ಉಡುಪಿ : ಕವರ್ ಸಮೇತ ಚಾಕಲೇಟು ತಿಂದ ಪರಿಣಾಮ ಉಸಿರುಗಟ್ಟಿ ಮೃತಪಟ್ಟ ಬಾಲಕಿ : Vishwanews24
ಉಡುಪಿ : ಕವರ್ ಸಮೇತ ಚಾಕಲೇಟು ತಿಂದ ಪರಿಣಾಮ ಉಸಿರುಗಟ್ಟಿ ಮೃತಪಟ್ಟ ಬಾಲಕಿ : Vishwanews24
ಬೈಂದೂರು: ಶಾಲೆಗೆಂದು ಹೊರಟಿದ್ದ ವೇಳೆ ಮನೆಯವರು ಕೊಟ್ಟ ಚಾಕ್ಲೆಟ್ ಬಾಯಿಗೆ ಹಾಕಿಕೊಂಡ ಬಾಲಕಿ ಶಾಲಾ ಬಸ್ ಬಂತೆಂದು ಬಸ್ ಹತ್ತಲು ಓಡುವಾಗ ಚಾಕ್ಲೆಟ್ ನುಂಗಿದ ಪರಿಣಾಮ ಉಸಿರುಗಟ್ಟಿದ ಬಾಲಕಿ ಸಾವನ್ನಪ್ಪಿದ್ದಾಳೆ. ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಕಬ್ಸೆಯ ಶಮಿತ್ – ಸಮನ್ವಿ ನಿಲಯದ ನಿವಾಸಿ ಸುಪ್ರೀತಾ ಪೂಜಾರಿ ಎಂಬುವರ ಮಗಳು ಉಪ್ಪುಂದದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಸಮನ್ವಿ (6) ಎಂಬಾಕೆಯೇ ದಾರುಣವಾಗಿ ಸಾವನ್ನಪ್ಪಿದ ನತದೃಷ್ಟೆ ಬಾಲಕಿ.
ಸಮನ್ವಿ ಬುಧವಾರ ಬೆಳಿಗ್ಗೆ ಎಂದಿನಂತೆಯೇ ಶಾಲೆಗೆ ಹೊರಡಲು ಸಮವಸ್ತ್ರ ಧರಿಸಿ ಸಿದ್ಧವಾಗಿದ್ದಳು. ಆದರೆ ಅದೇಕೋ ಆಕೆಯ ಮನಸ್ಸು ಶಾಲೆಗೆ ಹೋಗಲು ಒಪ್ಪಿರಲಿಲ್ಲ. ಇದರಿಂದಾಗಿ ಮನೆಯವರು ಆಕೆಗೆ ಪುಸಲಾಯಿಸಿ ಶಾಲೆಗೆ ಹೊರಡಿಸಿದ್ದು. ಕೈಯಲ್ಲೊಂದು ಚಾಕ್ಲೆಟ್ ನೀಡಿದ್ದರಎನ್ನಲಾಗಿದೆ. ಅಷ್ಟೊತ್ತಿಗಾಗಲೇ ಶಾಲಾ ವಾಹನ ಬಂದಿದೆ. ಇದರಿಂದ ಗಾಬರಿಗೊಂಡ ಬಾಲಕಿ ಸಮನ್ವಿ ಕೈಯಲ್ಲಿದ್ದ ಚಾಕ್ಲೆಟನ್ನು ಪ್ಲಾಸ್ಟಿಕ್ ಕವರ್ ಸಮೇತ ಬಾಯಿಗೆ ಹಾಕಿಕೊಂಡು ಬ್ಯಾಗ್ ಏರಿಸಿಕೊಂಡು ಶಾಲಾ ವಾಹನದತ್ತ ಓಡಿದ್ದಾಳೆ. ಏದುಸಿರು ಬಿಡುವಾಗ ಚಾಕ್ಲೆಟ್ ನುಂಗಿಹೋಗಿದೆ ಎನ್ನಲಾಗಿದೆ. ಗಂಟಲಲ್ಲಿ ಚಾಕ್ಲೆಟ್ ಕವರ್ ಸಮೇತ ಸಿಕ್ಕಿಹಾಕಿಕೊಂಡ ಪರಿಣಾಮ ಉಸಿರುಗಟ್ಟಿ ಶಾಲಾ ವಾಹನದ ಮೆಟ್ಟಿಲ ಬಳಿಯೇ ಬಿದ್ದಿದ್ದಾಳೆ. ಮನೆಯವರು ಶಾಲಾ ವಿದ್ಯಾರ್ಥಿಗಳು, ಸ್ಕೂಲ್ ವ್ಯಾನ್ ಡ್ರೈವರ್ ಎಲ್ಲರೂ ಜಮಾಯಿಸಿದ್ದು, ವಾಹನ ಚಾಲಕ ಮಗುವಿಗೆ ಕೃತಕ ಬಾಲಕಿಗೆ ಉಸಿರಾಟ ನಡೆಸಲು ಅವಕಾಶ ಮಾಡಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಬೈಂದೂರು ಖಾಸಗೀ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಇನ್ನು ಕೆಲವರು ಮಗುವಿಗೆ ಹೃದಯಾಘಾತ ಸಂಭವಿಸಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮಗುವಿನ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಬಾಲಕಿಯ ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲಕ್ಕೆ ಕರೆದೊಯ್ಯಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಗೆ ಒಂದು ದಿನ ರಜೆ ಘೋಷಿಸಲಾಗಿದೆ.
