ಉಚ್ಚಿಲ : ಗೂಡಂಗಡಿ ತೆರವಿಗೆ ಮುಂದಾದ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರು : ಮಾಲಕರಿಂದ ವಿರೋಧ – ಸ್ಥಳದಲ್ಲಿ ಪೊಲೀಸ್ ಬಂದೊಬಸ್ತು- vishwanews24
ಉಚ್ಚಿಲ : ಗೂಡಂಗಡಿ ತೆರವಿಗೆ ಮುಂದಾದ
ಹೆದ್ದಾರಿ ಕಾಮಗಾರಿ ಗುತ್ತಿಗೆದಾರರು : ಮಾಲಕರಿಂದ ವಿರೋಧ
ಕಾಪು, ಫೆ. 11 : ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಪೇಟೆಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣದ ವಿಚಾರದಲ್ಲಿ ಅನಧಿಕೃತ ಗೂಡಂಗಡಿ ಮತ್ತು ಕಟ್ಟಡಗಳ ತೆರವಿಗೆ ಸ್ಥಳೀಯರು ಮತ್ತು ಹೈವೇ ಗುತ್ತಿಗೆದಾರರ ನಡುವೆ ಘರ್ಷಣೆ ನಡೆದಿದೆ.
ಗುರುವಾರ ಬೆಳಿಗ್ಗೆ ಉಚ್ಚಿಲ ಪೇಟೆಯಲ್ಲಿ ಸರ್ವಿಸ್ ರಸ್ತೆ ರಚನೆಗಾಗಿ ಅನಧಿಕೃತ ಗೂಡಂಗಡಿ ಮತ್ತು ಕಟ್ಟಡಗಳ ತೆರವಿಗೆ ಜೆಸಿಬಿ ಸಹಿತವಾಗಿ ಹೆದ್ದಾರಿ ಗುತ್ತಿಗೆದಾರ ಕಂಪನಿಯು ಆಗಮಿಸಿದ್ದು ಅಂಗಡಿಗಳ ಮಾಲಕರು ಕಾಮಗಾರಿಗೆ ತಡೆಯೊಡ್ಡುವ ಪ್ರಯತ್ನ ನಡೆಸಿದರು.
ಕೆಲವು ಅಂಗಡಿಯವರು ತಮ್ಮ ಗೂಡಂಗಡಿಗಳ ತೆರವಿಗೆ ಸಮ್ಮತಿ ಸೂಚಿಸಿದ ಬಳಿಕ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಅಂಗಡಿಗಳನ್ನು ತೆರವು ಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಯಿತು.
ನವಯುಗ್ ಕಂಪೆನಿಯ ಟೋಲ್ ವ್ಯವಸ್ಥಾಪಕ ಶಿವಪ್ರಸಾದ್ ರೈ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಉಚ್ಚಿಲದಲ್ಲಿ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಎರಡೂ ಬದಿಯಲ್ಲಿ 30 ಮೀಟರ್ ಅಗಲದವರೆಗೆ ಹೆದ್ದಾರಿ ಇಲಾಖೆಯು ಸ್ವಾಧೀನ ಪಡಿಸಿ ಕೊಂಡಿರುವ ಪ್ರದೇಶದಲ್ಲಿನ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ ಎಂದರು.
ಕಾಪು ವೃತ್ತ ನಿರೀಕ್ಷಕ ಪ್ರಕಾಶ್, ಪಡುಬಿದ್ರಿ ಎಸ್ಸೈ ದಿಲೀಪ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.



