ಎಲ್ಲ ನಾಯಕರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಬಲಪಡಿಸುವುದೇ ತಮ್ಮ ಮುಂದಿನ ಗುರಿ : ಬಿಜೆಪಿ ನೂತನ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ – Vishwanews24
ಮಂಗಳೂರು:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಎಲ್ಲ ನಾಯಕರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಬಲಪಡಿಸುವುದೇ ತಮ್ಮ ಮುಂದಿನ ಗುರಿ ಎಂದು ಬಿಜೆಪಿ ನೂತನ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಪಕ್ಷದ ಅಧ್ಯಕ್ಷರಾಗಿ ತಮ್ಮ ತವರು ಜಿಲ್ಲೆಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೊಬ್ಬ ಸಾಮಾನ್ಯ ಕಾರ್ಯಕರ್ತ.ಪಕ್ಷದ ವರಿಷ್ಠರು ನನ್ನ ಮೇಲೆ ನಂಬಿಕೆ ಇಟ್ಟುಕೊಂಡು ಇಷ್ಟು ದೊಡ್ಡ ಜವಾಬ್ದಾರಿ ನೀಡಿರುವುದಕ್ಕೆ ನಾನು ಋಣಿ ಎಂದರು.
ನಾನು ಸಂಘದ ಹಿನ್ನೆಲೆ ವೈಚಾರಿಕ ಸಿದ್ಧಾಂತದ ಆಧಾರದಲ್ಲಿ ಬಂದವನು. ಸಂಘ ನಮಗೆ ಕಲಿಸಿದ್ದು ಸಂಘಟನೆಯ ಕಾರ್ಯ ಮಾತ್ರ. ಕೆಲಸ ಮಾಡುತ್ತಿದ್ದೆ. ಆದರೆ ಯಾವುದೇ ನಿರೀಕ್ಷೆ ನನ್ನಲ್ಲಿರಲಿಲ್ಲ. ಪಕ್ಷವನ್ನು ವೈಭವ ಸ್ಥಿತಿಗೆ ಕೊಂಡೊಯ್ಯುವುದಷ್ಟೇ ನನ್ನ ನಿರೀಕ್ಷೆ.ಅದರ ಮಧ್ಯೆ ಪಕ್ಷ ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ಕೊಡುತ್ತದೆ. ಆ ಜವಾಬ್ದಾರಿಯನ್ನು ನಿನ್ನೆ ಕೊಟ್ಟಿದ್ದಾರೆ. ಎಲ್ಲಾ ಹಿರಿಯ ಮತ್ತು ಕಿರಿಯರ ಮಾರ್ಗದರ್ಶನದಲ್ಲಿ ಸಂಘಟನೆಯ ಕಾರ್ಯವನ್ನು ಪಕ್ಷ ಬಲವರ್ಧನೆಗೆ ಮಾಡುತ್ತೇನೆಂಬ ವಿಶ್ವಾಸವಿದೆ ಎಂದರು.
ನಮ್ಮ ಪಕ್ಷದಲ್ಲಿ ಕಾರ್ಯಕರ್ತರನ್ನು ಬೆಳೆಸುವ ಪದ್ಧತಿ ಇದೆ. ಎಲ್ಲರೂ ಒಂದಾಗಿದ್ದು ಮಾರ್ಗದರ್ಶನ ಮಾಡುತ್ತಾರೆ. ಹೀಗಾಗಿ ಇಂದು ಕೊಟ್ಟಿರುವ ಜವಾಬ್ದಾರಿಗೆ ಎಲ್ಲಾ ಹಿರಿಯರು, ಕಿರಿಯರು ನಿಂತು ನನ್ನ ಬಳಿ ಈ ಕೆಲಸ ಮಾಡಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ನಾವು ತಂಡ ಮಾಡಿಕೊಂಡು ಕೆಲಸ ಮಾಡುತ್ತೇವೆ, ಯಾರೋ ಒಬ್ಬನೇ ಎಲ್ಲಾ ಕೆಲಸ ಮಾಡುವುದಿಲ್ಲ. ರಾಜಕೀಯದಲ್ಲಿ ಅಸಮಾಧಾನ ಸಾಮಾನ್ಯ. ಆದರೆ ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಯಡಿಯೂರಪ್ಪನವರು ನಮ್ಮ ಪಕ್ಷದ ಅತ್ಯಂತ ಹಿರಿಯ ನಾಯಕರು. ಅದೇ ರೀತಿ ಜಗದೀಶ್ ಶೆಟ್ಟರ್, ಸದಾನಂದಗೌಡ, ಈಶ್ವರಪ್ಪ ಹಾಗೂ ಪ್ರಹ್ಲಾದ್ ಜೋಷಿಯವರಂತಹ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷ ಬಲವರ್ಧನೆ ಮಾಡುವಂತಹ ಶಕ್ತಿ ಬರುತ್ತದೆ ಎಂಬ ವಿಶ್ವಾಸವಿದೆ ಎಂದು ಈ ವೇಳೆ ಹೇಳಿದರು.
