ಬಹುಕೋಟಿ ವಂಚನೆ ಪ್ರಕರಣ – ಐಎಂಎ ಕಂಪನಿ ಮಾಲೀಕ ಮನ್ಸೂರ್​ ಖಾನ್​ ಬಂಧನ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು, : ಹಲಾಲ್ ಹೂಡಿಕೆ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ನನ್ನು ಹೊಸದಿಲ್ಲಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ದುಬೈನಲ್ಲಿ ತಲೆಮರೆಸಿಕೊಂಡಿದ್ದ ಮನ್ಸೂರ್​ ಖಾನ್​ ಭಾರತಕ್ಕೆ ಆಗಮಿಸುತ್ತಿರುವ ಖಚಿತ ಮಾಹಿತಿನ್ನು ಆಧರಿಸಿ ಎಸ್​ಐಟಿ ಅಧಿಕಾರಿಗಳು ಗುರುವಾರ ಮಧ್ಯರಾತ್ರಿ 1.50 ಕ್ಕೆ ಮನ್ಸೂರ್​ನನ್ನು ವಶಕ್ಕೆ ಪಡೆದಿದ್ದಾರೆ.

ಸದ್ಯ ಆತನನ್ನು ವಶಕ್ಕೆ ತೆಗೆದುಕೊಂಡು ರಕ್ಷಣೆ ನೀಡಿರುವ ಎಸ್‌ಐಟಿ ತಂಡ ದಿಲ್ಲಿಯಲ್ಲೇ ಬೀಡು ಬಿಟ್ಟಿದೆ. ಸದ್ಯ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿರುವ ಎಸ್‌ಐಟಿ ಶೀಘ್ರವೇ ಆತನನ್ನು ಬೆಂಗಳೂರಿಗೆ ಕರೆ ತರುವ ನಿರೀಕ್ಷೆಯಿದೆ. ಎಸ್ಐಟಿ ಮನ್ಸೂರ್ ಖಾನ್ ವಿರುದ್ಧ ಲುಕ್ ಔಟ್ ಸರ್ಕ್ಯೂಲರ್ ಹೊರಡಿಸಿತ್ತು.

ದುಬೈನಲ್ಲಿ ಅಡಗಿಕೊಂಡು ಅಲ್ಲಿಂದಲೇ ವೀಡಿಯೊ ಸಂದೇಶಗಳನ್ನು ಬಿಡುಗಡೆ ಮಾಡುತ್ತಿದ್ದ ಮನ್ಸೂರ್, ತನಗೆ ರಕ್ಷಣೆ ನೀಡುವುದಾದಲ್ಲಿ 24 ಗಂಟೆಯೊಳಗೆ ಭಾರತಕ್ಕೆ ವಾಪಸ್ ಬರುವುದಾಗಿ ಮೊನ್ನೆಯಷ್ಟೇ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದ. ಅದರಂತೆ, ರಕ್ಷಣೆ ಕೊಡುತ್ತೇವೆ ಎಂದು ಆತನಿಗೆ ಭರವಸೆ ನೀಡಿ ಭಾರತಕ್ಕೆ ಬರಲು ಸಿಟ್ ಸೂಚಿಸಿತ್ತು.