ಇನ್ಮುಂದೆ ಸೋಂಕಿತ/ಶಂಕಿತ ವ್ಯಕ್ತಿಗಳ ಮನೆ ಮಾತ್ರ ಸೀಲ್ಡೌನ್ ; ಜಿಲ್ಲೆಯನ್ನು ಮತ್ತೆ ಹಸಿರು ವಲಯಕ್ಕೆ ಕೊಂಡೊಯ್ಯಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು: ಡಾ.ಕೆ.ಸುಧಾಕರ್ -Vishwanews24
ಇನ್ಮುಂದೆ ಸೋಂಕಿತ/ಶಂಕಿತ ವ್ಯಕ್ತಿಗಳ ಮನೆ ಮಾತ್ರ ಸೀಲ್ಡೌನ್
ಜಿಲ್ಲೆಯನ್ನು ಮತ್ತೆ ಹಸಿರು ವಲಯಕ್ಕೆ ಕೊಂಡೊಯ್ಯಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು: ಡಾ.ಕೆ.ಸುಧಾಕರ್ -Vishwanews24
ಉಡುಪಿ: ಹೊರರಾಜ್ಯಗಳಿಂದ ಬಂದಿರುವ ವಲಸಿಗರ ಕಾರಣದಿಂದ ರಾಜ್ಯದಲ್ಲಿ ಕರೊನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಅಂತಹ ವಲಸಿಗರ ಮನೆಗಳನ್ನು ಮಾತ್ರ ಸೀಲ್ಡೌನ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಸಂಪೂರ್ಣ ಪ್ರದೇಶವನ್ನು ಲಾಕ್ಡೌನ್ ಅಥವಾ ಸೀಲ್ಡೌನ್ ಮಾಡುವ ಬದಲಿಗೆ ಸೋಂಕಿತ/ಶಂಕಿತ ವ್ಯಕ್ತಿಗಳ ಮನೆಗಳನ್ನು ಸೀಲ್ಡೌನ್ ಮಾಡುವುದರಿಂದ ಸೋಂಕು ಹರಡುವಿಕೆಯನ್ನು ನಿಯಂತ್ರಿಸಬಹುದಲ್ಲದೆ ಇತರ ಚಟುವಟಿಕೆಗಳಿಗೂ ಅವಕಾಶವಾಗುತ್ತದೆ ಎಂದು ತಿಳಿಸಿದರು.
ಮುಂಬಯಿಯಿಂದ ವಲಸೆ ಬಂದಿರುವವರ ಕಾರಣದಿಂದಾಗಿ ಉಡುಪಿಯಲ್ಲಿ ಸೋಂಕು ಹೆಚ್ಚಾಗಿದ್ದು ಮಂಗಳವಾರ ಒಂದೇ ದಿನ 150 ಪ್ರಕರಣಗಳು ದಾಖಲಾಗಿವೆ. ನಾಗರಿಕರು ಆತಂಕಪಡುವುದು ಬೇಡ. ಸರ್ಕಾರದ ವತಿಯಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೋವಿಡ್ ಆಸ್ಪತ್ರೆಯಲ್ಲಿ ಹಾಸಿಗೆಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ವಲಸೆ ಬಂದವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಉಡುಪಿಯಲ್ಲಿ ಈಗಾಗಲೇ ಒಂದು ಪ್ರಯೋಗಾಲಯ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಪ್ರಯೋಗಾಲಯ ಸ್ಥಾಪಿಸುವುದಾಗಿ ಸಚಿವರು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಹಸಿರುವಲಯದಲ್ಲಿದ್ದ ಉಡುಪಿ ಜಿಲ್ಲೆ ಇಂದು ಬೆಂಗಳೂರನ್ನು ಹಿಂದಿಕ್ಕಿ ಮೊದಲನೇ ಸ್ಥಾನದಲ್ಲಿದೆ. ಜಿಲ್ಲೆಯನ್ನು ಮತ್ತೆ ಹಸಿರು ವಲಯಕ್ಕೆ ಕೊಂಡೊಯ್ಯಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಸಾರ್ವಜನಿಕರು ಎಚ್ಚರಿಕೆಯಿಂದ ವರ್ತಿಸಬೇಕು ಎಂದು ಹೇಳಿದರು.
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಅನ್ವಯವಾಗುವ ನಿಯಮಗಳು ಮಂಗಳೂರು ವಿಮಾನ ನಿಲ್ದಾಣಕ್ಕೂ ಅನ್ವಯವಾಗಲಿವೆ. ಈ ಕುರಿತಂತೆ ಶೀಘ್ರದಲ್ಲೇ ಆದೇಶವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು. ಐಸಿಎಂಆರ್ ಮಾರ್ಗಸೂಚಿಗಳನ್ನು ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶ ನೀಡಲಾಗುವುದು. ಇದರ ಅನ್ವಯ ಪ್ರಯಾಣಿಕರು ಎರಡು ದಿನಗಳಷ್ಟೇ ಹಳೆಯದಾದ ಕೋವಿಡ್ ನೆಗೆಟೀವ್ ವರದಿಯನ್ನು ಏರ್ಪೋರ್ಟಿನಲ್ಲಿ ತೋರಿಸಬೇಕಾಗುವುದು. ನೆಗೆಟೀವ್ ಎಂದು ಖಚಿತವಾದರಷ್ಟೇ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು.
