ಕೆನಡಾ ಸಂಸತ್‌ನಲ್ಲಿ ಮೊಳಗಿದ ಕನ್ನಡದ ಕಹಳೆ : ಕನ್ನಡದಲ್ಲೇ ಮಾತನಾಡಿದ ಕನ್ನಡಿಗ ಸಂಸದ ಚಂದ್ರ ಆರ್ಯ – Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ಕೆನಡಾ ಸಂಸತ್‌ನಲ್ಲಿ ಮೊಳಗಿದ ಕನ್ನಡದ ಕಹಳೆ : ಕನ್ನಡದಲ್ಲೇ ಮಾತನಾಡಿದ ಕನ್ನಡಿಗ ಸಂಸದ ಚಂದ್ರ ಆರ್ಯ

ಪ್ರಪಂಚದಲ್ಲಿ ಇದೇ ಮೊದಲ ಬಾರಿಗೆ ವಿದೇಶದ ಸಂಸತ್ತಿನಲ್ಲಿ ಕನ್ನಡ ಭಾಷೆ

ಒಟ್ಟಾವಾ: ಭಾರತೀಯರು ಅದರಲ್ಲೂ ಕನ್ನಡಿಗರೊಬ್ಬರು ದೂರದ ಕೆನಡಾ ಸಂಸದರಾಗಿ ಆಯ್ಕೆಯಾಗಿರೋದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಅಂತಹದ್ರಲ್ಲಿ ಅದೇ ಕೆನಡಾ ದೇಶದ ಸಂಸತ್ತಿನಲ್ಲಿ ನಮ್ಮ ಮಾತೃಭಾಷೆ ಕನ್ನಡ ಭಾಷೆಯಲ್ಲೇ ಮಾತನಾಡುವ ಮೂಲಕ ಚಂದ್ರ ಆರ್ಯ ಅವರು ಕನ್ನಡ ನಾಡು, ಕನ್ನಡ ಭಾಷೆ, ಕನ್ನಡಿಗರ ಮೇಲಿನ ತಮ್ಮ ಪ್ರೀತಿ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಚಂದ್ರ ಆರ್ಯ ಅವರು ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮದವರು. ಇವರು ಕೆನಡಾ ದೇಶದ ಸಂಸದರಾಗಿ ಆಯ್ಕೆಯಾಗಿ ಅತ್ಯುತ್ತಮ ಕೆಲಸ ನಿವರ್ಹಿಸುತ್ತಿದ್ದಾರೆ. ಚಂದ್ರ,ಆರ್ಯ ಅವರು ಕೆನಡಾದಲ್ಲಿ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕೆನಡಾ ದೇಶದ ಸಂಸತ್ತಿನಲ್ಲಿ ಮಾತನಾಡುವಾಗ ತಮ್ಮ ಮಾತೃಭಾಷೆ ಕನ್ನಡದಲ್ಲೇ ಮಾತನಾಡುವ ಮೂಲಕ ಚಂದ್ರ ಆರ್ಯ ಅವರು ಎಲ್ಲರ ಗಮನ ಸೆಳೆದಿದ್ದಾರೆ.

ಈ ಬಗ್ಗೆ ಸ್ವತಃ ಚಂದ್ರ ಆರ್ಯ ಅವರು ಟ್ವೀಟ್ ಮಾಡಿದ್ದು, ನಾನು ಕೆನಡಾ ಸಂಸತ್ತಿನಲ್ಲಿ ನನ್ನ ಮಾತೃಭಾಷೆಯಲ್ಲಿ ಮಾತನಾಡಿದ್ದೇನೆ. ಪುರಾತನ ಇತಿಹಾಸವುಳ್ಳ ಸುಂದರವಾದ ನಮ್ಮ ಕನ್ನಡ ಭಾಷೆಯನ್ನ, 5 ಕೋಟಿ ಜನ ಮಾತನಾಡುತ್ತಾರೆ. ಪ್ರಪಂಚದಲ್ಲಿ ಇದೇ ಮೊದಲ ಬಾರಿಗೆ ವಿದೇಶದ ಸಂಸತ್ತಿನಲ್ಲಿ ಕನ್ನಡ ಭಾಷೆಯ ಮೂಲಕ ಮಾತನಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಕೆನಡಾ ಸಂಸತ್ತಿನಲ್ಲಿ ಮಾತನಾಡಿರುವ ಚಂದ್ರ ಆರ್ಯ ಅವರು, ಮಾನ್ಯ ಸಭಾಪತಿ ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದು ನನಗೆ ಸಂತೋಷ ತಂದಿದೆ. ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ದ್ವಾರಳು ಗ್ರಾಮದ ವ್ಯಕ್ತಿಯೊರ್ವ ಕೆನಡಾದಲ್ಲಿ ಸಂಸದನಾಗಿ ಅಯ್ಕೆಯಾಗಿ ಕನ್ನಡದಲ್ಲಿ ಮಾತನಾಡುವುದು 5 ಕೋಟಿ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

ಕೆನಡಾ ದೇಶದ ಕನ್ನಡಿಗರು 2018ರಲ್ಲಿ ಕೆನಡಾ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು. ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ ಹಾಗೂ ನಟ ಸಾರ್ವಭೌಮ ಡಾ.ರಾಜ್‍ಕುಮಾರ್ ಹಾಡಿರುವ ‘ಎಲ್ಲಾದಾರೂ ಇರು ಎಂತಾದರೂ ಇರು. .ಎಂದೆಂದಿಗೂ ನೀ ಕನ್ನಡವಾಗಿರು’ ಎಂದು ಹೇಳಿ ತಮ್ಮ ಮಾತು ಮುಗಿಸಿದ್ದಾರೆ. ಚಂದ್ರ ಆರ್ಯ ಅವರ ಭಾಷಾ ಪ್ರೇಮ ಕಂಡು ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply