ಕಾರ್ಕಳ : ಪ್ರೀತಿ ವಿಚಾರ ಮುಚ್ಚಿಟ್ಟು ಮದುವೆ : ಪತಿ, ಕುಟುಂಬಸ್ಥರ ವಿರುದ್ಧ ಪತ್ನಿಯಿಂದ ದೂರು ದಾಖಲು – vishwanews24

Featured, ಉಡುಪಿ

ಕಾರ್ಕಳ : ಪ್ರೀತಿ ವಿಚಾರ ಮುಚ್ಚಿಟ್ಟು ಮದುವೆ : ಪತಿ, ಕುಟುಂಬಸ್ಥರ ವಿರುದ್ಧ ಪತ್ನಿಯಿಂದ ದೂರು ದಾಖಲು

ಕಾರ್ಕಳ: ತಾನು ಬೇರೊಬ್ಬ ಮಹಿಳೆಯನ್ನು ಪ್ರೀತಿಸುತ್ತಿರುವ ವಿಚಾರವನ್ನು ಮರೆಮಾಚಿ ಮದುವೆಯಾಗಿ, ನಂತರ ಪತ್ನಿಗೆ ವಂಚಿಸಿದ ಪತಿ ಹಾಗೂ ಆತನಿಗೆ ಸಾಥ್ ನೀಡಿದ ಕುಟುಂಬದವರ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈದು ಗ್ರಾಮದ ಅಲಿಮಾರು ಗುಡ್ಡೆಯ ನಿವಾಸಿ ಎ.ಸಿ. ಶರ್ಮಿಳಾ ಅವರು ವಂಚನೆಗೊಳಗಾದ ಸಂತ್ರಸ್ತೆ. ಇವರು ಪುತ್ತೂರು ಆರ್ಯಾಪು ನಿವಾಸಿ ವಸಂತ ಬಿ. ಎಂಬುವವರನ್ನು ಕಳೆದ ಅ. 29ರಂದು ವಿವಾಹವಾಗಿದ್ದರು.

ಇದನ್ನೂ ಓದಿ 👇

ಫೆ.7 ಮತ್ತು 8ರಂದು ಐಕಳ ಬಾವ ಕಾಂತಾಬಾರೆ-ಬೂದಾಬಾರೆ ಕಂಬಳ – vishwanews24

ಮದುವೆಯ ಮಾತುಕತೆಯ ಸಂದರ್ಭ ಆರೋಪಿ ವಸಂತ ತಾನು ಬೇರೊಬ್ಬ ಮಹಿಳೆಯನ್ನು ಪ್ರೀತಿಸುತ್ತಿರುವ ವಿಚಾರವನ್ನು ಮುಚ್ಚಿಟ್ಟಿದ್ದನು. ವಿವಾಹವಾದ ಬಳಿಕ ಕೇವಲ ಒಂದು ವಾರ ಪತ್ನಿಯೊಂದಿಗೆ ಇದ್ದು, ನಂತರ ತನ್ನ ಪ್ರೇಮ ವಿಚಾರವನ್ನು ಬಯಲು ಮಾಡಿದ್ದಾನೆ. ಅಲ್ಲದೆ, ಈ ಬಗ್ಗೆ ಪತ್ನಿಗೆ ಪರಿಹಾರ ರೂಪದಲ್ಲಿ 6 ಲಕ್ಷ ರೂ. ನೀಡುವುದಾಗಿ ನಂಬಿಸಿ, ಈಗ ಹಣವನ್ನೂ ನೀಡದೆ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕುಟುಂಬಸ್ಥರ ಮೇಲೂ ದೂರು: ಆರೋಪಿ ವಸಂತನ ಪ್ರೇಮ ವ್ಯವಹಾರದ ಬಗ್ಗೆ ಆತನ ತಾಯಿ ವಿಮಲ, ಅಣ್ಣ ರಘು, ಅಣ್ಣನ ಹೆಂಡತಿ ವಿನೋದ, ಸಹೋದರಿಯರಾದ ಪೂರ್ಣಿಮ, ಅಶ್ವಿನಿ ಮತ್ತು ಭಾವಂದಿರಾದ ಅಶೋಕ ಹಾಗೂ ಸುರೇಶ ಅವರಿಗೆ ಮೊದಲೇ ತಿಳಿದಿತ್ತು. ಆದರೂ ಸತ್ಯವನ್ನು ಮರೆಮಾಚಿ, ವಸಂತನಿಗೆ ಈ ವಂಚನೆಯಲ್ಲಿ ಸಹಕರಿಸಿದ್ದಾರೆ ಎಂದು ಶರ್ಮಿಳಾ ಆರೋಪಿಸಿದ್ದಾರೆ.

ಇದನ್ನೂ ಓದಿ 👇

ಅದಾನಿ ಫೌಂಡೇಶನ್‌ನಿಂದ ಪಡುಬಿದ್ರಿ ಗ್ರಾಪಂಗೆ ಕಸ ನಿರ್ವಹಣಾ ವಾಹನ ಹಸ್ತಾಂತರ – vishwanews24

ಪತ್ನಿ ನೀಡಿದ ದೂರಿನ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸರು BNS ಕಲಂ 318(2), 318(4) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply