ನಾ ಕೀಳುಭಾಷೆ ಬಲ್ಲೆ, ಆಡಲಾರೆ : ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ ಎಸ್‌, ಈಶ್ವರಪ್ಪ!

Featured, ರಾಜ್ಯ ನ್ಯೂಸ್
ಹಾವೇರಿ: ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಅವರು ಸ್ಪರ್ಧೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗೆ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ. ಎಸ್‌. ಈಶ್ವರಪ್ಪ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
”ಆ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸ್ಪರ್ಧಿಸುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಬಿ.ಎಸ್‌.ಯಡಿಯೂರಪ್ಪ ಪುತ್ರ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎನ್ನುತ್ತಿದ್ದಂತೆ, ಮಗನೇ ಬರಲಿ, ಅವರಪ್ಪನೇ ಬರಲಿ- ನಮ್ಮ ಗೆಲುವು ನಿಶ್ಚಿತ ಎಂದು ಸಿಎಂ ಸಿದ್ಧರಾಮಯ್ಯ ಲಘುವಾಗಿ ಮಾತನಾಡಿದ್ದಾರೆ. ಇದು ಮನಸ್ಸಿಗೆ ನೋವು ತಂದಿದೆ. ನಮಗೂ ಇದಕ್ಕಿಂತ ಕೀಳು ಮಟ್ಟದ ಭಾಷೆ ಬಳಸಲು ಗೊತ್ತಿದೆ,” ಎಂದು ತಿರುಗೇಟು ನೀಡಿದರು.

ಪಕ್ಷಕ್ಕೆ ದುಡಿದವರು ಚುನಾವಣೆಯಲ್ಲಿ ಟಿಕೆಟ್‌ ಕೇಳುವುದು ಅವರ ಹಕ್ಕು. ಇದನ್ನೇ ಬಂಡಾಯ, ಭಿನ್ನಮತ, ಪಕ್ಷ ವಿರೋಧಿ ಚಟುವಟಿಕೆ, ಅಶಿಸ್ತು ಎನ್ನಲಾಗದು. ಪರಿವರ್ತನಾ ರಾರ‍ಯಲಿಯಲ್ಲಿ ಘೋಷಣೆಯಾಗಿರುವ ಅಭ್ಯರ್ಥಿಗಳ ಹೆಸರು ಅಸಿಂಧು ಎಂದು ಖುದ್ದು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೇ ಹೇಳಿಕೆ ನೀಡಿದ್ದಾರೆ. ಈ ಹಂತದಲ್ಲಿ ವಿಧಾನ ಪರಿಷತ್‌ ಸದಸ್ಯ ಬೇವಿನಮರದ ಸೇರಿದಂತೆ ಟಿಕೆಟ್‌ಗೆ ಪಟ್ಟು ಹಿಡಿದವರೆಲ್ಲ ಭಿನ್ನಮತೀಯರು ಎಂದು ಪರಿಗಣಿಸಲಾಗದು ಎಂದರು.

ಬಿಜೆಪಿ ಗಂಗಾನದಿ: ಬಿಜೆಪಿ ಗಂಗಾನದಿಯಷ್ಟೇ ಪವಿತ್ರ. ನಮ್ಮ ಪಕ್ಷಕ್ಕೆ ಎಂಥವರೇ ಬಂದರೂ ಪರಿಶುದ್ಧರಾಗುತ್ತಾರೆ. ಇದು ತೆರೆದ ಮನೆ ಇಲ್ಲಿಗೆ ಬರುತ್ತೇವೆ ಎನ್ನುವವರಿಗೆ ಇಲ್ಲ ಎನ್ನಲಾಗದು. ಆದರೆ ಬರುವ ವ್ಯಕ್ತಿ ಲಕ್ಷಣಗಳು, ಅವರ ಕಾರ್ಯವೈಖರಿ ವಾಂತಿ ಬರುವಂತಿದ್ದರೆ ಹೇಗೆ ಎಲ್ಲವನ್ನೂ ಕಕ್ಕುತ್ತೆವೆಯೋ ಹಾಗೆಯೇ ವ್ಯಕ್ತಿಗತವಾಗಿ ಅಮಿತ್‌ ಶಾ ಅವರು ಜನಾರ್ಧನರೆಡ್ಡಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.