ಕರಾವಳಿಯಲ್ಲಿ ಇಂದು ಮೋದಿ ಹವ..ಭರ್ಜರಿ ಸ್ವಾಗತ ಕೋರಲು ಸಜ್ಜಾದ ಚೌಕಿದಾರ್ ಕಮಲ ಪಡೆ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು:2018ರ ವಿಧಾನಸಭೆ ಚುನಾವಣೆ ಸಂದರ್ಭ ಮೋದಿ ಮಂಗಳೂರಿಗೆ ಆಗಮಿಸಿ ಚುನಾವಣಾ ಪ್ರಚಾರ ಭಾಷಣ ಮಾಡಿದ್ದರು. ಚುನಾವಣೆಯಲ್ಲಿ ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಜಯ ಸಾಧಿಸಲು ಬಿಜೆಪಿ ಯಶಸ್ವಿಯಾಗಿತ್ತು. ಮೋದಿ ಆಗಮನ ಹಿನ್ನೆಲೆಯಲ್ಲಿ ಬಿಜೆಪಿ ಪಾಳಯದಲ್ಲಿ ಉತ್ಸಾಹ ಇಮ್ಮಡಿಯಾಗಿದ್ದು, ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ದ.ಕ. ಜಿಲ್ಲೆಯ 1,860 ಬೂತ್‌ಗಳಿಂದ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಈ ಹಿಂದಿನ ಎಲ್ಲ ರ್ಯಾಲಿಗಳನ್ನು ಮೀರಿಸಿ ಜಿಲ್ಲೆಯ ರಾಜಕೀಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ರ್ಯಾಲಿ ಇದಾಗುವ ಎಲ್ಲ ಸಾಧ್ಯತೆ ಇದೆ ಎಂದು ಸುನೀಲ್‌ಕುಮಾರ್ ಹೇಳಿದರು.

2014ರ ಲೋಕಸಭಾ ಚುನಾವಣೆ ಸಂದರ್ಭ ಪ್ರಧಾನಿ ಅಭ್ಯರ್ಥಿಯಾಗಿ ಆಗಮಿಸಿದ ಮೋದಿ ನೆಹರು ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಜಿಲ್ಲೆಯ ರಾಜಕೀಯ ಇತಿಹಾಸದಲ್ಲೇ ಪ್ರಥಮವಾಗಿ ಭಾರಿ ಸಂಖ್ಯೆಯ ಜನ ಆ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಚುನಾವಣೆಯಲ್ಲಿ ಬಿಜೆಪಿ 1.43 ಲಕ್ಷ ಮತಗಳ ಅಂತರದ ಜಯ ಸಾಧಿಸಿತ್ತು. ಮೋದಿ ಮೋಡಿ ಯಶಸ್ವಿಯಾಗಿತ್ತು.

ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಮತ್ತು ಸುರಕ್ಷತೆ ಕಾಪಾಡಲು ಏ.13ರಂದು ಬೆಳಗ್ಗೆ 6ರಿಂದ ಮಧ್ಯರಾತ್ರಿ 12 ಗಂಟೆ ತನಕ ಮಂಗಳೂರು, ಮೂಡುಬಿದಿರೆ ಹಾಗೂ ಬಂಟ್ವಾಳ ತಾಲೂಕಿನಾದ್ಯಂತ ಮದ್ಯಮುಕ್ತ ದಿನಗಳು (ಡ್ರೈಡೇಸ್) ಎಂದು ಘೋಷಿಸಲಾಗಿದೆ.

ಭದ್ರತಾ ಪಡೆಗಳು, ಪೊಲೀಸ್ ಇಲಾಖೆ ಬಿಗು ಬಂದೋಬಸ್ತ್ ಮಾಡಿದ್ದು, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ನಗರದಲ್ಲಿ ಶುಕ್ರವಾರದಿಂದಲೇ ಹದ್ದಿನ ಕಣ್ಣಿಡಲಾಗಿದೆ. ಬಂದೋಬಸ್ತ್‌ಗೆ ನಿಯೋಜಿಸಲಾದ 3000ಕ್ಕೂ ಅಧಿಕ ಪೊಲೀಸರಿಗೆ ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಸೂಕ್ತ ನಿರ್ದೇಶನ ಹಾಗೂ ಸೂಚನೆ ನೀಡಿದರು.

