ಉಡುಪಿ: ಶಾಲಾ ಬಸ್ ಚಾಲಕನಿಗೆ ಲಘು ಹೃದಯಾಘಾತ ; ವಿದ್ಯಾರ್ಥಿಗಳು ಪಾರು – vishwanews24
ಉಡುಪಿ: ಶಾಲಾ ಬಸ್ ಚಾಲಕನಿಗೆ ಲಘು ಹೃದಯಾಘಾತ ; ವಿದ್ಯಾರ್ಥಿಗಳು ಪಾರು
ಉಡುಪಿ: ಚಾಲನೆಯಲ್ಲಿ ಲಘು ಹೃದಯಾಘಾತಕ್ಕೆ ಒಳಗಾದ ಶಾಲಾ ಬಸ್ಸೊಂದರ ಚಾಲಕನ ಸಮಯ ಪ್ರಜ್ಞೆಯಿಂದ ಹಲವು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜೂ.5ರಂದು ಸಂಜೆ ವೇಳೆ ಪೆರಂಪಳ್ಳಿ ಎಂಬಲ್ಲಿ ನಡೆದಿದೆ.
ಬ್ರಹ್ಮಾವರದ ಖಾಸಗಿ ಶಾಲೆಯೊಂದರ ವಾಹನವು ಸುಮಾರು 65 ಮಕ್ಕಳನ್ನು ಕರೆದುಕೊಂಡು ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲಕ್ಕೆ ಹೋಗುತ್ತಿತ್ತು. ದಾರಿ ಮಧ್ಯೆ ಐವರು ಮಕ್ಕಳ ಇಳಿಸಿದ ಬಸ್, ಪೆರಪಂಳ್ಳಿ ಬಳಿ ಹೋಗುತ್ತಿದ್ದಾಗ ಚಾಲಕ ಆಲ್ವಿನ್ ಡಿಸೋಜ ಅವರಿಗೆ ಲಘು ಹೃದಯಾಘಾತ ಸಂಭವಿಸಿತ್ತೆನ್ನಲಾಗಿದೆ.
ಕೂಡಲೇ ಎಚ್ಚೆತ್ತ ಚಾಲಕ ಬಸ್ಸನ್ನು ರಸ್ತೆಯ ಬದಿಯ ಚರಂಡಿಗೆ ಸರಿಸಿ ನಿಲ್ಲಿಸಿದರು. ಇದರಿಂದ ಕೆಲವು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಬಗ್ಗೆ ವರದಿಯಾಗಿದೆ. ತೀವ್ರವಾಗಿ ಅಸ್ವಸ್ಥರಾಗಿರುವ ಚಾಲಕನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಣಿಪಾಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.
