ಇನ್ಮುಂದೆ ಭಾರತ ದೇಶದಲ್ಲಿ ವಲಸಿಗರು ವಾಸಿಸಲು ಅವಕಾಶ ಇಲ್ಲ : ಜೆಪಿ ನಡ್ಡಾ -Vishwanews24

Featured, ರಾಷ್ಟ್ರ ನ್ಯೂಸ್

ಬೋಕಾರೋ:ದೇಶದಲ್ಲಿ ಅಕ್ರಮ ವಲಸಿಗರು ವಾಸಿಸಲು ಅವಕಾಶ ನೀಡುವುದಿಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಜೆಪಿ ನಡ್ಡಾ ಹೇಳುವ ಮೂಲಕ ಎನ್ ಆರ್ ಸಿ(ರಾಷ್ಟ್ರೀಯ ಪೌರತ್ವ ನೋಂದಣಿ) ಜಾರಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಇದೀಗ ಸಮಯ ಬಂದಿದ್ದು, ಇನ್ಮುಂದೆ ದೇಶದಲ್ಲಿ ವಲಸಿಗರು ವಾಸಿಸಲು ಅವಕಾಶ ಇಲ್ಲ. ವಲಸಿಗರು ದೇಶ ಬಿಟ್ಟು ಹೋಗಬೇಕು. ಹಿಂದೂಗಳು, ಜೈನರು, ಸಿಖ್ಖರು, ಕ್ರಿಶ್ಚಿಯನ್ ರಿಗೆ ಹೊರಗೆ ಕಿರುಕುಳ ನೀಡಲಾಗುತ್ತಿದೆ. ಭಾರತ ವಲಸಿಗರಿಗೆ ಆಶ್ರಯ ನೀಡಲಿದೆ. ಭಾರತ ಒಂದು ದೇಶವಾಗಿದೆ, ಅದು ಛತ್ರ ಅಲ್ಲ ಎಂದು ನಡ್ಡಾ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನಡ್ಡಾ ಅವರು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ್ದು, ಪ್ರಧಾನಿ ನರೇಂದ್ರ ಮೋದಿಯ ಹೂಸ್ಟನ್ ಭೇಟಿ, ಭ್ರಷ್ಟಾಚಾರದ ವಿರುದ್ಧದ ಕೇಂದ್ರದ ಹೋರಾಟದ ಬಗ್ಗೆಯೂ ವಿವರಿಸಿದರು.

ಜಾರ್ಖಂಡ್ ನ ಬೋಕಾರೋದಲ್ಲಿ ಶುಕ್ರವಾರ ವಿಜಯ್ ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ವರದಿ ಹೇಳಿದೆ. ಈ ಕಾರ್ಯಕ್ರಮದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಮತ್ತು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.