ಕಾಪು : ಜಿಲ್ಲೆಯಲ್ಲಿ ಲಾಕ್‌ಡೌನ್ ಬೇಕೇ, ಬೇಡವೇ ಎನ್ನುವುದನ್ನು ಜನರೇ ನಿರ್ಧರಿಸಲಿ : ಜಿಲ್ಲಾದಿಕಾರಿ ಜಿ. ಜಗದೀಶ್ -Vishwanews24

Featured, ಉಡುಪಿ

ಕಾಪು : ಜಿಲ್ಲೆಯಲ್ಲಿ ಲಾಕ್‌ಡೌನ್ ಬೇಕೇ, ಬೇಡವೇ ಎನ್ನುವುದನ್ನು ಜನರೇ ನಿರ್ಧರಿಸಲಿ : ಜಿಲ್ಲಾದಿಕಾರಿ ಜಿ. ಜಗದೀಶ್ -Vishwanews24

ಕಾಪು : ಉಡುಪಿ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳಕ್ಕೆ ಪರೋಕ್ಷವಾಗಿ ಜನರೇ ಕಾರಣರಾಗುತ್ತಿದ್ದು, ಜನ ಮತ್ತೊಮ್ಮೆ ಮೈಮರೆತರೆ ತಾವಾಗಿಯೇ ಲಾಕ್‌ಡೌನ್‌ನ ಸುಳಿಯೊಳಗೆ ಸಿಲುಕಿ ಕೊಳ್ಳುವ ಅನಿವಾರ್ಯತೆ ಎದುರಾಗಬಹದು. ನಮ್ಮ ಜಿಲ್ಲೆಯಲ್ಲಿ ಮತ್ತೆ ಲಾಕ್‌ಡೌನ್ ಬೇಕೇ ? ಬೇಡವೇ ? ಎನ್ನುವುದನ್ನು ಸ್ವತಃ ಜಿಲ್ಲೆಯ ಜನರೇ ನಿರ್ಧರಿಸಬೇಕಿದೆ ಎಂದು ಉಡುಪಿ ಜಿಲ್ಲಾದಿಕಾರಿ ಜಿ. ಜಗದೀಶ್ ಹೇಳಿದರು.

ಕಳತ್ತೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅವದಿಯಲ್ಲಿ ೧೦೦ರ ಆಸುಪಾಸಿನಲ್ಲಿ ಕೊರೊನಾ ಪಾಸಿಟಿವ್ ಕೇಸ್‌ಗಳು ಬರುತ್ತಿದ್ದವು. ಪಾಸಿಟಿವಿಟಿ ದರ ಶೇ. ೨ ರಿಂದ ೩ರ ಆಸುಪಾಸಿನಲ್ಲಿತ್ತು. ಆದರೆ ಕಳೆದ ೩-೪ ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದ್ದು ಶೇ. ೪ ರಿಂದ ೪.೫ರವರೆಗೆ ಏರುತ್ತಿದೆ. ಒಂದೆರಡು ದಿನಗಳಲ್ಲಿ ಆಗಿರುವ ಬೆಳವಣಿಗೆಗಳನ್ನು ನೋಡಿಕೊಂಡು ಏನೂ ಹೇಳಲಾಗದು. ಮತ್ತೆ ಪಾಸಿಟಿವಿಟಿ ದರ ಏರಿಕೆಯಾದರೆ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾದೀತು ಎಂದು ಅವರು ಹೇಳಿದ್ದಾರೆ.

ಜಿಲ್ಲೆಯಲ್ಲಿ ಪ್ರಸ್ತುತ ಎಲ್ಲವೂ ಓಪನ್ ಆಗಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಮಹಾರಾಷ್ಟ್ರ ಮತ್ತು ಕೇರಳದ ನಡುವೆ ಜಿಲ್ಲೆಗೆ ನಿಕಟ ಸಂಪರ್ಕ ಹೊಂದಿರುವುದರಿಂದ ಕೊರೊನಾ ಪ್ರಕರಣಗಳು ಮತ್ತೆ ಏರಿಕೆಯಾಗುವಂತಾಗಿದೆ. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು, ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬೇಕಾದ ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಕಠಿಣ ನಿಯಮಗಳನ್ನು ಜಾರಿಗೊಳಿಸಲು ಜಿಲ್ಲಾಡಳಿತ ಬದ್ಧವಿದೆ ಎಂದರು.

ಸಾರ್ವಜನಿಕ ಪ್ರದೇಶಗಳಿಗೆ ತೆರಳುವಾಗ ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಪಾಲನೆ ಸಹಿತವಾಗಿ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಹಾಗೂ ಸರಕಾರದ ಮುನ್ಸೂಚನೆಗಳನ್ನು ಪಾಲಿಸುವುದು ಅತ್ಯಗತ್ಯವಾಗಿದೆ.ಪ್ರತೀ ಸ್ಥಳದಲ್ಲೂ ಅದಿಕಾರಿಗಳೇ ಬಂದು ಹೇಳಬೇಕಾಗಿಲ್ಲ. ಸಾರ್ವಜನಿಕರಿಗೂ ಜವಾಬ್ದಾರಿಯಿದೆ. ತಮ್ಮ ಆರೋಗ್ಯದ ರಕ್ಷಣೆಗೆ ತಾವೇ ಯೋಚನೆ ಮಾಡಬೇಕಿದೆ ಎಂದರು.