ಕಾಪು : ಇಂದು ಸ್ವರ್ಣ ಗದ್ದುಗೆಯಲ್ಲಿ ಶ್ರೀಮಾರಿಯಮ್ಮ, ಸ್ವರ್ಣಪೀಠದಲ್ಲಿ ಉಚ್ಚಂಗಿ ದೇವಿ ಪ್ರತಿಷ್ಠೆ – vishwanews24

Featured, ಉಡುಪಿ

ಕಾಪು : ಸ್ವರ್ಣ ಗದ್ದುಗೆಯಲ್ಲಿ ಇಂದು ಶ್ರೀಮಾರಿಯಮ್ಮ, ಸ್ವರ್ಣಪೀಠದಲ್ಲಿ ಉಚ್ಚಂಗಿ ದೇವಿ ಪ್ರತಿಷ್ಠೆ

ಸಂಜೆ ಧಾರ್ಮಿಕ ಸಭೆ, ಉಡುಪಿ ಪೇಜಾವರ ಶ್ರೀ , ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಭಾಗಿ

ಕಾಪು: ಮಾರಿಗುಡಿ ದೇವಸ್ಥಾನದಲ್ಲಿ ಮಾ. 2ರಂದು ಮಧುರಪ್ರದ ಮಧುರ ಫಲ ಚಂಡೀಯಾಗ ಸಹಿತವಾಗಿ ಬೆಳಗ್ಗೆ 11.05ಕ್ಕೆ ಶ್ರೀ ಮಾರಿಯಮ್ಮ ದೇವರ ಮಹಾಸ್ವರ್ಣಪೀಠ (ಸ್ವರ್ಣ ಗದ್ದುಗೆ) ದೊಂದಿಗೆ ವ್ಯಸ್ತಾಂಗ ಸಮಸ್ತನ್ಯಾಸಪೂರ್ವಕ ಶ್ರೀ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯ ಸ್ವರ್ಣಪೀಠದೊಂದಿಗೆ ಉಚ್ಚಂಗಿದೇವಿಯ ಪ್ರತಿಷ್ಠೆ ನಡೆಯಲಿದೆ.

ಕೊರಂಗ್ರಪಾಡಿ ವೇ| ಕೆ. ಜಿ. ರಾಘವೇಂದ್ರ ತಂತ್ರಿಗಳ ಮಾರ್ಗದರ್ಶನದಲ್ಲಿ ಪ್ರಧಾನ ತಂತ್ರಿ ಕೊರಂಗ್ರಪಾಡಿ ಕೆ. ಪಿ. ಕುಮಾರ ಗುರು ತಂತ್ರಿಗಳ ನೇತೃತ್ವದಲ್ಲಿ, ಅರ್ಚಕ ವೇ| ಕಲ್ಯ ಶ್ರೀನಿವಾಸ ತಂತ್ರಿಯವರ ಸಹಯೋಗದೊಂದಿಗೆ ಸ್ವರ್ಣ ಗದ್ದುಗೆ, ಮಾರಿಯಮ್ಮ ದೇವಿ, ಉಚ್ಚಂಗಿ ದೇವಿ ಪ್ರತಿಷ್ಠಾ ಪೂರ್ವಕ ಧಾರ್ಮಿಕ ಕಾರ್ಯಕ್ರಮ ಗಳು ನಡೆಯಲಿದ್ದು, ಸಂಜೆ ಭದ್ರಕಾಳೀ ಕುರುಜಿತರ್ಪಣ, ಚಂಡಿಕಾ ದಳಾನುಷ್ಟಾನ ಮಂಡಲಪೂಜಾ, ದಶವಿಧ ಲಿಪಿದೇವತಾಮಾತೃಕಾಮಂಡಲಾರಾಧನಮ್‌, ಅಪರಾಜಿತಾಕಲಾ ಮಾತೃಕಾಮಂಡಲಾರ್ಚನಮ್‌ ಸಹಿತ ವಿವಿಧ ಧಾರ್ಮಿಕ ಪೂಜೆಗಳು ನಡೆಯಲಿವೆ.

ಸಂಜೆ 6 ಗಂಟೆಗೆ ಮಹಾದೇವಿ ಪ್ರೌಢಶಾಲೆಯ ಮೈದಾನದಲ್ಲಿ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಉಡುಪಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸಹಿತ ಗಣ್ಯರು ಭಾಗವಹಿಸಲಿದ್ದು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ| ಕೆ. ಪ್ರಕಾಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 4 ಗಂಟೆಗೆ ಪಟ್ಲ ಸತೀಶ್‌ ಶೆಟ್ಟಿ ನೇತೃತ್ವದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ, ರಾತ್ರಿ 8ರಿಂದ ಕಲಾವತಿ ದಯಾನಂದ್‌ ಬಳಗದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

Leave a Reply