ಉಡುಪಿ : ಜ.22ರಂದು ಬನ್ನಂಜೆಯಲ್ಲಿ ಕರವೇಯಿಂದ ಕನ್ನಡ ನುಡಿ ಸಂಭ್ರಮ ಕಾರ್ಯಕ್ರಮ : ವೆಂಕಟೇಶ್ ಹೆಗ್ಡೆ – Vishwanews24
ಉಡುಪಿ :ಜ.22ರಂದು ಬನ್ನಂಜೆಯಲ್ಲಿ ಕರವೇಯಿಂದ ಕನ್ನಡ ನುಡಿ ಸಂಭ್ರಮ ಕಾರ್ಯಕ್ರಮ: ನಗರದಲ್ಲಿ ವೆಂಕಟೇಶ್ ಹೆಗ್ಡೆ ಮಾಹಿತಿ
ಕರ್ನಾಟಕ ರಕ್ಷಣ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ಕನ್ನಡ ನುಡಿ ಸಂಭ್ರಮ ಹಾಗೂ ದಕ್ಷ ಪೊಲೀಸ್ ಅಧಿಕಾರಿ ವಡ್ಡರ್ಸೆ ಮಧುಕರ್ ಶೆಟ್ಟಿ ಸ್ಮರಣೆ ಕಾರ್ಯಕ್ರಮ ಜ.22ರ ಬೆಳಿಗ್ಗೆ 10.30ಕ್ಕೆ ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಹೆಗ್ಡೆ ಹೇಳಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಮಧುಕರ ಶೆಟ್ಟಿಯವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಕುರ್ಮಾರಾವ್ ಪುಷ್ಪನಮನ ಸಲ್ಲಿಸಲಿದ್ದಾರೆ. ಎಸ್ ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಜಿಪಂ ಸಿಇಒ ಪ್ರಸನ್ನ ಎಚ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅಂದು ಬೆಳಿಗ್ಗೆ 9.30ಕ್ಕೆ ಸರ್ವಿಸ್ ಬಸ್ ನಿಲ್ದಾಣದಿಂದ ಬನ್ನಂಜೆ ನಾರಾಯಣಗುರು ಮಂದಿರದವರೆಗೆ ಮೆರವಣಿಗೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಸುಜಯ ಪೂಜಾರಿ, ಪ್ರಮುಖರಾದ ಕುಶಲ್ ಅಮಿನ್ ಬೇಂಗ್ರೆ, ಲಕ್ಷ್ಮೀಶ್ ಶೆಟ್ಟಿ, ಸುಂದರ್ ಬಂಗೇರ, ಕೃಷ್ಣ ಪಾಂಗಾಳ, ರಾಘವೇಂದ್ರ ನಾಯಕ್, ಗೀತಾ ಪಾಂಗಾಳ ಇದ್ದರು.
