ಕಾಲಭೈರವೇಶ್ವರನ ಪವಾಡದಿಂದ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿತು : ಎಚ್‌.ಡಿ ಕುಮಾರಸ್ವಾಮಿ -Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ನ್ಯೂಜೆರ್ಸಿ: ಆರೋಗ್ಯವನ್ನೂ ಲೆಕ್ಕಿಸದೇ ವಿಧಾನಸಭೆ ಚುನಾವಣೆಯಲ್ಲಿ ದುಡಿದಿದ್ದ ನನಗೆ ಫಲಿತಾಂಶ ಕಂಡು ರಾಜಕೀಯ ನಿವೃತ್ತಿ ಪಡೆಯಬೇಕು ಎನಿಸಿತ್ತು. ಆಗ ಕಾಲಭೈರವೇಶ್ವರನ ಪವಾಡ ನಡೆಯಿತು. ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿತು ಎಂದು ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಅಮೆರಿಕಾದ ನ್ಯೂಜೆರ್ಸಿಯಲ್ಲಿ ಆದಿಚುಂಚನಗಿರಿ ಮಠದ ವತಿಯಿಂದ ನಿರ್ಮಾಣವಾಗುತ್ತಿರುವ ಕಾಲ ಭೈರವೇಶ್ವರ ದೇಗುಲದ ಅಡಿಗಲ್ಲು ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ತಾವು ಮುಖ್ಯಮಂತ್ರಿಯಾದ ಸನ್ನಿವೇಶದ ಕುರಿತು  ಮಾತನಾಡಿದ್ದಾರೆ.

‘ಫಲಿತಾಂಶದ ದಿನ ಬೆಳಗ್ಗೆ ಕಾಲಭೈರವೇಶ್ವರನ ದರ್ಶನ ಪಡೆಯಬೇಕು ಎಂದು ನಿರ್ಮಲಾನಂದನಾಥ ಶ್ರೀಗಳು ಸೂಚಿಸಿದ್ದರು. ಅವರ ಸೂಚನೆ ಮೇರೆಗೆ ಅಂದು ಅಂದು ಬೆಳಗ್ಗೆಯೇ ನಾನು ಆದಿಚುಂಚನಗಿರಿಗೆ ತೆರಳಿ ದರ್ಶನ ಪಡೆದು ಬೆಂಗಳೂರಿಗೆ ಆಗಮಿಸಿದ್ದೆ.

ಫಲಿತಾಂಶ ನೋಡಿದಾಗ ನನಗೆ ಬೇಸರವಾಗಿತ್ತು. ಚುನಾವಣೆಯಲ್ಲಿ ನಾನು ಅವಿರತ ಪರಿಶ್ರಮ ಹಾಕಿದ್ದೆ. ಆರೋಗ್ಯವನ್ನೂ ಲೆಕ್ಕಿಸದೇ ಕೆಲಸ ಮಾಡಿದ್ದೆ. ಇಷ್ಟಾದರೂ ಜನ ನನಗೆ ಮನ್ನಣೆ ನೀಡಲಿಲ್ಲವಲ್ಲ ಎಂದೆನಿಸಿ, ರಾಜಕೀಯ ನಿವೃತ್ತಿ ಪಡೆಯಲು ಯೋಚನೆ ಮಾಡುತ್ತಿದ್ದೆ. ಆಗ ಕಾಂಗ್ರೆಸ್‌ ಕಡೆಯಿಂದ ಕರೆ ಬಂತು. ನೀವೇ ಮುಖ್ಯಮಂತ್ರಿ ಆಗಬೇಕು ಎಂದು ಕಾಂಗ್ರೆಸ್‌ ಹೇಳಿತು. ಇದೇ ನೋಡಿ ಕಾಲಭೈರವೇಶ್ವರನ ಶಕ್ತಿ,’ ಎಂದು ಕುಮಾರಸ್ವಾಮಿ ಹೇಳಿದರು.

‘ಆದಿಚುಂಚನಗಿರಿಯಲ್ಲಿರುವ ಕಾಲಭೈರವನ ದೇವಾಲಯ ನಿರ್ಮಾಣಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ನನ್ನ ಕೈಯಲ್ಲೇ ಅಡಿಗಲ್ಲು ಹಾಕಿಸಿದ್ದರು. ನ್ಯೂಜೆರ್ಸಿಯಲ್ಲಿ ನಿರ್ಮಿಸುತ್ತಿರುವ ದೇಗುಲಕ್ಕೂ ನಾನೇ ಅಡಿಗಲ್ಲು ಹಾಕುತ್ತಿದ್ದೇನೆ. ಇದು ತಮ್ಮ ಪಾಲಿನ ಪುಣ್ಯ,’ ಎಂದು ಎಚ್‌ಡಿಕೆ ಸ್ಮರಿಸಿದರು.