ಉಗ್ರರಿಗೆ ಮರೆಯಲಾಗದ ಪಾಠ ಕಲಿಸಿ , ಆದರೆ ಅದು ಭಾರತ ಪಾಕ್ ನಡುವೆ ಯುದ್ಧಕ್ಕೆ ಕಾರಣವಾಗಬಾರದು : ಪೇಜಾವರ ಶ್ರೀ – Vishwanews24
ಉಡುಪಿ: ಕೇಂದ್ರ ಸರಕಾರ, ಸೇನೆ ಉಗ್ರರಿಗೆ ಮರೆಯಲಾಗದ ಪಾಠ ಕಲಿಸಬೇಕು, ಆದರೆ ಅದು ಭಾರತ ಪಾಕ್ ನಡುವೆ ಯುದ್ಧಕ್ಕೆ ಕಾರಣವಾಗಬಾರದು ಎಂದು ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 43ಮಂದಿ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದು ದೇಶಕ್ಕೆ ದುಃಖ ತಂದಿದೆ. ಚಿರ ಶಾಂತಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವೆ. ಯುದ್ಧವಾದರೆ ಸಾವಿರಾರು ಜನ ಬಲಿಯಾಗುತ್ತಾರೆ. ಉಗ್ರರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಕೂಡ ಯುದ್ಧಕ್ಕೆ ಕಾರಣವಾಗಬಾರದು ಎಂದರು.
ದೇಶಕ್ಕಾಗಿ ಪ್ರಾಣತಾಗ್ಯ ಮಾಡಿದವರಿಗೆ ಒಬ್ಬ ಯೋಗಿಗೆ ದೊರೆಯುವ ಫಲವೇ ದೊರೆಯುವುದು ಎಂದು ನಮ್ಮ ವೇದಪುರಾಣಗಳು ಹೇಳುತ್ತವೆ. ಹುತಾತ್ಮರಿಗೆ ದೇವರು ಸದ್ಗತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಪೇಜಾವರ ಶ್ರೀ ಹೇಳಿದರು.
ಕೇಂದ್ರ ಸರಕಾರ ಆ ಭಯೋತ್ಪಾದಕರಿಗೆ ಮರೆಯದ ಪಾಠ ಕಲಿಸಲಿ, ಆದರೆ ಯುದ್ದವಾಗುವ ರೀತಿ ಇರಬಾರದು. ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಸರ್ಜಿಕಲ್ ಸ್ಟೈಕ್ ರೀತಿಯ ಒಂದು ಪ್ರಯೋಗವಾಗಿರಬಹುದು ಅಥವಾ ಭಯೋತ್ಪಾದಕರಿಗೆ ಒಂದು ಸಣ್ಣ ಶಾಕ್ ಕೊಡುವಂತಿರಬೇಕು. ಆದರೆ ಯುದ್ದಕ್ಕೆ ಆಹ್ವಾನ ಕೊಡುವಂತಿರಬಾರದು, ಎಂದು ಶ್ರೀಗಳು ಉಗ್ರರ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

