ಪಡುಬಿದ್ರಿ ಸಮುದ್ರ ತೀರದಲ್ಲಿ ಮತ್ತೆ ತೀವ್ರಗೊಂಡ ಕಡಲ್ಕೊರೆತ -Vishwanews24
ಪಡುಬಿದ್ರಿಯಲ್ಲಿ ಸಮುದ್ರ ತೀರದಲ್ಲಿ ಮತ್ತೆ ತೀವ್ರಗೊಂಡ ಕಡಲ್ಕೊರೆತ -Vishwanews24
ಪಡುಬಿದ್ರಿ : ಪಡುಬಿದ್ರಿಯಲ್ಲಿ ಮತ್ತೆ ಕಡಲ್ಕೊರೆತ ತೀವ್ರಗೊಂಡಿದ್ದು,ಇಲ್ಲಿನ ಕಾಡಿಪಟ್ಣ ಸಮುದ್ರ ತೀರದಲ್ಲಿರುವ ವೀಕ್ಷಣಾ ಗೋಪುರ,ವಿಶ್ರಾಂತಿ ಗೃಹ ಕಡಲೊಡಲು ಸೇರುವ ಎಲ್ಲಾ ಸಾಧ್ಯತೆಗಳಿವೆ.
ಕಳೆದ ಬಾರಿಯು ಈ ಪ್ರದೇಶದಲ್ಲಿ ಕಡಲ್ಕೊರೆತ ಉಂಟಾಗಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಾಣಗೊಂಡ ವೇದಿಕೆ, ವಿದ್ಯುತ್ ಕಂಬಗಳು,ಇಂಟರ್ಲಾಕ್ ಹಾಗು ತೆಂಗಿನ ಮರಗಳು ಸಮುದ್ರ ಪಾಲಾಗಿತ್ತು.ಆ ಸಮಯದಲ್ಲಿ ಕಡಲ್ಕೊರೆತ ಪ್ರದೇಶಗಳಿಗೆ ಕಂದಾಯ ಸಚಿವ ಆರ್ ಅಶೋಕ್ ಭೇಟಿ ನೀಡಿದ್ದು, ನಿರ್ಮಾಣ ಕಾಮಗಾರಿಗಳನ್ನು ತೆರವುಗೊಳಿಸಲು ಸೂಚಿಸಿದ್ದರು.ಆದರೂ ಈ ಭಾಗದಲ್ಲಿ ಪ್ರವಾಸೋದ್ಯಮ ಇಲಾಖೆ ಮೂಲಕ ಶೌಚಾಲಯ ನಿರ್ಮಿಸಲಾಗಿದೆ.ಈಗ ಕಡಲ್ಕೊರೆತ ಕಾಣಿಸಿಕೊಂಡಿರುವ ಅನತಿ ದೂರದಲ್ಲಿ ತಡೆಗೋಡೆ ಕಾಮಗಾರಿಯೂ ನಡೆದಿದೆ.ಅದರ ಕಲ್ಲುಗಳು ಸಮುದ್ರ ಪಾಲಾಗುತ್ತಿದೆ.ಈ ಪ್ರದೇಶದಲ್ಲಿ ಕಳೆದ ಒಂದು ವಾರಗಳಿಂದ ಕೊರೆತ ಕಾಣಿಸಿಕೊಂಡಿದ್ದು,ಹಲವು ತೆಂಗಿನ ಮರಗಳು ಸಮುದ್ರ ಪಾಲಾಗಿದೆ.ಇದೀಗ ಈ ಪ್ರದೇಶದಲ್ಲಿರುವ ವೀಕ್ಷಣಾ ಗೋಪುರ ವಿಶ್ರಾಂತಿ ಗೃಹ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.
ವೀಕ್ಷಣಾ ಗೋಪುರ ಉಳಿಸುವ ನಿಟ್ಟಿನಲ್ಲಿ ಬ್ಲೂ ಪ್ಲಾಗ್ ಬೀಚ್ನ ಕಾರ್ಮಿಕರು ವೀಕ್ಷಣಾ ಗೋಪುರದ ಬುಡದಲ್ಲೇ ಇದ್ದ ಮರಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಗೋಪುರದ ಸುತ್ತ ಹಾಕಲಾಗಿದ್ದು ಈಗಾಗಲೇ 50 ಕ್ಕೂ ಅಧಿಕ ಮರಳು ಚೀಲಗಳು ಸಮುದ್ರ ಪಾಲಾಗಿದೆ.ಈ ಬಗ್ಗೆ ಕಾಡಿಪಟ್ಣ ಮೊಗವೀರ ಮಹಾ ಸಭಾ ಅಧ್ಯಕ್ಷ ಅಶೋಕ್ ಸಾಲ್ಯಾನ್ ಮಾತನಾಡಿ ಸಂಬಂಧಿತ ಇಲಾಖೆ ಕೂಡಲೇ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.



