ಇತಿಹಾಸದಲ್ಲೇ ಮೊದಲ ಬಾರಿಗೆ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲು ಸಿಬಿಐಗೆ ಅನುಮತಿ -Vishwanews24

ಉಡುಪಿ, ರಾಷ್ಟ್ರ ನ್ಯೂಸ್

ಹೊಸದಿಲ್ಲಿ: ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎನ್.ಶುಕ್ಲಾ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲು ಸಿಬಿಐಗೆ ಅನುಮತಿ ನೀಡಿದ್ದಾರೆ. ಖಾಸಗಿ ಕಾಲೇಜುಗಳಿಗೆ ಎಂಬಿಬಿಎಸ್ ದಾಖಲಾತಿಗೆ ನ್ಯಾಯಮೂರ್ತಿ ಶುಕ್ಲಾ ಅನುಕೂಲ ಮಾಡಿಕೊಟ್ಟಿದ್ದರು ಎನ್ನುವುದು ಅವರ ಮೇಲಿರುವ ಆರೋಪ.

ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ವಿರುದ್ಧ ಸೂಕ್ತ ಪುರಾವೆಯನ್ನು ಸಲ್ಲಿಸಿ, ಸಿಜೆಐಯವರಿಂದ ಅನುಮತಿ ಪಡೆಯದೇ ಯಾವುದೇ ತನಿಖಾ ಸಂಸ್ಥೆಗಳು ಪ್ರಕರಣ ದಾಖಲಿಸುವಂತಿಲ್ಲ ಎಂದು ಸುಮಾರು 30 ವರ್ಷಗಳ ಹಿಂದೆ ಅಂದರೆ 1991ರ ಜುಲೈ 25ರಂದು ಕೆ.ವೀರಸ್ವಾಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.

ಇದಕ್ಕೆ ಮುನ್ನ ಕೂಡಾ ತನಿಖಾ ಸಂಸ್ಥೆಗಳು ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ತನಿಖೆ ನಡೆಸಿದ ನಿದರ್ಶನಗಳಿಲ್ಲ. ಇದೇ ಮೊದಲ ಬಾರಿಗೆ ಸಿಜೆಐಯವರು ಹಾಲಿ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿ ನೀಡಿದ್ದಾರೆ. ನ್ಯಾಯಮೂರ್ತಿ ಶುಕ್ಲಾ ವಿರುದ್ಧ ಸಿಬಿಐ ತಕ್ಷಣ ಪ್ರಕರಣ ದಾಖಲಿಸಿದ್ದು, ಅವರಿಗೆ ಬಂಧನದ ಭೀತಿ ಎದುರಾಗಿದೆ.

ನ್ಯಾಯಮೂರ್ತಿ ಶುಕ್ಲಾ ಅವರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ತನಿಖಾ ಸಂಸ್ಥೆ ಸಿಜೆಐಯವರಿಗೆ ಪತ್ರ ಬರೆದಿತ್ತು. “ಹಿಂದಿನ ಸಿಜೆಐ ದೀಪಕ್ ಮಿಶ್ರಾ ಅವರ ಸಲಹೆಯಂತೆ ಉತ್ತರ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದ ನ್ಯಾಯಮೂರ್ತಿ ನಾರಾಯಣ ಶುಕ್ಲಾ ಮತ್ತು ಇತರರ ವಿರುದ್ಧ ಪ್ರಾಥಮಿಕ ತನಿಖೆ (ಪಿಇ) ದಾಖಲಿಸಲಾಗಿತ್ತು” ಎಂದು ಸಿಬಿಐ ನಿರ್ದೇಶಕರು ಪತ್ರದಲ್ಲಿ ಸ್ಪಷ್ಟಪಡಿಸಿದ್ದರು.

ಕಳೆದ ತಿಂಗಳು ಸಿಜೆಐಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ನ್ಯಾಯಮೂರ್ತಿ ಶುಕ್ಲಾ ಅವರನ್ನು ವಜಾಗೊಳಿಸಲು ಸಂಸತ್ತಿನಲ್ಲಿ ನಿರ್ಣಯ ಮಂಡಿಸಬೇಕು ಎಂದು ಕೋರಿದ್ದರು.