ಪರಮೇಶ್ವರ್ ವಿರುದ್ಧ ಕಿಡಿಕಾರಿದ ಎಂ.ಎಲ್.ಸಿ..: ಕಾಂಗ್ರೆಸ್ ನಲ್ಲಿ ಮತ್ತೆ ಭುಗಿಲೆದ್ದ ಅಸಮಾಧಾನ
ಜೆಡಿಎಸ್ ಕಾಂಗ್ರೆಸ್ ನೇತೃತ್ವದ ಸರಕಾರ ರಚನೆ ಆದ ಬಳಿಕ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದ್ದು. ಕೆ.ಪಿ.ಸಿ.ಸಿ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರು ತಮ್ಮ ನಾಯಕರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ತೋರ್ಪಡಿಸುತ್ತಿದ್ದಾರೆ. ಜೆಡಿಎಸ್ ಜೊತೆ ಸೇರಿ ಸರಕಾರ ರಚನೆ ಮಾಡುವುದರಿಂದ ಆರಂಭವಾಗಿ ಸಚಿವ ಸಂಪುಟ ರಚನೆ ವರೆಗೆ ರಾಜ್ಯದಲ್ಲಿ ನಡೆಯುತ್ತಿರುವ ಹೈಡ್ರಾಮಾದ ವಿರುದ್ಧ ಕಾಂಗ್ರೆಸ್ ನ ನಿಷ್ಟಾವಂತ ಕಾರ್ಯಕರ್ತರು ತಮ್ಮ ಹೈಕಮಾಂಡ್ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದು ಈಗ ಕಾಂಗ್ರೆಸ್ ನ ಎಂ.ಎಲ್.ಸಿ ಯೊಬ್ಬರು ಉಪಮುಖ್ಯಮಂತ್ರಿಗಳ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿಯವರು ಚೆನ್ನಪಟ್ಟಣ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಿದ್ದರು. ಆದರೆ ನಿಯಮಾನುಸಾರ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕಿದ್ದರಿಂದ ಕುಮಾರಸ್ವಾಮಿಯವರು ರಾಮನಗರದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಈ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಇನ್ನಾರು ತಿಂಗಳಿನಲ್ಲಿ ಚುನಾವಣೆ ನಡೆಯಲಿದ್ದು ಈ ಉಪಚುನಾವಣೆಗೆ ಕಾಂಗ್ರೆಸ್ ಜೆಡಿಎಸ್ ಗೆ ಬೆಂಬಲ ನೀಡುತ್ತಿರುವುದರ ವಿರುದ್ಧ ರಾಮನಗರ ಕಾಂಗ್ರೆಸ್ ನಲ್ಲಿ ಆಕ್ರೋಶ ಭುಗಿಲೆದ್ದಿದೆ.
ಈ ಬಗ್ಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಎಂ.ಎಲ್.ಸಿ ಲಿಂಗಪ್ಪ ಅವರು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಪರಮೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದು ” ಪರಮೇಶ್ವರ್ ಅವರು ನಮ್ಮ ಅಧ್ಯಕ್ಷ ಎಂದು ಹೇಳಿಕೊಳ್ಳಲು ನಮಗೆ ನಾಚಿಕೆ ಆಗುತ್ತೆ, ಅವರಿಗೆ ಅಷ್ಟೇ ಸಾಕು ಜೀವನದಲ್ಲಿ ಬೇರೆ ಏನೂ ಬೇಡ ಎಂದು ಅನಿಸುತ್ತಿದೆ ಏನೋ ಅವರು ತುಂಬಾ ಮೆರೆಯುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷವನ್ನು ಹಾಗೂ ನಮ್ಮನ್ನು ಮಾರಾಟ ಮಾಡಲು ನಿಂತಿದ್ದಾರೆ. ಇಂತಹ ಅಧ್ಯಕ್ಷರ ಜೊತೆ ಇರುವುದರ ಬದಲು ರಾಜಕೀಯ ನಿವೃತ್ತಿ ಪಡೆಯುತ್ತೇವೆ” ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ವಿರುದ್ಧ ಲಿಂಗಪ್ಪ ಅವರು ಕಿಡಿಕಾರಿದ್ದಾರೆ.
