ಗೃಹ ಸಚಿವರ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ : ಬಿಜೆಪಿ ಮುಖಂಡನ ಬಂಧನ -Vishwanews24

Featured, ರಾಜ್ಯ ನ್ಯೂಸ್

ಗೃಹ ಸಚಿವರ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ : ಬಿಜೆಪಿ ಮುಖಂಡನ ಬಂಧನ -Vishwanews24

ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿದ್ದ ಬಿಜೆಪಿ ಮುಖಂಡನನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಮತ್ತು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಶಿವಮೊಗ್ಗ ಮೂಲದ ಭವಾನಿ ರಾವ್‌ ಮೋರೆ(37) ಬಂಧಿತ ಆರೋಪಿಯಾಗಿದ್ದು, ಈತ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ವಿಸ್ತಾರಕ ಕೂಡ ಆಗಿದ್ದ. ಆರೋಪಿಯು ವಿಜಯನಗರ ನಿವಾಸಿ ಹಾಗೂ ಕರ್ನಾಟಕ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಓನರ್ಸ್‌ ವಿಮೆನ್‌ ಎಂಪ್ಲಾಯೀಸ್‌ ಸರ್ವಿಸ್‌ ಅಸೋಸಿಯೇಷನ್‌ ಜಂಟಿ ಕಾರ್ಯದರ್ಶಿ ಸುರೇಶ್‌ ಎಂಬವರಿಗೆ 25 ಲಕ್ಷ ರೂ. ವಂಚಿಸಿದ್ದ. ಈ ಸಂಬಂಧ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಇತ್ತೀಚೆಗೆ ನಗರದಲ್ಲಿರುವ ಲೇಡಿಸ್‌ ಸರ್ವಿಸ್‌ ಬಾರ್‌ಗಳನ್ನು ಮುಚ್ಚುವಂತೆ ನಗರ ಪೊಲೀಸ್‌ ಆಯುಕ್ತರು ಆದೇಶಿಸಿದ್ದು, ಎರಡು ದಿನಗಳ ಕಾಲ ಬಾರ್‌ಗಳನ್ನು ಮುಚ್ಚಲಾಗಿತ್ತು. ಈ ಮಧ್ಯೆ ಆರೋಪಿ, ಸುರೇಶ್‌ ಬಗ್ಗೆ ತಿಳಿದುಕೊಂಡು, ಅ. 23 ರಂದು ರೆಸಿಡೆನ್ಸಿ ರಸ್ತೆಯಲ್ಲಿರುವ ಸುರೇಶ್‌ ಅವರ ಬಾರ್‌ಗೆ ತೆರಳಿದ್ದಾನೆ. ಆಗ ಆರೋಪಿ, ತಾನು ಶಿವಮೊಗ್ಗ ಮೂಲದ ಬಿಜೆಪಿ ಮುಖಂಡನಾಗಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ ಎಲ್ಲ ಸಚಿವರು, ಬಿಜೆಪಿ ಮುಖಂಡರು ಪರಿಚಯವಿದ್ದಾರೆ ಎಂದು, ಅವರೊಂದಿಗೆ ತೆಗೆಸಿಕೊಂಡಿರುವ ಫೋಟೊಗಳನ್ನು ತೋರಿಸಿ ನಂಬಿಸಿದ್ದಾನೆ. ಅಲ್ಲದೆ, ‘ಪೊಲೀಸರಿಂದ ಆಗಾಗ್ಗೆ ತೊಂದರೆಯಾಗುತ್ತಿದೆ. ನೀವು ಮನಸ್ಸು ಮಾಡಿದರೆ ನಾನು ನಿಮಗೆ ಯಾರಿಂದಲೂ ತೊಂದರೆಯಾಗದ ರೀತಿಯಲ್ಲಿ ಬಾರ್‌ಗಳನ್ನು ನಡೆಸಿಕೊಂಡು ಹೋಗುವಂತೆ ಅವಕಾಶ ಕಲ್ಪಿಸುತ್ತೇನೆ. ಅದಕ್ಕಾಗಿ 1.25 ಕೋಟಿ ರೂ. ಕೊಟ್ಟರೆ ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತೇನೆ’ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದ.

ಅಲ್ಲದೇ, ಅಸೋಸಿಯೇಷನ್‌ ಜತೆ ಚರ್ಚಿಸಿ ತಿಳಿಸಿ ಎಂದು ಸಲಹೆ ಕೂಡ ನೀಡಿದ್ದ ಎಂದು ಸುರೇಶ್‌ ದೂರಿನಲ್ಲಿ ತಿಳಿಸಿದ್ದಾರೆ. ಆನಂತರ ಸುರೇಶ್‌ ಅಸೋಸಿಯೇಷನ್‌ನ 44 ಮಂದಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಒಟ್ಟು 1.25 ಕೋಟಿ ರೂ.ಗಳನ್ನು ಯುಬಿ ಸಿಟಿಯಲ್ಲಿರುವ ಓಕ್‌ವುಡ್‌ ಹೋಟೆಲ್‌ನಲ್ಲಿ ಆರೋಪಿಗೆ ನೀಡಿದ್ದರು. ಬಳಿಕ ಈ ವ್ಯಕ್ತಿ ಮಾತು ಬದಲಿಸಿದ್ದ. ಆಗ ಸಂಶಯಗೊಂದು ವಿಚಾರಿಸಿದಾಗ 1 ಕೋಟಿ ರೂ. ವಾಪಸ್‌ ನೀಡಿದ್ದಾನೆ. ಉಳಿದ 25 ಲಕ್ಷ ಕೊಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಆರೋಪಿಯ ವಿಚಾರಣೆ ಸಂದರ್ಭದಲ್ಲಿ ಈ ಹಿಂದೆಯೂ ಸಾಕಷ್ಟು ಮಂದಿಗೆ ಬಿಜೆಪಿ ಮುಖಂಡರು, ಸಚಿವರ ಹೆಸರಿನಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.