ಕಾರ್ಕಳ: ಶೀಘ್ರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ರಚನೆಗೆ ಗ್ರೀನ್ ಸಿಗ್ನಲ್ ನೀಡಿದ ಶ್ರೀರಾಮುಲು -Vishwanews24

Featured, ಉಡುಪಿ

ಕಾರ್ಕಳ : ಕಾರ್ಕಳಕ್ಕೆ ಶೀಘ್ರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ರಚನೆಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಗ್ರೀನ್ ಸಿಗ್ನಲ್ ನೀಡಿದ್ದು, ಜತೆಗೆ ಎರಡು ಹೊಸ ತುರ್ತು ಚಿಕಿತ್ಸಾ ವಾಹನ ಹಾಗೂ ಮೂರು ಹಿಂದುಳಿದ ವರ್ಗಗಳ ಸಮುದಾಯ ಭವನಕ್ಕೆ ತಲಾ ಹತ್ತು ಲಕ್ಷ ರೂ. ನೀಡುವ ಕುರಿತು ಘೋಷಿಸಿದ್ದಾರೆ.

ಅವರು ಮಂಗಳವಾರ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲೆ ಹಾಗೂ ಇಂಜಿನಿಯರಿಂಗ್ ಉಪವಿಭಾಗ ಮಂಗಳೂರು ಇದರ 100 ಹಾಸಿಗೆಗಳ ಕಾರ್ಕಳ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ನೂತನ 8.5 ಕೋಟಿ ರೂ. ವೆಚ್ಚದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಸಚಿವರು ಸರಕಾರಿ ಆಸ್ಪತ್ರೆಗಳ ಸುಧಾರಣೆಗಾಗಿ ಮಂತ್ರಿಗಳು ಪ್ರವಾಸಿ ಬಂಗಲೆ, ರೆಸಾರ್ಟ್ ಗಳಲ್ಲಿ ವ್ತಾಸ್ತವ್ಯ ಹೂಡದೆ ಸರಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯವಿದ್ದು ಆಸ್ಪತ್ರೆಗಳ ಸ್ಥಿತಿಗತಿ ಸಮಸ್ಯೆಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಪರಿಹಾರ ಕಂಡು ಹುಡುಕುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಬೇಕು.

ವೈದ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಾಗಿ ಆಸ್ಪತ್ರೆ ವಠಾರದಲ್ಲಿ ಸಿಸಿ ಕ್ಯಾಮರಾ, ಪೊಲೀಸ್ ಸಿಬ್ಬಂದಿಗಳನ್ನು, ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು. ಸ್ವಚ್ಚತೆ ವಿಚಾರದಲ್ಲಿ ಯಾವುದೇ ದೂರುಗಳು ಬಂದಲ್ಲಿ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ವೈದ್ಯರ ನೇಮಕಾತಿಯಲ್ಲಿ ವಿಳಂಬವಾಗುತ್ತಿದ್ದು ಇದೀಗ ಯಡಿಯೂರಪ್ಪ ನೇತ್ರತ್ವದ ಸರಕಾರದಲ್ಲಿ ಯಾವುದೇ ಅಡೆತಡೆಯಿಲ್ಲದೇ ನೇರ ನೇಮಕಾತಿ ನಡೆಸಲಾಗುವುದು. ಅದರಂತೆ ಯಾವುದೇ ವೈದ್ಯ ಖಾಸಗಿ ಆಸ್ಪತ್ರೆ ಬಿಟ್ಟು ಸರಕಾರಿ ಆಸ್ಪತ್ರೆಗೆ ಬರುವುದಾದರೆ ಖಾಸಗಿ ಆಸ್ಪತ್ರೆಯಲ್ಲಿ ನೀಡುವಷ್ಟೇ ವೇತನ ನಮ್ಮ ಸರಕಾರ ನೀಡಲಿದೆ ಎಂದರು.

ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ ಸಾರ್ವಜನಿಕರ ಅನುಕೂಲಕ್ಕಾಗಿ ಒಂದೇ ಸೂರಿನಡಿ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಯಾವುದೇ ಕೊರತೆಗಳು ಬಾರದಂತೆ ಸುಸಜ್ಜಿತವಾಗಿ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರ ಭಾವನೆಯನ್ನು ಅರ್ಥ ಮಾಡಿಕೊಂಡು ಯಾವುದೇ ಸೇವೆಯಲ್ಲಿ ಕೊರತೆ ಕಾಣದಂತೆ ವೈದ್ಯರು ತಮ್ಮ ಸೇವೆಯನ್ನು ನೀಡಬೇಕಾಗಿದೆ ಎಂದರು.