ಬಿಜೆಪಿಗೆ ಮತ ನೀಡುವವರು ಮುಸ್ಲಿಮರಾಗಿರಲು ಸಾಧ್ಯವೇ ಇಲ್ಲ: ಜಮೀರ್ ಅಹ್ಮದ್

Featured, ರಾಜ್ಯ ನ್ಯೂಸ್

ಹಾವೇರಿ: ‘ಬಿಜೆಪಿಗೆ ಮತ ನೀಡುವವರು ಮುಸ್ಲಿಂ ಆಗಿರಲು ಸಾಧ್ಯವಿಲ್ಲ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್ ಹೇಳಿದರು.

‘ಬಿಜೆಪಿಗೆ ಮುಸ್ಲಿಮರು ಮತ ಹಾಕುವುದು ದೂರದ ಮಾತು. ಈ ಬಗ್ಗೆ ಆಲೋಚನೆ ಮಾಡುವುದೂ ತಪ್ಪು’ ಎಂದು ಮಂಗಳವಾರ ನಗರಸಭೆಯ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯಕ್ರಮದಲ್ಲಿ ನುಡಿದರು.

‘ಬಿಜೆಪಿಯು ನಮ್ಮನ್ನು ಟಾರ್ಗೆಟ್ ಮಾಡುತ್ತದೆ. ಆದರೆ, ಕಾಂಗ್ರೆಸ್ ಜಾತ್ಯತೀತ ಪಕ್ಷ. ಬಿಜೆಪಿಗೆ ವೋಟು ಹಾಕಿ ಸಮಸ್ಯೆ ಉಂಟು ಮಾಡಿ ಕೊಳ್ಳುತ್ತೀರೋ, ಇಲ್ಲ ಕಾಂಗ್ರೆಸ್‌ಗೆ ವೋಟು ಹಾಕಿ ಅಭಿವೃದ್ಧಿಗೊಳ್ಳುತ್ತೀರೋ’ ಎಂದು ಪ್ರಶ್ನಿಸಿದರು.

‘ಬಿಜೆಪಿಯಿಂದ ಮುಸ್ಲಿಂ ಅಭ್ಯರ್ಥಿಯೇ ಸ್ಪರ್ಧಿಸಿದರೂ, ಆತ ಮುಸ್ಲಿಂ ಎಂದು ನಾನು ಒಪ್ಪಿಕೊಳ್ಳುವುದೇ ಇಲ್ಲ. ಆತನನ್ನು ನಂಬಲೂ ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಬಿಜೆಪಿಗೆ ಓಟು ಹಾಕಬೇಡಿ. ಆತನನ್ನೂ ‘ಅಲ್ಲಾ’ ಕೂಡಾ ಗಮನಿಸುತ್ತಾರೆ. ಆ ನಿಜವಾದ ಮುಸ್ಲಿಂ ಆಗಿದ್ದರೆ, ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಬೆಂಬಲಿಸುತ್ತಾನೆ’ ಎಂದರು.

ಇದಕ್ಕೂ ಮೊದಲು ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೇ ನಮ್ಮೆಲ್ಲರ ನಾಯಕರು. 2022ರ ಚುನಾವಣೆಯ ಬಳಿಕ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ. ಈಗಿನ ಸಮ್ಮಿಶ್ರ ಸರ್ಕಾರವೂ ಐದು ವರ್ಷ ಪೂರೈಸಲಿದೆ’ ಎಂದರು.