೆಗೊಂದು ಅಬ್ದುಲ್ ಕಲಾಂ ಶಾಲೆ ಅಭಿವೃದ್ಧಿ ಮಾಡುತ್ತಿದ್ದೇವೆ. ಸಿಬಿಎಸ್ಇ ಕೋರ್ಸ್ ಪ್ರಾರಂಭ ಮಾಡುತ್ತಿದ್ದೇವೆ ಎಂದು ತಿಳಿಸಿದರು.
50 ಸಾವಿರ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ನೀಡಲು 110 ಕೋಟಿ ರೂ. ಹಣ ಇಟ್ಟಿದ್ದೇನೆ. ಅಲ್ಪಸಂಖ್ಯಾತರ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳ ಸೇರ್ಪಡೆ ಹೆಚ್ಚಳ ಮಾಡಲಾಗಿದೆ. ಮೈನಾರಿಟಿ ಕಾಲೋನಿ ಅಭಿವೃದ್ಧಿಯನ್ನು ಸ್ಲಂ ಬೋರ್ಡ್ ಮೂಲಕ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಅಲ್ಪಸಂಖ್ಯಾತ ಅಭಿವೃದ್ಧಿಗೆ ಸರ್ಕಾರ ಅನೇಕ ಕಾರ್ಯಕ್ರಮ ಜಾರಿ ಮಾಡಿದೆ ಎಂದು ತಿಳಿಸಿದರು.
