ಕಾಲಭೈರವೇಶ್ವರ ಸನ್ನಿಧಿ ಕನ್ನಡಿಗರನ್ನು ಒಂದಾಗಿಸುವ ವೇದಿಕೆ : ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ -Vishwanews24
ನ್ಯೂಜೆರ್ಸಿ,: ಅಮೆರಿಕ ಪ್ರವಾಸದಲ್ಲಿರುವ ಕರ್ನಾಟಕದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ನ್ಯೂಜೆರ್ಸಿಯಲ್ಲಿರುವ ಸಾಮರ್ಸೇಟ್ ನಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ವತಿಯಿಂದ ನಿರ್ಮಿಸಲಾಗುತ್ತಿರುವ ಶ್ರೀ ಕಾಲಭೈರವೇಶ್ವರ ದೇವಾಲಯದ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿದ್ದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಗುಜರಾತಿನ ಅರ್ಷ ವಿದ್ಯಾಮಂದಿರದ ಪರಮಾತ್ಮಾನಂದ ಸ್ವಾಮೀಜಿ ಹಾಗೂ ಮೈಸೂರಿನ ಸಚ್ಚಿದಾನಂದ ಗಣಪತಿ ಸ್ವಾಮೀಜಿ ಉಪಸ್ಥಿತರಿದ್ದರು
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಜೂನ್ 30 ರಂದು ಬೆಳಿಗ್ಗೆ(ಅಲ್ಲಿನ ಕಾಲಮಾನ) ಕಾಲಭೈರವೇಶ್ವರ ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 125 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ, ಧರ್ಮ ಜಾಗೃತಿ ಮೂಡಿಸಿದ್ದರು. ಧರ್ಮ ಜೀವನ ಪಥ. ಜಾತಿ-ಪಂಥದ ಎಲ್ಲೆ ಮೀರಿದ್ದು ಎಂಬ ವಿಶಾಲ ತತ್ವವನ್ನು ಸಾರಿದರು. ಈಗ ಇಲ್ಲಿ ನಿರ್ಮಾಣವಾಗುತ್ತಿರುವ ಕಾಲಭೈರವೇಶ್ವರ ದೇವಾಲಯವೂ ಸಹ ಕನ್ನಡಿಗರಿಗೆ ಒಂದು ಶ್ರದ್ಧಾ ಕೇಂದ್ರವಾಗಿ, ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂದು ತಿಳಿಸಿದರು.
