ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆದ ಆಯನೋತ್ಸವ ಹಾಗೂ ಸಿರಿ ಜಾತ್ರಾ ಮಹೋತ್ಸವ -Vishwanews24

Featured, ಉಡುಪಿ

ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆದ ಆಯನೋತ್ಸವ ಹಾಗೂ ಸಿರಿ ಜಾತ್ರಾ ಮಹೋತ್ಸವ -Vishwanews24

ಕಾರ್ಕಳ : ತಾಲೂಕಿನ ಬೆಳ್ಮಣ್ ಸಮೀಪದ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಂದಳಿಕೆ ಆಯನೋತ್ಸವ ಹಾಗೂ ಸಿರಿ ಜಾತ್ರಾ ಮಹೋತ್ಸವ ಭಾನುವಾರ ರಾತ್ರಿ ನಡೆಯಿತು.

ಮಾ. 28ರಂದು ನಂದಳಿಕೆ ಆಯನೋತ್ಸವ, ಸಿರಿ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ 8 ಗಂಟೆಯಿಂದ ಶ್ರೀ ಉರಿ ಬ್ರಹ್ಮ ದೇವರ ಸ್ವರ್ಣ ಪಾದುಕೆ, ಅಬ್ಬಗ-ದಾರಗರ ಚೆನ್ನೆ ಮಣೆಗಳ ಸಾಲಂಕೃತ ಮೆರವಣಿಗೆ ಪ್ರಾಕ್ತನ ಪದ್ಧತಿಯಂತೆ ಪರ್ಯಟಿಸಿ ಮಧ್ಯಾಹ್ನ ಶ್ರೀ ಆಲಡೆಯಲ್ಲಿ ಅಣ್ಣಪ್ಪ ದರ್ಶನ, ಹಸಿ ಮಡಲು ಚಪ್ಪರ ಕಟ್ಟೆ ಪೂಜಾ ಸೇವೆ, ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ, ಪ್ರಸಾದ ವಿತರಣೆ ನಡೆಯಿತು.

ಇದನ್ನೂ ಓದಿ : ವಿಟ್ಲ: ವಿವಾಹ ಸಮಾರಂಭಕ್ಕೆ ಬಂದಿದ್ದ ಬಾಲಕನ ಮೇಲೆ ಲೈಂಗಿಕ ಕಿರುಕುಳ -Vishwanews24

ರಾತ್ರಿ 9 ಗಂಟೆಯಿಂದ ನಂದಳಿಕೆ ಚಾವಡಿ ಅರಮನೆಯಿಂದ ಶ್ರೀ ಹೆಗ್ಡೆಯವರ ಆಗಮನದ ಪರಂಪರಾಗತ ಅದ್ದೂರಿ ಮೆರವಣಿಗೆ,ರಾತ್ರಿ 10.30 ರಿಂದ ಆಯನೋತ್ಸವ ಬಲಿ ಕೆರೆ ದೀಪೋತ್ಸವ “ಶ್ರೀ ಕೆರೆ ದೀಪ ಕಟ್ಟೆ ಪೂಜಾ ಮಹೋತ್ಸವ” ನಡೆಯಿತು. ರಾತ್ರಿ 11 ಗಂಟೆ ಬಳಿಕ ಸತ್ಯದ ಸಿರಿಗಳ ಮೂಲಕ್ಷೇತ್ರ ಶ್ರೀ ಆಲಡೆ ಸನ್ನಿಧಾನದಲ್ಲಿ ಶ್ರೀ ಸಿರಿ ಕುಮಾರ ಅಬ್ಬಗ-ದಾರಗ ದರ್ಶನಾವೇಶ ಪೂರ್ವಕ ಸೂರ್ಯೋದಯ ಪರ್ಯಂತ ಸಪ್ತ ಸತ್ಯಗಳ ಸಿರಿಗಳ “ನಂದಳಿಕೆ ಸಿರಿ ಜಾತ್ರೆ” ಪ್ರಾಚೀನ ವಿಧಿ ವೈಭವಗಳೊಂದಿಗೆ ನಡೆಯಿತು.

