ಕಂಪ್ಲಿ ಶಾಸಕ ಗಣೇಶ್​ಗೆ ಷರತ್ತುಬದ್ಧ ಜಾಮೀನು ಮಂಜೂರು – Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಕಂಪ್ಲಿ ಶಾಸಕ ಜಿಎನ್​ ಗಣೇಶ್​ಗೆ ಕೊನೆಗೂ ಜಾಮೀನು ಮಂಜೂರಾಗಿದೆ. ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ವಿಜಯಪುರ ಶಾಸಕ ಆನಂದ್‌ ಸಿಂಗ್‌ ಮೇಲೆ ಹಲ್ಲೆ ನಡೆಸಿ ಫೆ.21 ರಿಂದ ಜೈಲು ವಾಸದಲ್ಲಿದ್ದ ಕಂಪ್ಲಿ ಗಣೇಶ್​ಗೆ ಹೈಕೋರ್ಟ್​ ಏಕ ಸದಸ್ಯ ಪೀಠ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಸಾಕ್ಷ್ಯ ನಾಶ ಮಾಡದಂತೆ ಹಾಗೂ ಇಂತಹ ಮರುಕಳಿಸದಂತೆ ಎಚ್ಚರಿಕೆ ನೀಡಿರುವ ಹೈಕೋರ್ಟ್ ನ ಏಕ ಸದಸ್ಯ ಪೀಠ 2 ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಪಡೆದು ಜಾಮೀನು ಮಂಜೂರು ಮಾಡಲಾಗಿದೆ.

ಗಣೇಶ್ ಪರ ಜಾಮೀನು ನೀಡುವಂತೆ ವಾದ ಮಂಡಿಸಿದ ವಕೀಲ ಬಿ.ವಿ.ಆಚಾರ್ಯ, ಈ ಘಟನೆ ಪೂರ್ವನಿಯೋಜಿತವಲ್ಲ. ಮೊದಲು ಆನಂದ್ ಸಿಂಗ್​ ಅವರೇ ಹಲ್ಲೆ ನಡೆಸಿದ್ದರು ಇದಕ್ಕೆ ಪ್ರತಿಯಾಗಿ ಆತ್ಮರಕ್ಷಣೆಗಾಗಿ ಗಣೇಶ್ ಪ್ರತಿದಾಳಿ ನಡೆಸಿದ್ದಾರೆ. ಇನ್ನು ಘಟನೆಗೆ ಸಚಿವರು, ಶಾಸಕರೇ ಸಾಕ್ಷಿಗಳಾಗಿರುವ ಕಾರಣ ಅವರ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಈ ಆಧಾರದ ಮೇಲೆ ಕಂಪ್ಲಿ ಗಣೇಶ್​ಗೆ ಜಾಮೀನು ನೀಡಬೇಕಾಗಿದೆ ಅಂತಾ ಬಿ.ವಿ.ಆಚಾರ್ಯ ಮನವಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿಆರೋಪಿ ಹೊರ ಬಂದರೆ ಆನಂದ್ ಸಿಂಗ್​ ಜೀವ ಅಪಾಯವಿದೆ ಎಂದು ವಾದಿಸಿದ್ದರು. ವಾದ ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದ್ದ ಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.