ಬಂದೋಬಸ್ತ್: ನಗರದಲ್ಲಿ 5 ಎಸ್ಪಿ/ಡಿಸಿಪಿ, 10 ಡಿವೈಎಸ್ಪಿ/ಎಸಿಪಿ, 36 ಇನ್‌ಸ್ಪೆಕ್ಟರ್, 67 ಪಿಎಸ್‌ಐ, 147 ಎಎಸ್‌ಐ, 1207 ಹೆಡ್‌ಕಾನ್‌ಸ್ಟೆಬಲ್/ಕಾನ್‌ಸ್ಟೆಬಲ್‌ಗಳು, 92 ಗೃಹರಕ್ಷಕರು, 5 ಕೆಎಸ್‌ಆರ್‌ಪಿ ತುಕಡಿ, 19 ಸಿಎಆರ್ ತುಕಡಿ, 2 ಸಿಆರ್‌ಪಿಎಫ್ ತುಕಡಿ, 4 ಎಎಸ್‌ಸಿ ತಂಡ, 1 ಬಿಡಿಡಿಎಸ್ ತಂಡ, 30 ಡಿಎಫ್‌ಎಂಡಿ/ಎಚ್‌ಎಚ್‌ಎಂಡಿ, 34 ಸೆಕ್ಟರ್ ಮೊಬೈಲ್‌ಗಳು ಹಾಗೂ 144 ಸೂಕ್ಷ್ಮ ಪ್ರದೇಶಗಳಲ್ಲಿ ಪಿಕೆಟಿಂಗ್ ಪಾಯಿಂಟ್‌ಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕಾರ್ಯಕ್ರಮ ಸ್ಥಳದಲ್ಲಿ 25ಕ್ಕೂ ಅಧಿಕ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಲಾಗಿದೆ.

ಪ್ರಧಾನಿ ಕಾರ್ಯಕ್ರಮ: 
– ಮಧುರೈಯಿಂದ ಸಂಜೆ 4ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ
– 4.15ಕ್ಕೆ ಕೇಂದ್ರ ಮೈದಾನಕ್ಕೆ
– 5.15ಕ್ಕೆ ಮೈದಾನದಿಂದ ನಿರ್ಗಮನ
– 5.30ಕ್ಕೆ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ನಿರ್ಗಮನ

ನವದೆಹಲಿಯಿಂದ ಎಸ್‌ಪಿಜಿ ತಂಡ ಮೂರು ದಿನ ಹಿಂದೆಯೇ ಆಗಮಿಸಿ, ವೇದಿಕೆ, ಸಭಾಂಗಣ ನಿರ್ಮಾಣದ ಸುತ್ತ ಸತತ ಪರಿಶೀಲನೆ ನಡೆಸುತ್ತಿದೆ. ಮೈದಾನವನ್ನು ಭದ್ರತಾ ಪಡೆಗಳು ಸುಪರ್ದಿಗೆ ಪಡೆದಿವೆ. ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸುತ್ತಿವೆ.
ಮೈದಾನದ ಸಮೀಪ ರಸ್ತೆಗಳಿಗೆ ಸಾರ್ವಜನಿಕರು ಇಳಿಯದಂತೆ ತಡೆಯುವ ನಿಟ್ಟಿನಲ್ಲಿ ಪುಟ್‌ಪಾತ್‌ನ ಬದಿಗಳಲ್ಲಿ ರಾಡ್‌ಗಳನ್ನು ಬಳಸಿ ತಡೆಬೇಲಿ ಹಾಕಲಾಗಿದೆ. ಸುತ್ತಲಿನ ಪ್ರದೇಶಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.