ಎಲ್ಲಾ ಚುನಾವಣೆಗಳನ್ನು ಕೇವಲ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರೇ ಗೆಲ್ಲಿಸಲು ಸಾಧ್ಯವಿಲ್ಲ , ಬಿಜೆಪಿ ಇತರೆ ನಾಯಕರು ಶ್ರಮ ಹಾಕಬೇಕು : RSS -Vishwanews24
ನವದೆಹಲಿ:ಎಲ್ಲ ರಾಜ್ಯ ಚುನಾವಣೆಗಳನ್ನು ಕೇವಲ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರೇ ಗೆಲ್ಲಿಸಲು ಸಾಧ್ಯವಿಲ್ಲ. ಬಿಜೆಪಿ ಇತರೆ ನಾಯಕರು ಶ್ರಮ ಹಾಕಬೇಕು ಎಂದು ಆರ್ ಎಸ್ಎಸ್ ಅಭಿಪ್ರಾಯ ಪಟ್ಟಿದೆ.
ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ತನ್ನ ಸಂಪಾದಕೀಯದಲ್ಲಿ ಈ ವಿಚಾರ ಪ್ರಸ್ತಾಪಿಸಿರುವ ಆರ್ ಎಸ್ಎಸ್, ದೆಹಲಿಯಲ್ಲಿ ಬಿಜೆಪಿ ತನ್ನ ಸಂಘಟನೆಯನ್ನು ಮತ್ತೆ ಆರಂಭಿಸಬೇಕು ಎಂದು ದೆಹಲಿ ಚುನಾವಣೆ ಫಲಿತಾಂಶ ಸ್ಪಷ್ಟ ಸಂದೇಶ ರವಾನಿಸಿದೆ ಎಂದು ಹೇಳಲಾಗಿದೆ.
ಬಿಜೆಪಿ 1700 ಅನಧಿಕೃತ ಕಾಲೊನಿಗಳನ್ನು ಅಧಿಕೃತ ಮಾಡಿ 40 ಲಕ್ಷ ಜನರಿಗೆ ನೆರವಾಗಿದ್ದರೂ ಆಮ್ ಆದ್ಮಿ ಪಕ್ಷ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದೆ. ಇದು 2015ರ ಚುನಾವಣೆ ನಂತರ ಬಿಜೆಪಿ ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವಲ್ಲಿ ವಿಫಲವಾಗಿದೆ ಎಂಬುದನ್ನು ತೋರುತ್ತಿದೆ. ಇನ್ನು ಚುನಾವಣೆ ಅಂತಿಮ ಹಂತದಲ್ಲಿ ಪ್ರಚಾರ ಆರಂಭಿಸಿದ್ದು ಪಕ್ಷಕ್ಕೆ ಹಿನ್ನಡೆಯಾಗಿದೆ. ಹೀಗಾಗಿ ಕೇವಲ ನರೇಂದ್ರ ಮೋದಿ, ಅಮಿತ್ ಶಾ ಅವರ ಮೇಲೆ ಹೆಚ್ಚು ಜವಾಬ್ದಾರಿ ನೀಡದೆ ಪಕ್ಷದ ನಾಯಕರು ಶ್ರಮ ಹಾಕಬೇಕು ಎಂದು ಹೇಳಿದೆ.
