ಉಡುಪಿ: ಕೋಡಿ ಬೆಂಗ್ರೆ ಬಳಿ ಬೋಟ್ ಮುಳುಗಡೆ; 6 ಮಂದಿ ಮೀನುಗಾರರ ರಕ್ಷಣೆ -vishwanews24

Featured, ಉಡುಪಿ

ಉಡುಪಿ: ಕೋಡಿ ಬೆಂಗ್ರೆ ಬಳಿ ಬೋಟ್ ಮುಳುಗಡೆ; 6 ಮಂದಿ ಮೀನುಗಾರರ ರಕ್ಷಣೆ

ಉಡುಪಿ : ಮಲ್ಪೆ ಮೀನುಗಾರಿಕೆ ಬಂದರಿನಿಂದ ತೆರಳಿದ ಆಳಸಮುದ್ರ ಬೋಟೊಂದು ಮಂಗಳವಾರ ರಾತ್ರಿ ಕೋಡಿಬೆಂಗ್ರೆ ಸಮೀಪದ ಮುಳುಗಡೆಗೊಂಡಿದ್ದು ಅದರಲ್ಲಿದ್ದ 6 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ಬೋಟಿನ ತಾಂಡೇಲ ಉತ್ತರ ಕನ್ನಡ ಜಿಲ್ಲೆಯ ರಾಘವೇಂದ್ರ, ಕಾರ್ಮಿಕರಾದ ರೋಹಿದಾಸ್ ಮೊಗೇರ, ಶಾಮ ಸುಂರ್ದ ಮಲೀಕ್, ಉಜ್ವಲ್ ಮಲೀಕ್, ಸತ್ಯಜಿತ್ ಮಲೀಕ್, ತ್ರಿಲೇಶ್ ಭಾಸ್ಕರ್ ರಕ್ಷಿಸಲ್ಪಟ್ಟ ಮೀನುಗಾರರು ಎಂದು ಗುರುತಿಸಲಾಗಿದೆ.

ಕಿದಿಯೂರು ಪಡುಕರೆಯ ಸಂದೀಪ್ ಕುಮಾರ್ ಎಂಬವರಿಗೆ ಸೇರಿದ ಸಾಯಿದತ್ತ ಆಳಸಮುದ್ರ ಬೋಟು ಮೇ 17ರಂದು ರಾತ್ರಿ 10.30ಕ್ಕೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಮೇ 19ರಂದು ಕೋಡಿಬೆಂಗ್ರೆ ನೇರ ಸಮುದ್ರದಲ್ಲಿ 38 ಮೀಟರ್ ಆಳ ದೂರದಲ್ಲಿ ಸಂಜೆ 4.30ರ ವೇಳೆ ಬೋಟಿನ ಹಿಂಭಾಗದ ಅಡಿಭಾಗಕ್ಕೆ ಯಾವುದೋ ವಸ್ತು ತಾಗಿದ ಶಬ್ದ ಕೇಳಿ ಬಂದಿದೆ. ಈ ವೇಳೆ ತಾಂಡೇಲ ರಾಘವೇಂದ್ರ ಬೋಟಿನ ಒಳಗೆ ಕೆಳಗಿಳಿದು ನೋಡಿದಾಗ ನೀರು ಒಳ ಬರುತ್ತಿರುವುದು ಕಂಡುಬಂದಿದೆ.

ತಕ್ಷಣ ಸಮೀಪದದಲ್ಲಿರುವ ‘ಶ್ರೀ ಅಮ್ಮ ಭವಾನಿ ಬೋಟಿನ ಸಹಾಯ ಪಡೆದು ಬೋಟಿನೊಳಗೆ ತುಂಬುತ್ತಿದ್ದ ನೀರನ್ನು ಖಾಲಿ ಮಾಡಲು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಬೋಟಿನಲ್ಲಿದ್ದ ಎಲ್ಲ ಮೀನುಗಾರನ್ನು ತಮ್ಮ ಬೋಟಿಗೆ ಹತ್ತಿಸಿ, ಮುಳುಗಡೆಗೊಳ್ಳುತ್ತಿರುವ ಬೋಟನ್ನು ಮಲ್ಪೆ ಬಂದರಿಗೆ ಎಳೆದು ತರುವಾಗ ಅಮ್ಮ ಭಾವಾನಿ ಬೋಟಿನ ಹಿಂಭಾಗದ ಕಂಬ ತುಂಡಾಗಿ ಬೋಟು ಸುಮಾರು 11 ಗಂಟೆ ವೇಳೆಗೆ ಸಂಪೂರ್ಣವಾಗಿ ಮುಳುಗಡೆಗೊಂಡಿತು.

ಬೋಟಿನಲ್ಲಿದ್ದ ಮೀನು, ಬಲೆ, ಡಿಸೇಲ್ ಸೇರಿದಂತೆ ಸುಮಾರು 65 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

Leave a Reply