ಮಲ್ಪೆ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಪತ್ತೆ -Vishwanews24

Featured, ಉಡುಪಿ

ಉಡುಪಿ: ಕಳೆದ 4.5 ತಿಂಗಳಿನಿಂದ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟಿನ ಭಗ್ನಾವಶೇಷಗಳು ಪತ್ತೆಯಾಗಿದ್ದು ಇದನ್ನು ಇಂಡಿಯನ್ ನೇವಿ ಖಾತ್ರಿ ಪಡಿಸಿದೆ. ಮಹಾರಾಷ್ಟ್ರದ ಮಾಲ್ವನ್ ಕರಾವಳಿ ತೀರದಲ್ಲಿ ಇದು ಪತ್ತೆಯಾಗಿರುವ ಬಗ್ಗೆ ಇಂಡಿಯನ್ ನೇವಿ ತಿಳಿಸಿದ್ದು, ಏಳು ಮಂದಿ ಮೀನುಗಾರರು ಸಾವನ್ನಪ್ಪಿರುವ ಸಾಧ್ಯತೆಯಿದೆ.

ಮೀನುಗಾರರ ಪತ್ತೆ ಕಾರ್ಯಕ್ಕೆ ಶಾಸಕರಾದ ಕೆ ರಘುಪತಿ ಭಟ್ ಅವರು ನಿರಂತರ ಶ್ರಮಿಸುತ್ತಲೇ ಇದ್ದು, ಕಳೆದ ನಾಲ್ಕು ದಿನಗಳ ಹಿಂದೆ ಸ್ವತಃ ತಾವೇ ನೌಕಾದಳದ ಅಧಿಕಾರಿಗಳ ಜೊತೆ ಹಡಗಿನಲ್ಲಿ ಪತ್ತೆ ಕಾರ್ಯಕ್ಕೆ ತೆರಳಿದ್ದರು.

ಇದೀಗ ಮಹಾರಾಷ್ಟ್ರದ ಮಾಲ್ವಾನ್ ಎಂಬ ಪ್ರದೇಶದಲ್ಲಿ ನಾಪತ್ತೆಯಾದ ಮೀನುಗಾರರ ಬೋಟ್ ಪತ್ತೆಯಾಗಿದ್ದು, ಸ್ವತಃ ನೌಕಾದಳದ ಅಧಿಕಾರಿಗಳೇ ಖಚಿತ ಪಡಿಸಿದ್ದಾರೆ. 9 ಜನ ಮೀನುಗಾರರು ಮತ್ತು ಶಾಸಕ ರಘುಪತಿ ಭಟ್ ಅವರು ನೌಕಾಪಡೆಯ ವಿಶೇಷ ಹಡಗಿನಲ್ಲಿ ಕಾರ್ಯಾಚರಣೆಗೆ ತೆರಳಿದ್ದು ಇದೀಗ 64 ಮೀಟರ್ ಆಳದಲ್ಲಿ ಹಡಗಿನ ಅವಶೇಷಗಳು ಪತ್ತೆಯಾಗಿದೆ. ಇದನ್ನು ಸ್ವತಃ ನೌಕಾದಳದ ಅಧಿಕಾರಿಗಳು ಫೋಟೋ ಚಿತ್ರೀಕರಣ ಮಾಡಿದ್ದು ಪತ್ತೆಯಾದ ಅವಶೇಷಗಳು ಸುವರ್ಣ ತ್ರಿಭುಜ ಹಡಗಿನದ್ದೇ ಎಂದು ಧೃಢಪಡಿಸಿದ್ದಾರೆ.

ಡಿಸೆಂಬರ್ 13, 2018 ರಂದು ಸುವರ್ಣ ತ್ರಿಭುಜ ಬೋಟ್ ಏಳು ಜನ ಮೀನುಗಾರರನ್ನು ಹೊತ್ತು ಮೀನುಗಾರಿಕೆ ತೆರಳಿ ನಾಪತ್ತೆಯಾಗಿತ್ತು. ನಂತರ ಅವರ ಹುಡುಕಾಟಕ್ಕೆ ಪೊಲೀಸರು, ಇಂಡಿಯನ್ ನೇವಿ, ಕರಾವಳಿ ಕಾವಲು ಪಡೆ ಸೇರಿದಂತೆ ಮೀನುಗಾರರು ಪಯತ್ನ ನಡೆಸಿದ್ದರು.