ಜನರೇಷನ್ ಗ್ಯಾಪ್‌ನಿಂದಾಗಿ 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲು : ರಾಹುಲ್

Featured, ರಾಷ್ಟ್ರ ನ್ಯೂಸ್

ಲಂಡನ್: ಜನರೇಷನ್ ಗ್ಯಾಪ್‌ನಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ 2014ರ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಾಗಿತ್ತು ಎಂದು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಜನರೇಷನ್ ನೆಕ್ಸ್ಟ್‌ ವರ್ಸಸ್‌ ಓಲ್ಡ್‌ ಗಾರ್ಡ್ ನಡುವಿನ ಘರ್ಷಣೆ ಹಾಗೂ ಯುಪಿಎ ಸರಕಾರದ ಸಂಘಟನಾತ್ಮಕ ಅವ್ಯವಸ್ಥೆಯಿಂದಾಗಿ ಚುನಾವಣೆಯಲ್ಲಿ ಸೋಲಲು ಪ್ರಮುಖ ಕಾರಣ ಎಂದು ಸಹ ರಾಹುಲ್ ಹೇಳಿದ್ದಾರೆ.

ಲಂಡನ್ ಸ್ಕೂಲ್ ಆಫ್‌ ಎಕನಾಮಿಕ್ಸ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ರಾಹುಲ್, ಪಕ್ಷದಲ್ಲಿ ಅನುಭವವಿರುವ ಹಿರಿಯ ರಾಜಕಾರಣಿಗಳಿದ್ದು, ಅಭಿವೃದ್ಧಿಯಾಗುತ್ತಿರುವ ಯುವಕರು ಸಹ ಇದ್ದಾರೆ. ಕೆಲವು ಹಿರಿಯ ವ್ಯಕ್ತಿಗಳಲ್ಲಿ ಸಾಕಷ್ಟು ಮೌಲ್ಯವಿರುವುದರಿಂದ ಹಳೆಯದನ್ನು ಮರೆಯುವುದು ಸಾಧ್ಯವಿಲ್ಲ. ಹೀಗಾಗಿ, ವರ್ತಮಾನವು ಭವಿಷ್ಯತ್ ಹಾಗೂ ಭೂತ ಕಾಲ ಎರಡೂ ವಿಲೀನವಾಗಿರಬೇಕು. ಇದೇ ಕಾರಣದಿಂದ 2014ರಲ್ಲಿ ಕಾಂಗ್ರೆಸ್ ತೊಂದರೆ ಅನುಭವಿಸಬೇಕಾಯಿತು. ಹಿರಿಯ ಪೀಳಿಗೆ ಹಾಗೂ ಯುವಕ ಪೀಳಿಗೆ ನಡುವಿನ ಆಂತರಿಕ ಜಗಳ ನಡೆಯುತ್ತಿದ್ದದ್ದು ನಮ್ಮ ಗಮನಕ್ಕೆ ಬಂದಿದೆ ಎಂದು ವಿದ್ಯಾರ್ಥಿಗಳೊಂದಿಗೆ ನಡರೆದ ಸಂವಾದದಲ್ಲಿ ಹೇಳಿಕೊಂಡಿದ್ದಾರೆ.

ಜನರೇಷನ್ ಗ್ಯಾಪ್‌ ನಡುವಿನ ಅಂತರವನ್ನು ತಡೆಯಲು ತಾನು ಪ್ರಯತ್ನ ಪಡುತ್ತಿದ್ದೇನೆ. ಉದಾಹರಣೆಗೆ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಈ ಪ್ರಯತ್ನಗಳು ನಡೆಯುತ್ತಿವೆ ಎಂದು ಸಹ ಹೇಳಿಕೊಂಡಿದ್ದಾರೆ. ರಾಹುಲ್ ಅಧಿಕೃತವಾಗಿ ಪಕ್ಷದ ನಾಯಕತ್ವ ವಹಿಸಿಕೊಳ್ಳುವ ಮುನ್ನ ಹಾಗೂ ಅವರ ತಾಯಿ ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷರಾಗಿದ್ದಾಗ ಪಕ್ಷದಲ್ಲಿ ಗುಂಪುಗಾರಿಕೆ ಹೆಚ್ಚಾಗಿತ್ತು. ಹೀಗಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ರಾಹುಲ್ ಗಾಂಧಿಯ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಜತೆಗೆ, ಈ ವರ್ಷ ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎನಿಸಿಕೊಂಡಿದೆ.

ಇನ್ನು, ದುರ್ಬಲ ಸಂವಹನದಿಂದಾಗಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ರೀತಿ ಕಾಂಗ್ರೆಸ್ ಪಕ್ಷ ಜನರಿಗೆ ಸರಿಯಾದ ಸಂದೇಶ ನೀಡಲು ವಿಫಲವಾಯಿತು. ಅಲ್ಲದೆ, 10 ವರ್ಷ ಪಕ್ಷ ಅಧಿಕಾರದಲ್ಲಿದ್ದಾಗ ಅಹಂಕಾರದಿಂದಾಗ ಪಕ್ಷ ಸೊರಗಿದೆ. ಇದರಿಂದಾಗಿಯೂ ಪಕ್ಷಕ್ಕೆ ಸೋಲುಂಟಾಯಿತು ಎಂಬುದನ್ನು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ. ಇನ್ನೊಂದೆಡೆ, ಸಾಮಾನ್ಯ ಕೈದಿಯಂತೆ ವಿಜಯ್‌ ಮಲ್ಯನನ್ನು ಸಹ ಅದೇ ಜೈಲಿನಲ್ಲಿ ಇಡಬೇಕು ಎಂದು ಲಂಡನ್‌ನಲ್ಲಿ ಭಾರತೀಯ ಮಾಧ್ಯಮಕ್ಕೆ ಕಾಂಗ್ರೆಸ್ ಅಧ್ಯಕ್ಷ ತಿಳಿಸಿದ್ದಾರೆ. ಜತೆಗೆ, ಆರ್‌ಎಸ್‌ಎಸ್‌ ಹಾಗೂ ಮುಸ್ಲಿಂ ಬ್ರದರ್‌ಹುಡ್‌ ನಡುವೆ ಹೋಲಿಕೆ ಮಾಡಿದ್ದನ್ನು ಸಹ ರಾಹುಲ್ ಸಮರ್ಥಿಸಿಕೊಂಡಿದ್ದಾರೆ.