ನನಗೆ ಎಂದೂ ನನ್ನ ಧರ್ಮವನ್ನು ಬದಲಾಯಿಸಬೇಕು ಎಂದು ಅನಿಸಿರಲಿಲ್ಲ, ನನ್ನ ಧರ್ಮದಲ್ಲಿ ನನಗೆ ನಂಬಿಕೆ ಇದೆ ; ನಾನು ಹಿಂದು ಹಾಗೂ ಪಾಕಿಸ್ತಾನಿ ಎನ್ನುವುದರ ಬಗ್ಗೆ ಹೆಮ್ಮೆ ಇದೆ : ದಿನೇಶ್ ಕನೇರಿಯಾ -Vishwanews24
ಕರಾಚಿ: ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿಷೇಧಕ್ಕೆ ಒಳಗಾಗಿರುವ ಪಾಕಿಸ್ತಾನದ ಲೆಗ್ ಸ್ಪಿನ್ನರ್ ದಿನೇಶ್ ಕನೇರಿಯಾ, ತಂಡದಲ್ಲಿ ಎಂದೂ ಮುತಾಂತರ ಆಗುವಂತೆ ನನ್ನ ಮೇಲೆ ಒತ್ತಡವಿರಲಿಲ್ಲ. ಆದರೆ, ಹಿಂದು ಎನ್ನುವ ಕಾರಣಕ್ಕೆ ನಾನು ಸಹ ಆಟಗಾರರಿಂದ ಟಾರ್ಗೆಟ್ ಆಗಿದ್ದು ನಿಜ ಎಂದು ಹೇಳಿದ್ದಾರೆ.
ಹಿಂದು ಆದ ಕಾರಣಕ್ಕೆ ಪಾಕಿಸ್ತಾನ ತಂಡದಲ್ಲಿ ದಿನೇಶ್ ಕನೇರಿಯಾರನ್ನು ಕೀಳಾಗಿ ಕಾಣುತ್ತಿದ್ದರು. ಅವರ ನಿರ್ವಹಣೆಗಳಿಗೆ ಶ್ರೇಯವನ್ನೇ ನೀಡುತ್ತಿರಲಿಲ್ಲ ಎಂದು ಅವರೊಂದಿಗೆ ಆಡಿದ್ದ ಆಟಗಾರ ಹಾಗೂ ಮಾಜಿ ವೇಗಿ ಶೋಯೆಬ್ ಅಖ್ತರ್ ಕಾರ್ಯಕ್ರಮವೊಂದರಲ್ಲಿ ಆರೋಪಿಸಿದ್ದರು. ಇದರ ಬೆನ್ನಲ್ಲಿಯೇ ಅಖ್ತರ್ ಹೇಳಿದ್ದ ಮಾತಿನಲ್ಲಿ ಸತ್ಯವಿದೆ ಎಂದಿರುವ ದಿನೇಶ್ ಕನೇರಿಯಾ, ತಮ್ಮ ಕೀಳಾಗಿ ಕಾಣುತ್ತಿದ್ದ ಆಟಗಾರರ ಹೆಸರನ್ನು ಬಹಿರಂಗ ಮಾಡುವುದಾಗಿ ಹೇಳಿದ್ದರು. ‘ಕೀಳಾಗಿ ಕಾಣುವಂಥ ವರ್ತನೆಗಳಿದ್ದವು. ಆದರೆ, ಇದನ್ನು ನಾನು ವಿವಾದ ಮಾಡುವ ಗೋಜಿಗೆ ಹೋಗಿರಲಿಲ್ಲ. ನಾನು ಅವರಿಂದ ದೂರ ಉಳಿಯುತ್ತಿದ್ದೆ. ನನ್ನ ನಿರ್ವಹಣೆ ಹಾಗೂ ಪಾಕಿಸ್ತಾನದ ಗೆಲುವಿನ ಬಗ್ಗೆ ಮಾತ್ರವೇ ಯೋಚನೆ ಮಾಡುತ್ತಿದ್ದೆ’ ಎಂದು ಸ್ಪಾಟ್ ಫಿಕ್ಸಿಂಗ್ಗಾಗಿ ಆಜೀವ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಕನೇರಿಯಾ ಹೇಳಿದ್ದಾರೆ.
ನಾನು ಹಿಂದು ಹಾಗೂ ಪಾಕಿಸ್ತಾನಿ ಎನ್ನುವುದರ ಬಗ್ಗೆ ಹೆಮ್ಮೆ ಇದೆ. ಈ ವಿಚಾರದಿಂದಾಗಿ ಪಾಕ್ ಕ್ರಿಕೆಟ್ ಕುಟುಂಬವನ್ನು ಕೆಟ್ಟದಾಗಿ ತೋರಿಸುವ ಪ್ರಯತ್ನ ಮಾಡಬೇಡಿ. ಯಾಕೆಂದರೆ, ಇಲ್ಲಿ ನನಗೆ ಬೆಂಬಲ ನೀಡಿದ ಸಾಕಷ್ಟು ಜನರಿದ್ದಾರೆ ಎಂದು ಹೇಳಿದ್ದಾರೆ. ಕ್ರಿಶ್ಚಿಯನ್ ಆಗಿದ್ದ ಯೂಸುಫ್ ಯೊಹಾನ, ಇಸ್ಲಾಂಗೆ ಮತಾಂತರವಾಗಿದ್ದರು ಎನ್ನುವ ಪ್ರಶ್ನೆಗೆ ಉತ್ತರಿಸಿದ ಕನೇರಿಯಾ, ‘ಯೂಸುಫ್ ಮತಾಂತರವಾಗಿರುವುದು ವೈಯಕ್ತಿಕ ನಿರ್ಧಾರ. ನನಗೆ ಎಂದೂ ನನ್ನ ಧರ್ಮವನ್ನು ಬದಲಾಯಿಸಬೇಕು ಎಂದು ಅನಿಸಿರಲಿಲ್ಲ. ಯಾಕೆಂದರೆ, ನನ್ನ ಧರ್ಮದಲ್ಲಿ ನನಗೆ ನಂಬಿಕೆ ಇದೆ’ ಎಂದಿದ್ದಾರೆ.
ಬೆಂಬಲ ನೀಡಿದ್ದ ಇಂಜುಮಾಮ್ ಮಾಜಿ ನಾಯಕ ಇಂಜುಮಾಮ್ ಉಲ್ ಹಕ್ ನನಗೆ ಅಪಾರ ಬೆಂಬಲ ನೀಡಿದ್ದರು. ನನ್ನನ್ನು ಮ್ಯಾಚ್ ವಿನ್ನರ್ ಎಂದು ಅವರು ಕರೆಯುತ್ತಿದ್ದರು ಎಂದು ಕನೇರಿಯಾ ಹೇಳಿದ್ದಾರೆ
