ದೇವೇಗೌಡರು ನೀಡಿರುವ ಕೊಡುಗೆಯನ್ನು ಸ್ಮರಿಸಿ ನಿಖಿಲ್ ನನ್ನು ಗೆಲ್ಲಿಸಿ :ಮತದಾರರಲ್ಲಿ ಕುಮಾರಸ್ವಾಮಿ ಮನವಿ – Vishwanews24

Featured, ರಾಜ್ಯ ನ್ಯೂಸ್

ಕೆಆರ್ ಪೇಟೆ, :ತಾಲೂಕಿನ ಅಭಿವೃದ್ಧಿಗೆ ಹೆಚ್.ಡಿ.ದೇವೇಗೌಡರು ನೀಡಿರುವ ಕೊಡುಗೆಯನ್ನು ಸ್ಮರಿಸಿ ಜನತೆ ನಿಖಿಲ್‍ಕುಮಾರಸ್ವಾಮಿಯನ್ನು ಗೆಲ್ಲಿಸಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಾಲೂಕಿನ ಮತದಾರರಲ್ಲಿ ಮನವಿ ಮಾಡಿದರು.

ಅವರು ತಾಲೂಕು ಕ್ರೀಡಾಂಗಣದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಆಯೋಜಿಸಿದ್ದ ಬೃಹತ್ ಪ್ರಚಾರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದರು.

ನನಗೆ ಎರಡು ಬಾರಿ ಹೃದಯದ ಚಿಕಿತ್ಸೆಯಾಗಿದೆ. ಎಷ್ಟು ದಿನ ಬದುಕಿರುತ್ತೇನೋ ಅದಕ್ಕಾಗಿ ನಿಖಿಲ್ ರಾಜಕೀಯಕ್ಕೆ ತರಬೇಕಾಯಿತು. ನಿಖಿಲ್‍ನನ್ನು ಈ ಬಾರಿ ಅಭ್ಯರ್ಥಿ ಮಾಡಬೇಕೆಂಬ ಇಚ್ಛೆ ಇರಲಿಲ್ಲ. ಜಿಲ್ಲೆಯ 8 ಶಾಸಕರು ಬಂದು ತೀವ್ರ ಒತ್ತಡ ಹೇರಿದ್ದರಿಂದ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.

ನಿಖಿಲ್‍ನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಕಳೆದ ಬಾರಿ 8 ಸ್ಥಾನಗಳನ್ನು ನೀಡಿ ಮುಖ್ಯಮಂತ್ರಿ ಮಾಡಲು ಕಾರಣರಾಗಿದ್ದೀರಿ. ಅದೇ ರೀತಿ ನನ್ನ ಮಗ ನಿಖಿಲ್‍ನನ್ನೂ ಹರಸುವಂತೆ ಮನವಿ ಮಾಡಿದರು.

ಜೆಡಿಎಸ್ ಪಕ್ಷ ಬದುಕಿರುವುದು ಮಾಧ್ಯಮಗಳಿಂದಲ್ಲ. ನಿಮ್ಮಂತಹ ಸಹಸ್ರಾರು ಕಾರ್ಯಕರ್ತರಿಂದ. ಮಾಧ್ಯಮಗಳು ನಾನು ಸಿಎಂ ಆದಾಗಿನಿಂದ ಕೆಳಗಿಳಿಸಲು ವಿರೋಧ ಪಕ್ಷಗಳಂತೆ ಭಾರೀ ಪ್ರಯತ್ನ ಮಾಡುತ್ತಿವೆ.

ಈ ವಾರ ಬೀಳುತ್ತೆ, ಮುಂದಿನ ವಾರ ಬೀಳುತ್ತೆ ಎಂದು ನಿರಂತರ ವರದಿ ಪ್ರಸಾರ ಮಾಡುತ್ತಲೇ ಬಂದಿವೆ. ಇದಕ್ಕೆ ನಾನು ಹೆದರುವುದಿಲ್ಲ. ಕಳೆದ ಬಾರಿ 58 ಸ್ಥಾನ, ಈಗ 37 ಸ್ಥಾನ ಪಡೆದು ನಿಮ್ಮೆಲ್ಲರ ಸಹಕಾರದಿಂದ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಮಾಧ್ಯಮಗಳ ವಿರುದ್ಧ ಸಿಎಂ ಹರಿಹಾಯ್ದರು.

ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಲು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ಒಂದಾಗಿದ್ದು, ನನಗೆ ಮುಖಭಂಗವನ್ನುಂಟು ಮಾಡಲು ಷಡ್ಯಂತ್ರ ನಡೆಸಿವೆ.

ಆದರೆ, ಮಂಡ್ಯ ಜಿಲ್ಲೆಯ ಜನರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಾಗೂ ರೈತರ ಸಮಸ್ಯೆಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ನನ್ನ ಕೈಬಿಡಲ್ಲ, ಆದ್ದರಿಂದ ನಿಖಿಲ್ ಗೆಲುವು ನಿಶ್ಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ನಾರಾಯಣಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್‍ಖಾನ್, ವಿಧಾನ ಪರಿಷತ್ ಮಾಜಿ ಉಪಸಭಾಪತಿ ಕೃಷ್ಣಾರೆಡ್ಡಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು, ಕೆಯುಐಡಿಎಫ್ ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೆಚ್.ಎಸ್.ವಿಶ್ವನಾಥ್, ಜಿಪಂ ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ, ಜಿಪಂ ಸದಸ್ಯರಾದ ಬಿ.ಎಲ್. ದೇವರಾಜು ಸೇರಿದಂತೆ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.