ಪ್ರಾತಃಕಾಲ 4 ಗಂಟೆಯಿಂದ ಬ್ರಹ್ಮ ಮಂಡಲಸೇವೆ ಬೆಳಗಿನ ಬಲಿ ಭೂತಬಲಿ ನಡೆಯಿತು. ಈ ಸಂದರ್ಭ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಅನುವಂಶೀಯ ಆಡಳಿತ ಮೊಕ್ತೇಸರ ನಂದಳಿಕೆ ಚಾವಡಿ ಅರಮನೆ ಎನ್. ಸುಂದರಾಮ ಹೆಗ್ಡೆ ಮಾತನಾಡಿ ಮಾ. 29ರಂದು ಊರ ಆಯನೋತ್ಸವ, ಮಾ. 30ರಂದು ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ , ರಾತ್ರಿ ಬಾಕಿಮಾರು ದೀಪೋತ್ಸವ, ಮಾ. 31ರಂದು ಬೆಳಿಗ್ಗೆ ಮಹಾರುದ್ರಯಾಗ, ರಾತ್ರಿ ಮೂಡು ಸವಾರಿ ಉತ್ಸವ, ಏ. 1 ರಂದು ಬೆಳಿಗ್ಗೆ ಶತರುದ್ರಾಭಿಷೇಕ, ದೇವರ ಮನ್ಮಹಾರಥೋತ್ಸವ, ರಾತ್ರಿ ಉತ್ಸವದಲ್ಲಿ ಕವಾಟ ಬಂಧನ, ಏ. 2ರಂದು ಕವಾಟೋದ್ಘಾಟನೆ, ತುಲಾಭಾರ ಸೇವೆ, ಅವಭೃತ ಧ್ವಜಾವರೋಹಣ ನಡೆಯಲಿದೆ. ಏ. 3ರಂದು ಮಹಾ ಸಂಪ್ರೋಕ್ಷಣೆ, ಮಂಗಲ ಮಂತ್ರಾಕ್ಷತೆ ನಡೆಯಲಿದೆ ಎಂದರು.

ಇದನ್ನೂ ಓದಿ :ಚುನಾವಣೆ ಮುಖ್ಯ ನಮಗೆ ಮೊದಲು ಎಲೆಕ್ಷನ್ ಮಾಡೋಣ : ಡಿಕೆ ಶಿ -Vishwanews24

ನಂದಳಿಕೆ ಚಾವಡಿ ಅರಮನೆಯ ಎನ್.ಸುಹಾಸ್ ಹೆಗ್ಡೆ, ಕೆದಿಂಜೆ ನಂದಳಿಕೆ ಗ್ರಾಮಸ್ಥರು ಉಪಸ್ಥಿತರಿದ್ದರು. ಶೃಂಗಾರಿ ಮೇಳ, ಡೊಳ್ಳು ಕುಣಿತ, ವೀರಗಾಸೆ, ಬೆಳ್ಗುದುರೆ ಪ್ರದಕ್ಷಿಣೆ, ಶೃಂಗಾರ ಶೋಭಿತಾ ಚಾವಡಿ ಆರಮನೆ, ರಾಜ ಚಾವಡಿಯ ಪರಂಪರಾಗತ ಮೆರವಣಿಗೆ, ತಾಲೀಮು ರಂಗ, ಕೀಲು ಕುದುರೆ ಕರಗ ನೃತ್ಯ, ಸುಡುಮದ್ದು ಸಡಗರ, ಅಬ್ಬರದ ಚೆಂಡೆವಾದನ, ಢಕ್ಕೆ ಕನ್ನಿಕಾ ನರ್ತನ ಸೇವೆ, ಹಾಲು ಬೆಳದಿಂಗಳ ಪರಮ ಪ್ರಶಾಂತತೆ ಯಲ್ಲಿ ನಂದಳಿಕೆ ಸಿರಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಇದನ್ನೂ ಓದಿ :ಮಂಗಳೂರು : 8.78 ಸೆಕೆಂಡ್ ನಲ್ಲಿ 100 ಮೀಟರ್ ಓಡಿ ಹೊಸ ದಾಖಲೆ ಬರೆದ ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ್ ಗೌಡ -Vishwanews24