ದಕ್ಷಿಣ ಕನ್ನಡದಲ್ಲಿ ಭಾರತ್ ಬಂದ್ ಗೆ ಬೆಂಬಲ ನೀಡದ ಖಾಸಗಿ ಬಸ್ ಮಾಲೀಕರು..
ಮಂಗಳೂರು, : ನಾಳೆ ಜನವರಿ 8 ಮತ್ತು 9 ರಂದು ಕರೆ ನೀಡಲಾಗಿರುವ ಭಾರತ್ ಬಂದ್ ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಿಕ್ಷಾ ಚಾಲಕರ ಸಂಘ, ಅಸಂಘಟಿತ ಸಾರಿಗೆ ಕಾರ್ಮಿಕರ ಸಂಘಟನೆ ಈಗಾಗಲೇ ಬೆಂಬಲ ಸೂಚಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಮಾಲೀಕರು ಬೆಂಬಲ ನೀಡದಿರಲು ತೀರ್ಮಾನಿಸಿದ್ದಾರೆ.
ಈ ಕುರಿತು ಖಾಸಗಿ ಬಸ್ ಮಾಲೀಕರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಮತ್ತು ನಾಡಿದ್ದು ಮಂಗಳೂರು ಸೇರಿದಂತೆ ಜಿಲ್ಲೆಯ ಇತರೆಡೆ ಎಂದಿನಂತೆ ಖಾಸಗಿ ಬಸ್ ಸಂಚಾರ ಇರಲಿದೆ.
ಮೋಟರ್ ಟ್ರಾನ್ಸ್ ಪೋರ್ಟ್ ಆಂಡ್ ಎಂಜಿನಿಯರಿಂಗ್ ವರ್ಕರ್ಸ್ ಯೂನಿಯನ್ ಬೆಂಬಲಿತ ಕಾರ್ಮಿಕ ಸಂಘಟನೆ, ದಕ್ಷಿಣ ಕನ್ನಡ ಜಿಲ್ಲಾ ಡಿ ವೈ ಎಫ್ ಐ ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘ ( ಹಸಿರು ಸೇನೆ), ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ( ಜೆ ಸಿ ಟಿ ಯು) , ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಪಿಂಚಣಿದಾರರ ಸಂಘ, ಅಖಿಲ ಭಾರತ ಬೀಡಿ ಫೆಡರೇಶನ್ (ಸಿ ಐ ಟಿ ಯು ) ಸೇರಿದಂತೆ ವಿವಿಧ ಸಂಘಟನೆಗಳು ನಾಳಿನ ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ.
